ಮೀರಪುರ್: ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
ಭಾರತದ ವಿರುದ್ಧ ಟಾಸ್ ಗೆದ್ದಿರುವ ಬಾಂಗ್ಲಾದೇಶ, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಈ ಹಿಂದೆ ನ್ಯೂಜಿಲೆಂಡ್ನಲ್ಲಿ ನಡೆದ ಏಕದಿನ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಅವರು ತಂಡಕ್ಕೆ ಮರಳಿದ್ದಾರೆ.
ಭಾರತ ಏಕದಿನ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಸ್ಥಾನ ಉಳಿಸಿಕೊಳ್ಳಲು ಶಿಖರ್ ಧವನ್ ಮತ್ತು ಕೆ.ಎಲ್. ರಾಹುಲ್ ಅವರಿಗೆ ಬಾಂಗ್ಲಾದೇಶ ಎದುರಿನ ಸರಣಿಯು ಪರೀಕ್ಷಾ ಕಣವಾಗಿದೆ. ಈ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಯುವ ಆಟಗಾರರಾದ ರಜತ್ ಪಾಟೀದಾರ್, ರಾಹುಲ್ ತ್ರಿಪಾಠಿ, ವೇಗಿ ಉಮ್ರಾನ್ ಮಲೀಕ್ ಸ್ಥಾನ ಗಿಟ್ಟಿಸಿದ್ದಾರೆ. ಗಾಯಗೊಂಡಿರುವ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬೂಮ್ರಾ ಅವರ ಗೈರಿನಲ್ಲಿ ದೀಪಕ್ ಚಾಹರ್ ಹಾಗೂ ಸಿರಾಜ್ ಅವರಿಗೆ ಕಣಕ್ಕಿಳಿದಿದ್ದಾರೆ. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸ್ಪಿನ್ ಬೌಲರ್ ಆಗಿ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಪಾಕ್ ವಿರುದ್ಧ ಮೊದಲ ಟೆಸ್ಟ್: ಮೊದಲ ದಿನವೇ 500ಕ್ಕೂ ಅಧಿಕ ರನ್, 112 ವರ್ಷಗಳ ದಾಖಲೆ ಮುರಿದ ಇಂಗ್ಲೆಂಡ್, ಜಗತ್ತಿನ ಮೊದಲ ತಂಡ!
ಬಾಂಗ್ಲಾದೇಶ ತಂಡವು ಈಚೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಎದುರು ಸೋತಿತ್ತು. ಏಕದಿನ ತಂಡಕ್ಕೆ ನಾಯಕತ್ವ ವಹಿಸಿಕೊಂಡಿರುವ ಲಿಟನ್ ದಾಸ್ ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಆದರೆ ತಂಡದಲ್ಲಿ ಪ್ರಮುಖ ಬೌಲರ್ ತಸ್ಕಿನ್ ಅಹಮದ್ ಗಾಯಗೊಂಡು ವಿಶ್ರಾಂತಿ ಪಡೆದಿದ್ದಾರೆ. ಇದರಿಂದಾಗಿ ಮುಸ್ತಫಿಜುರ್ ರೆಹಮಾನ್ ಮೇಲೆ ಒತ್ತಡ ಹೆಚ್ಚಲಿದೆ.
ಏಕದಿನ ಸರಣಿಗೆ ಪಂತ್ ಅಲಭ್ಯ
ಇನ್ನು ಗಾಯಗೊಂಡಿರುವ ರಿಷಬ್ ಪಂತ್ ಬಾಂಗ್ಲಾ ವಿರುದ್ಧ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ.
ತಂಡಗಳು ಇಂತಿವೆ:
ಭಾರತ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಕುಲದೀಪ್ ಸೇನ್,
ಬಾಂಗ್ಲಾದೇಶ:
ಲಿಟನ್ ಕುಮಾರ್ ದಾಸ್ (ನಾಯಕ), ಅನಾಮುಲ್ ಹೇಗ್ ಬಿಜಯ್, ನಜ್ಮುಲ್ ಹುಸೇನ್ ಶಾಂತೊ, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಮ್, ಮೆಹಮೂದ್ ಉಲ್ಲಾಹ, ಅಫಿಫ್ ಹುಸೇನ್, ಮೆಹದಿ ಹಸನ್ ಮಿರಾಜ್, ಹಸನ್ ಮೆಹಮೂದ್, ಮುಸ್ತಫಿಜುರ್ ರೆಹಮಾನ್, ಇಬಾದತ್ ಹುಸೇನ್ ಚೌಧರಿ