ಕ್ರಿಕೆಟ್

ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ; ನಾಯಕ ರೋಹಿತ್ ಶರ್ಮಾಗೆ ಗಾಯ

Ramyashree GN

ಅಡಿಲೇಡ್: ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೂ ಮುನ್ನವೇ ಟೀಂ ಇಂಡಿಯಾಗೆ ಹಿನ್ನಡೆ ಉಂಟಾಗಿದೆ. ಭಾರತ ತಂಡದ ನಾಯಕ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ಮುಂಗೈಗೆ ಮಂಗಳವಾರ ಬೆಳಗ್ಗೆ ಬಲವಾದ ಪೆಟ್ಟು ಬಿದ್ದಿದೆ.

ನವೆಂಬರ್ 10ರಂದು ಗುರುವಾರ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡದ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೆಣೆಸಾಡಲಿದೆ. ಇಲ್ಲಿ ವಿಜಯ ಸಾಧಿಸಿದ ತಂಡವು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಡಲಿದೆ.

ರೋಹಿತ್ ಶರ್ಮಾ ಅವರು ಇಂಡಿಯನ್ ನೆಟ್ ಸೆಷನ್‌ನಲ್ಲಿ ಎಸ್. ರಘು ಅವರಿಂದ ಸಾಂಪ್ರದಾಯಿಕ ಥ್ರೋಡೌನ್‌ಗಳನ್ನು ಎದುರಿಸುತ್ತಿದ್ದಾಗ ಶಾರ್ಟ್ ಬಾಲ್ ಒಂದು ಅವರ ಬಲಗೈ ಮುಂದೋಳಿಗೆ ಬಡಿದಿದೆ. ಇದರಿಂದಾಗಿ ಅವರು ತೀವ್ರವಾದ ನೋವನ್ನು ಅನುಭವಿಸಿದರು. ಬಳಿಕ ನೆಟ್ ಅಭ್ಯಾಸ ತೊರೆದು ವಿಶ್ರಾಂತಿಗೆ ಮರಳಿದರು.

ಗಾಯಗೊಂಡ ಬಳಿಕ ಕೂತು ಅಭ್ಯಾಸ ಅಭ್ಯಾಸ ಪಂದ್ಯವನ್ನು ವೀಕ್ಷಿಸುತ್ತಿರುವುದು

ರೋಹಿತ್ ಅವರು ಶಾರ್ಟ್ ಆರ್ಮ್ ಫುಲ್ ಮಾಡಲು ಯತ್ನಿಸುತ್ತಿದ್ದರು. ಆದರೆ 150 ಪ್ಲಸ್ ವೇಗದಲ್ಲಿ 18 ಯಾರ್ಡ್‌ಗಳಿಂದ ಎಸೆಯಲ್ಪಟ್ಟ ಥ್ರೋಡೌನ್ ಬಾಲ್ ಅವರ ಮುಂಗೈಗೆ ಬಡಿಯಿತು. ಬಳಿಕ ಅವರ ಬಲಗೈಗೆ ಐಸ್ ಪ್ಯಾಕ್ ಕಟ್ಟಲಾಗಿತ್ತು. ಐಸ್ ಪೆಟ್ಟಿಗೆಯ ಮೇಲೆ ಕುಳಿತು ತರಬೇತಿಯನ್ನು ನೋಡುತ್ತಿದ್ದರೂ ಅವರು ಸಾಕಷ್ಟು ನೋವಿನಿಂದ ಕೂಡಿರುವುದು ಕಾಣಿಸುತ್ತಿತ್ತು.

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಗಾಯಕ್ಕೆ ತುತ್ತಾಗಿತ್ತು. ಈ ವೇಳೆಯೂ ಕೆಲವು ಆಟಗಾರರನ್ನು ಬದಲಿಸಲಾಗಿತ್ತು. ಇದೀಗ ಮಹತ್ವದ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಅವರೇ ಗಾಯಗೊಂಡಿರುವುದು ಭಾರತೀಯ ಪಾಳಯದಲ್ಲಿ ಆತಂಕ ಮೂಡಿಸಿದೆ.

ಭಾರತ ತಂಡದ ಮಾನಸಿಕ ಕಂಡೀಷನಿಂಗ್ ತರಬೇತುದಾರ ಪ್ಯಾಡಿ ಅಪ್ಟನ್ ಅವರೊಂದಿಗೆ ರೋಹಿತ್ ಶರ್ಮಾ ಸುದೀರ್ಘ ಸಮಯದವರೆಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂತು.

ಸೆಮಿಫೈನಲ್ ಪಂದ್ಯಕ್ಕೆ 48 ಗಂಟೆಗಳು ಬಾಕಿ ಇರುವ ಈ ವೇಳೆಯಲ್ಲಿ, ಭಾರತೀಯ ವೈದ್ಯಕೀಯ ತಂಡವು ಖಂಡಿತವಾಗಿಯೂ ಅವರನ್ನು ಮೈದಾನಕ್ಕೆ ಇಳಿಯಲು ನಿರಂತರವಾಗಿ ಪ್ರಯತ್ನಿಸುತ್ತದೆ. ಒಂದು ವೇಳೆ ಗಂಭೀರವಾಗಿ ಗಾಯಗೊಂಡಿದ್ದರೆ, ಅವರು ಭಾರತ ತಂಡದ ಆಡುವ 11ರ ಬಳಗದಿಂದ ಹೊರಗುಳಿಯಲಿದ್ದಾರೆ.

SCROLL FOR NEXT