ಕ್ರಿಕೆಟ್

ಮುಖ್ಯ ಕೋಚ್ ಸ್ಥಾನದಲ್ಲಿ ಮುಂದುವರಿಯಲು ರಾಹುಲ್ ದ್ರಾವಿಡ್ ನಿರಾಸಕ್ತಿ: ವಿವಿಎಸ್ ಲಕ್ಷ್ಮಣ್ ನೇಮಕ ಸಾಧ್ಯತೆ

Sumana Upadhyaya

ಮುಂಬೈ: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಸೆಮಿ ಫೈನಲ್ ವರೆಗೂ ಗೆದ್ದುಕೊಂಡು ಬಂದು ಫೈನಲ್ ನಲ್ಲಿ ಆಸ್ಟ್ರೇಲಿಯಾ ಎದುರು 6 ವಿಕೆಟ್ ಗಳಿಗೆ ಭಾರತ ತಂಡ ಸೋತಿದ್ದು ಎಲ್ಲರಿಗೂ ನಿರಾಶೆಯುಂಟಾಗಿದೆ.  ಈ ಸಂದರ್ಭದಲ್ಲಿ ಕಳೆದೆರಡು ವರ್ಷಗಳಿಂದ ಟೀಂ ಇಂಡಿಯಾದ ಹೆಡ್ ಕೋಚ್ ಆಗಿರುವ ರಾಹುಲ್ ಡ್ರಾವಿಡ್ ಅವರ ಬಿಸಿಸಿಐಯೊಂದಿಗಿನ ಒಪ್ಪಂದ ಮುಕ್ತಾಯವಾಗುತ್ತಿದೆ. 

ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರು ಒಪ್ಪಂದ ಮುಕ್ತಾಯಗೊಳಿಸುತ್ತಾರೆಯೇ ಅಥವಾ ಮುಖ್ಯ ಕೋಚ್ ಆಗಿ ಅಧಿಕಾರಾವಧಿ ವಿಸ್ತರಿಸಲು ಬಯಸುತ್ತಾರೆಯೇ ಎಂಬ ವಿಷಯ ಬಹಳ ಚರ್ಚೆಯಾಗುತ್ತಿದೆ. ಬಿಸಿಸಿಐ ಮೂಲಗಳ ಪ್ರಕಾರ, ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥ ಮತ್ತು ಭಾರತದ ಮಾಜಿ ಶ್ರೇಷ್ಠ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ದ್ರಾವಿಡ್ ಸ್ಥಾನವನ್ನು ತುಂಬಲಿದ್ದಾರೆ. ತಮ್ಮ ನಿಲುವನ್ನು ರಾಹುಲ್ ದ್ರಾವಿಡ್ ಅವರು ಬಿಸಿಸಿಐಗೆ ಈಗಾಗಲೇ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ರಾಹುಲ್ ದ್ರಾವಿಡ್ ಅವರ ಸ್ಥಾನಕ್ಕೆ ಅವರ ನಿಕಟವರ್ತಿ ವಿವಿಎಸ್ ಲಕ್ಷ್ಮಣ್ ಏಕದಿನ ಭಾರತ ಕ್ರಿಕೆಟ್ ತಂಡಕ್ಕೆ ಮುಖ್ಯಕೋಚ್ ಆಗಿ ನೇಮಕಗೊಳ್ಳುವ ನಿರೀಕ್ಷೆಯಿದೆ. ಲಕ್ಷ್ಮಣ್ ಅವರು ಮುಖ್ಯ ಕೋಚ್ ಸ್ಥಾನ ವಹಿಸಿಕೊಳ್ಳಲು ಉತ್ಸುಕರಾಗಿದ್ದಾರೆ, ಪೂರ್ಣಾವಧಿಗೆ ಅವರು ಮುಖ್ಯ ಕೋಚ್ ಆಗಿ ಸದ್ಯದಲ್ಲಿಯೇ ಬಿಸಿಸಿಐ ಜೊತೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಇಂದಿನಿಂದ ಆರಂಭವಾಗುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಲಕ್ಷ್ಮಣ್ ಅವರನ್ನು ನೇಮಿಸಲಾಗಿದೆ. ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಒಡಿಐ ವಿಶ್ವಕಪ್‌ನ ಫೈನಲ್‌ಗೆ ತಲುಪಿತು. ಆದಾಗ್ಯೂ, ತಂಡವು ಎರಡೂ ಸಂದರ್ಭಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತು. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತರು.

ರಾಹುಲ್  ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಈ ವರ್ಷದ ಆರಂಭದಲ್ಲಿ ಏಷ್ಯಾಕಪ್ ಗೆದ್ದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಡಿಸೆಂಬರ್ 10ರಂದು ಆರಂಭವಾಗಲಿದ್ದು, ಡಿಸೆಂಬರ್ 4ರಂದು ತಂಡ ಪ್ರಯಾಣ ಬೆಳೆಸಲಿದೆ.

SCROLL FOR NEXT