ಕ್ರಿಕೆಟ್

'ವಿಶ್ವಕಪ್ ಲೋಕಲ್ ಟೂರ್ನಿಯಲ್ಲ... ನಾಚಿಕೆಯಾಗಬೇಕು... ನಾನ್ ಸೆನ್ಸ್': ಪಾಕಿಸ್ತಾನದ ಹಸನ್ ರಾಜಾಗೆ ಮಹಮದ್ ಶಮಿ ತಿರುಗೇಟು

Srinivasamurthy VN

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಬೇರೆ ಚೆಂಡು ನೀಡಲಾಗುತ್ತಿದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಪಾಕಿಸ್ತಾನದ ಮಾಜಿ ಆಟಗಾರ ಹಸನ್ ರಾಜಾಗೆ ಭಾರತ ತಂಡದ ವೇಗಿ ಮಹಮದ್ ಶಮಿ ಖಡಕ್ ತಿರುಗೇಟು ನೀಡಿದ್ದಾರೆ.

ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಪ್ರದರ್ಶನ ಅದ್ಭುತವಾಗಿದ್ದು, ತಾನಾಡಿರುವ ಎಲ್ಲ ಎಂಟೂ ಪಂದ್ಯಗಳಲ್ಲೂ ಭಾರತ ಭರ್ಜರಿಯಾಗಿ ಗೆದ್ದು ಸೆಮೀಸ್ ಹಂತಕ್ಕೇರಿದೆ. ಭಾರತದ ಯಶಸ್ಸಿನಲ್ಲಿ ಪ್ರಮುಖವಾಗಿ ಬೌಲರ್ ಗಳ ಮಹತ್ವದ ಕಾಣಿಕೆ ಇದ್ದು, ಮಹಮದ್ ಶಮಿ, ಮಹಮದ್ ಸಿರಾಜ್, ಜಸ್ ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಕುಲದೀಪ್ ಯಾದವ್ ಮತ್ತು ಆರ್ ಅಶ್ವಿನ್ ಭರ್ಜರಿ ಫಾರ್ಮ್ ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ.

  

ಭಾರತ ಕ್ರಿಕೆಟ್ ತಂಡದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ವಿಶ್ವಕಪ್ 2023ರಲ್ಲಿ ಅದ್ಭುತ ಫಾರ್ಮ್ ಕಾಯ್ದುಕೊಂಡಿದ್ದು, ಆಡಿರುವ 4 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿರುವ ಶಮಿ ಟೀಂ ಇಂಡಿಯಾದ ಅಗ್ರ ವಿಕೆಟ್ ಟೇಕರ್ ಎನಿಸಿಕೊಂಡಿದ್ದಾರೆ, ಹಾರ್ದಿಕ್ ಪಾಂಡ್ಯ ಗಾಯದಿಂದ ಹೊರಗುಳಿದ ಬಳಿಕ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದಲ್ಲಿ ಶಮಿ ಸ್ಥಾನವನ್ನು ಖಾಯಂ ಎನ್ನುವಂತಾಗಿದೆ.

ಹೀಗಿರುವಾಗಲೇ ಟೀಂ ಇಂಡಿಯಾದ ಭರ್ಜರಿ ಸಕ್ಸಸ್ ಉಳಿದ ತಂಡಗಳ ಹೊಟ್ಟೆಕಿಚ್ಚಿಗೆ ಕಾರಣವಾಗುತ್ತಿದ್ದು, ಪ್ರಮುಖವಾಗಿ ಪಾಕಿಸ್ತಾನದ ಕೆಲ ಮಾಜಿ ಆಟಗಾರರಿಗೆ ಇದು ಅರಗಿಸಿಕೊಳ್ಳಲಾಗದ ಪರಿಸ್ಥಿತಿ ಎಂಬಂತಾಗಿದೆ. ಇದೇ ಕಾರಣಕ್ಕೆ ಹಸನ್ ರಾಜಾ ನಂತಹ ಕೆಲ ಆಟಗಾರರು ತಾವು ಹೋದಲೆಲ್ಲಾ ಭಾರತ ತಂಡದ ಬಗ್ಗೆ ಕೊಂಕು ಮಾತುಗಳನ್ನಾಡುತ್ತಿದ್ದಾರೆ. ಈ ಹಿಂದೆ ಪಿಚ್ ಮತ್ತು ಡಿಆರ್ ಎಸ್ ಬಗ್ಗೆ ಮಾತನಾಡಿದ್ದ ಹಸನ್ ರಾಜಾ ಇದೀಗ ಚೆಂಡಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಸನ್ ರಜಾ, “ಭಾರತಕ್ಕೆ ಬೌಲಿಂಗ್‌ ಮಾಡಲು ಬೇರೆ ಚೆಂಡನ್ನು ನೀಡಲಾಗುತ್ತಿದೆಯೇನೋ ಎಂಬ ಅನುಮಾನ ಇದೆ” ಎಂದು ಹೇಳಿದ್ದರು.  ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಫಘಾನಿಸ್ತಾನದ ಬೌಲಿಂಗ್ ವೇಳೆ ಆರಂಭಿಕ 20 ಓವರ್ ಗಳಲ್ಲಿ ಟೀಮ್ ಇಂಡಿಯಾ ಬಳಸುತ್ತಿರುವ ವಿಶೇಷ ರೀತಿಯ ಚೆಂಡನ್ನು ನೀಡಲಾಗಿದೆ.

ಅಫಘಾನಿಸ್ತಾನದ ಬೌಲಿಂಗ್ ವೇಳೆ‌ ಮೊದಲ 20 ಓವರ್‌ಗಳಲ್ಲಿ ಆ ತಂಡಕ್ಕೆ ಟೀಮ್ ಇಂಡಿಯಾ ಬಳಸುತ್ತಿದ್ದ ಚೆಂಡನ್ನು ನೀಡಲಾಗಿತ್ತು. ಚೆಂಡು ಹೆಚ್ಚು ಸ್ವಿಂಗ್ ಆಗಿ ಬ್ಯಾಟರ್‌ಗಳ ಪ್ಯಾಡ್‌ಗೆ ಬಡಿಯುತ್ತಿತ್ತು ಮತ್ತು ಚೆಂಡು ಬ್ಯಾಟ್‌ಗೆ ತಗುಲಿ ಸ್ಲಿಪ್‌ನಲ್ಲಿ ನಿಂತಿದ್ದ ಆಟಗಾರರ ಕೈ ಸೇರುತ್ತಿತ್ತು ಆದ್ದರಿಂದಲೇ ಆಸ್ಟ್ರೇಲಿಯಾ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಹಮದ್ ಶಮಿ ಖಡಕ್ ತಿರುಗೇಟು
ಇದೀಗ ಈ ಹೇಳಿಕೆ ಬಗ್ಗೆ ಆಕ್ರೋಶ ಹೊರಹಾಕಿದ ಬೌಲರ್ ಮೊಹಮ್ಮದ್ ಶಮಿ, ಇನ್‌’ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ. “ನಾಚಿಕೆಯಾಗಬೇಕು… ಆಟದ ಕಡೆ ಗಮನ ಹರಿಸಿ ಅನಗತ್ಯ ವಿಚಾರಗಳತ್ತ ಬೇಡ. ಇತರರ ಯಶಸ್ಸನ್ನು ಒಮ್ಮೆ ಆನಂದಿಸಿ. ಇದು ಐಸಿಸಿ ವಿಶ್ವಕಪ್, ನಿಮ್ಮ ಸ್ಥಳೀಯ ಪಂದ್ಯಾವಳಿಯಲ್ಲ. ನೀವು ಒಬ್ಬ ಆಟಗಾರನೇ…!” ಎಂದು ಕಿವಿಹಿಂಡಿದ್ದಾರೆ. ವಸೀಂ ಅಕ್ರಂ ಅವರೂ ಕೂಡ ನಿಮ್ಮದೇ ತಂಡದ ಆಟಗಾರ.. ಕನಿಷ್ಠ ಪಕ್ಷ ಅವರ ಮಾತನ್ನಾದರೂ ನಂಬಿ.. ಎಂದು ಅವರ ವಿರುದ್ಧ ಕಿಡಿಕಾರಿದ್ದಾರೆ.

SCROLL FOR NEXT