ಕಪಿಲ್ ದೇವ್ 
ಕ್ರಿಕೆಟ್

'ಹಣದ ಜೊತೆ ದುರಹಂಕಾರ, ಅಹಂ ಬರುತ್ತದೆ': ಭಾರತೀಯ ಕ್ರಿಕೆಟ್ ಆಟಗಾರರಿಗೆ ಜಾಡಿಸಿದ ಕಪಿಲ್ ದೇವ್!

ಈಗಿನ ಹೆಚ್ಚಿನ ಆಟಗಾರರು ತುಂಬಾ ಆತ್ಮವಿಶ್ವಾಸ ಹೊಂದಿದ್ದಾರೆ ಎಂಬುದು ನನ್ನ ಅನಿಸಿಕೆ. ಆದರೆ ಅವರಲ್ಲಿ ನಕಾರಾತ್ಮಕ ಅಂಶವೂ ಇದೆ. ನಮಗೆ ಎಲ್ಲವೂ ತಿಳಿದಿದೆ. ನಾವು ಯಾರಿಂದಲೂ ಸಲಹೆ ಪಡೆಯಬೇಕಾಗಿಲ್ಲ ಎಂದು ಅವರು ಭಾವಿಸುತ್ತಾರೆ.

ನವದೆಹಲಿ: ಕೆಲವೊಮ್ಮೆ ಹೆಚ್ಚು ಹಣ ಬಂದರೆ ದುರಹಂಕಾರವೂ ಬರುತ್ತದೆ. ಈ ಕ್ರಿಕೆಟಿಗರು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾರೆ. ಸಹಾಯದ ಅಗತ್ಯವಿರುವ ಅನೇಕ ಕ್ರಿಕೆಟಿಗರು ಇದ್ದಾರೆ ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಹಾಲಿ ಕ್ರಿಕೆಟಿಗರ ಕುರಿತು ಬೇಸರ ವ್ಯಕ್ತಪಡಿಸಿದರು.

ದಿ ವೀಕ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ಹಿಂದೆ ಆಟಗಾರರ ಅಹಂಕಾರದ ಕುರಿತಂತೆ ಹೇಳಿಕೆ ನೀಡಿದ್ದ ಇನ್ನೋರ್ವ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಮಾತಿಗೆ ಧ್ವನಿಗೂಡಿಸಿದ್ದಾರೆ.

ವರ್ಷಗಳು ಕಳೆದಂತೆ ಭಾರತೀಯ ಕ್ರಿಕೆಟ್ ಹಲವಾರು ಬದಲಾವಣೆಯನ್ನು ಕಂಡಿದೆ. 70 ರ ದಶಕದಲ್ಲಿ ಏನೂ ಇಲ್ಲವಾಗಿದ್ದ ಭಾರತೀಯ ಕ್ರಿಕೆಟ್ ಬಹಳ ದೂರ ಸಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಅತ್ಯಂತ ದುಬಾರಿ ಕ್ರಿಕೆಟ್ ಪಂದ್ಯಾವಳಿ ಐಪಿಎಲ್ ಆಯೋಜಿಸುತ್ತಿದೆ. ಆಟಗಾರರೂ ಶ್ರೀಮಂತರಾಗಿದ್ದಾರೆ.

ಹೆಚ್ಚು ಸಂಭಾವನೆ ಪಡೆಯುವ ಕೇಂದ್ರ ಒಪ್ಪಂದಗಳಿಂದ ಲಾಭದಾಯಕ ಐಪಿಎಲ್ ಡೀಲ್‌ಗಳವರೆಗೆ ದುಬಾರಿ ಬ್ರ್ಯಾಂಡ್ ಅನುಮೋದನೆಗಳವರೆಗೆ, ಭಾರತೀಯ ಕ್ರಿಕೆಟಿಗರಿಗೆ ಆದಾಯದ ಮಾರ್ಗಗಳು ಬಹುವಿಧವಾಗಿವೆ.

ಈಗಿನ ಹೆಚ್ಚಿನ ಆಟಗಾರರು ತುಂಬಾ ಆತ್ಮವಿಶ್ವಾಸ ಹೊಂದಿದ್ದಾರೆ ಎಂಬುದು ನನ್ನ ಅನಿಸಿಕೆ. ಆದರೆ ಅವರಲ್ಲಿ ನಕಾರಾತ್ಮಕ ಅಂಶವೂ ಇದೆ. ನಮಗೆ ಎಲ್ಲವೂ ತಿಳಿದಿದೆ. ನಾವು ಯಾರಿಂದಲೂ ಸಲಹೆ ಪಡೆಯಬೇಕಾಗಿಲ್ಲ ಎಂದು ಅವರು ಭಾವಿಸುತ್ತಾರೆ. ಅದಕ್ಕಿಂತ ಉತ್ತಮವಾಗಿ ಅದನ್ನು ಹೇಗೆ ಹೇಳಬೇಕೆಂದು ನನಗೆ ತಿಳಿದಿಲ್ಲ. ಅನುಭವಿ ವ್ಯಕ್ತಿ ನಿಮಗೆ ಸಹಾಯ ಮಾಡಬಹುದು ಎಂದು ನಾವು ನಂಬುತ್ತೇವೆ ಎಂದು ಹೇಳಿದರು.

ಕಳೆದ ತಿಂಗಳು ಟೀಮ್ ಇಂಡಿಯಾ ಆಸ್ಟ್ರೇಲಿಯ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್-2023ರ ಫೈನಲ್ ಪಂದ್ಯವನ್ನು ಸೋತ ನಂತರ ಸುನೀಲ್ ಗವಾಸ್ಕರ್ ಭಾರತ ತಂಡವನ್ನು ಟೀಕಿಸಿದ್ದರು. ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಹೊರತುಪಡಿಸಿ ಬೇರ್ಯಾವ ಆಟಗಾರನು ನನ್ನ ಬಳಿ ಸಲಹೆ ಕೇಳಲು ಬಂದಿಲ್ಲ ಎಂದು ಸಂದರ್ಶನವೊಂದರಲ್ಲಿ ಕಪಿಲ್ ದೇವ್ ಹೇಳಿದ್ದಾರೆ.

ಈಗಿನ ಆಟಗಾರರ ಕುರಿತು ಗವಾಸ್ಕರ್ ಹೇಳಿಕೆಯ ಬಗ್ಗೆ ಕಪಿಲ್ ದೇವ್ ಮಾತನಾಡಿದ್ದು, ನನ್ನನ್ನು ಈ ತನಕ ಯಾವುದೇ ವೇಗದ ಬೌಲರ್ ಸಲಹೆ ಕೇಳಿ ಸಂಪರ್ಕಿಸಿಲ್ಲ. ನಾನು ಗವಾಸ್ಕರ್ ರಿಂದ ಒಂದು ವಿಚಾರ ತಿಳಿದುಕೊಂಡಿದ್ದೇನೆ. ಅದೇನೆಂದರೆ, ಆಟಗಾರರಿಗೆ ಅಗತ್ಯವಿರುವ ತನಕ ಸಲಹೆ ನೀಡುವುದು ಬೇಡ. ನಿನ್ನ ಬಳಿ ಸಲಹೆ ಕೇಳುವ ತನಕ ಸಲಹೆ ನೀಡಬೇಡ ಎಂದು ಅವರು ನನಗೆ ಹೇಳಿದ್ದರು ಎಂದರು.

ನಮ್ಮ ಪೀಳಿಗೆಯ ಆಟಗಾರರು ಹಿರಿಯ ಆಟಗಾರರ ಅನುಭವವನ್ನು ಪಡೆಯುತ್ತಿದ್ದರು. ಅವರಿಂದ ಸಲಹೆಗಳನ್ನು ಪಡೆದರೆ ಆಟದಲ್ಲಿ ಸುಧಾರಣೆ ಕಾಣುತ್ತೇವೆ ಎಂಬುದು ನಮ್ಮ ತಲೆಮಾರಿನ ನಂಬಿಕೆಯಾಗಿತ್ತು. ಒಬ್ಬ ಆಟಗಾರ ಎಲ್ಲೆಲ್ಲಿ ತಪ್ಪಾಗುತ್ತದೆ ಎಂಬುದು ಹಿರಿಯರಿಗೆ ಚೆನ್ನಾಗಿ ಗೊತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT