ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಣ ಪಂದ್ಯವು ಮಳೆಯ ಕಾರಣ ರದ್ದಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಆ ಮೂಲಕ ಐದು ಪಂದ್ಯಗಳ ಟಿ20 ಸರಣಿ 2-2ರಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದಂತಾಗಿದೆ.
ಇದನ್ನೂ ಓದಿ: 5ನೇ ಟಿ20 ಪಂದ್ಯ: ಸರಣಿ ನಿರ್ಣಾಯಕ ಪಂದ್ಯದ ಟಾಸ್ ಗೆದ್ದ ಆಫ್ರಿಕಾ, ಟೀಂ ಇಂಡಿಯಾ ಬ್ಯಾಟಿಂಗ್, ಪಂದ್ಯಕ್ಕೆ ಮಳೆ ಅಡ್ಡಿ!
ಟಾಸ್ಗೂ ಮುನ್ನ ಮಳೆಯಾಗಿದ್ದರಿಂದ ಪಂದ್ಯವು ವಿಳಂಬವಾಗಿ ಶುರುವಾಗಿತ್ತು. ಅದರಂತೆ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಲುಂಗಿ ಎನ್ಗಿಡಿ ಎಸೆದ 2ನೇ ಓವರ್ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ (15) ಕ್ಲೀನ್ ಬೌಲ್ಡ್ ಆಗಿ ಹೊರನಡೆದರೆ, ಎನ್ಗಿಡಿ ಎಸೆದ 4ನೇ ಓವರ್ನ 2ನೇ ಎಸೆತದಲ್ಲಿ ಋತುರಾಜ್ ಗಾಯಕ್ವಾಡ್ (10) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಮತ್ತೆ ಮಳೆ ಸುರಿಯಲಾರಂಭಿಸಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಇದಾಗ್ಯೂ ಪಂದ್ಯವನ್ನು ಮುಂದುವರೆಸಲು ಬಯಸಿದರೂ ಮಳೆ ಬಿಡುವ ಸಾಧ್ಯತೆಗಳಿರಲಿಲ್ಲ. ಈ ಬಗ್ಗೆ ಚರ್ಚಿಸಿದ ಅಂಪೈರ್ಗಳಾದ ಅನಿಲ್ ಚೌಧರಿ ಮತ್ತು ಕೆಎನ್ ಅನಂತ ಪದ್ಮನಾಭನ್ 5 ಓವರ್ಗಳ ಪಂದ್ಯ ನಡೆಸುವ ಆಯ್ಕೆಗಳ ಬಗ್ಗೆ ಪರಿಶೀಲಿಸಿದರು. ಆದರೆ ನಿರಂತರವಾಗಿ ಮಳೆಯಾಗುತ್ತಿದ್ದರಿಂದ ಇದಕ್ಕೂ ಅವಕಾಶ ಇರಲಿಲ್ಲ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದರು.
ಐಸಿಸಿ ನಿಮಯದ ಪ್ರಕಾರ ಮಳೆ ಬಂದರೆ ಕನಿಷ್ಠ 5 ಓವರ್ಗಳ ಪಂದ್ಯ ನಡೆಯಬೇಕು. ಇದಕ್ಕಿಂತ ಕಡಿಮೆ ಓವರ್ಗಳ ಪಂದ್ಯ ನಡೆಸಲಾಗುವುದಿಲ್ಲ. ಅಂದರೆ ಇಲ್ಲಿ ಒಂದು ತಂಡವು 5 ಓವರ್ಗಳನ್ನು ಆಡಲೇಬೇಕು. ಇದಾಗ್ಯೂ ಸೂಪರ್ ಓವರ್ ಮೂಲಕ ಸರಣಿ ಫಲಿತಾಂಶವನ್ನು ನಿರ್ಧರಿಸಲಾಗುವುದಿಲ್ಲ.
ಇನ್ನು ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಪಂದ್ಯಕ್ಕೆ ಮೀಸಲು ದಿನ ನೀಡದ ಕಾರಣ ಪಂದ್ಯ ನಾಳೆ ನಡೆಯುವುದಿಲ್ಲ. ಬದಲಾಗಿ ಸರಣಿಯನ್ನು ಸಮಬಲದೊಂದಿಗೆ ಅಂತ್ಯಗೊಳಿಸಲಾಗಿದೆ. ಅಂದರೆ ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 2-2 ಸಮಬಲ ಸಾಧಿಸಿದ್ದು, ಅದರಂತೆ ಉಭಯ ತಂಡಗಳನ್ನು ಸರಣಿ ವಿಜೇತರೆಂದು ಘೋಷಿಸಲಾಗಿದೆ.