ಕ್ರಿಕೆಟ್

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ T20I ಭವಿಷ್ಯ ನಿರ್ಧಾರ; ನಾಯಕತ್ವ ವಹಿಸುವಂತೆ ಬಿಸಿಸಿಐ ಪಟ್ಟು

Srinivasamurthy VN

ನವದೆಹಲಿ: ಏಕದಿನ ವಿಶ್ವಕಪ್ ನಂತರ ಭಾರತೀಯ ಕ್ರಿಕೆಟ್ ತಂಡವನ್ನು ಮರುಹೊಂದಿಸಲು ಸಿದ್ಧವಾಗುತ್ತಿದ್ದಂತೆ, ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮತ್ತು ರಾಷ್ಟ್ರೀಯ ಆಯ್ಕೆಗಾರರು ಗುರುವಾರ ರೋಹಿತ್ ಶರ್ಮಾ ಅವರ ಟಿ20 ಭವಿಷ್ಯದ ಕುರಿತು ಮಾತುಕತೆ ನಡೆಸುತ್ತಿದ್ದು, T20 ಮಾದರಿಯಲ್ಲೂ ನಾಯಕತ್ವ ವಹಿಸುವಂತೆ ರೋಹಿತ್ ಶರ್ಮಾ ಅವರ ಮನವೊಲಿಕೆಗೆ ಯತ್ನಿಸುತ್ತಿದೆ ಎಂದು ತಿಳಿದುಬಂದಿದೆ.

ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಇಂದು ಆಯ್ಕೆ ನಡೆಯಲಿದ್ದು, ಮೂರು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳಿಗಾಗಿ ಭಾರತ ತಂಡ ಡಿಸೆಂಬರ್ 6 ರಂದು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಮತ್ತು ಟೀಂ ಇಂಡಿಯಾ ಆಯ್ಕೆಗಾರರು ರೋಹಿತ್ ಶರ್ಮಾರನ್ನೇ ಟಿ20 ಮಾದರಿಗೂ ನಾಯಕನಾಗಿ ಆಯ್ಕೆ ಮಾಡಲು ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ರೋಹಿತ್ ಶರ್ಮಾ ಕಳೆದೊಂದು ವರ್ಷದಿಂದ ಚುಟುಕು ಮಾದರಿ ಕ್ರಿಕೆಟ್ ನಿಂದ ದೂರ ಉಳಿದಿದ್ದರು. ಆದರೆ ಮುಂದಿನ ವರ್ಷ ಟಿ20 ವಿಶ್ವಕಪ್ ಟೂರ್ನಿ ಇರುವುದರಿಂದ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕನ ಅಗತ್ಯವಿದೆ.

ಇದಕ್ಕೆ ಇಂಬು ನೀಡುವಂತೆ ಟಿ20 ತಂಡದ ಹಾಲಿ ನಾಯಕ ಹಾರ್ದಿಕ್ ಪಾಂಡ್ಯರ ಗಾಯದ ಸಮಸ್ಯೆ ಮತ್ತು ನಿಯಮಿತ ವೈಫಲ್ಯಗಳು ಆಯ್ಕೆದಾರರು ರೋಹಿತ್ ಶರ್ಮಾರತ್ತ ಮುಖಮಾಡುವಂತೆ ಮಾಡಿದೆ. ಏಕದಿನ ಮಾದರಿಯಲ್ಲಿ ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಯಶಸ್ಸಿನ ಬೆನ್ನಲ್ಲೇ ಇದೀಗ ಟಿ20 ವಿಶ್ವಕಪ್ ಗೂ ಅವರೇ ನಾಯಕನಾಗಿ ಮುಂದುವರೆಯಬೇಕು ಎಂಬುದು ಆಯ್ಕೆ ಸಮಿತಿಯ ಇರಾದೆಯಾಗಿದೆ.

ಏಕದಿನ ವಿಶ್ವಕಪ್ ಟೂರ್ನಿಯ ಯಶಸ್ಸಿನ ಬಳಿಕ ಟಿ20 ವಿಶ್ವಕಪ್ ಗೂ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್ ಮತ್ತು ಮಹಮದ್ ಶಮಿರಂತಹ ಆಟಗಾರರನ್ನು ಮುಂದುವರೆಸಲು ಆಯ್ಕೆ ಸಮಿತಿ ಮುಂದಾಗಿದೆ. ಇದೇ ಕಾರಣಕ್ಕೆ ಆಫ್ರಿಕಾ ಪ್ರವಾಸಕ್ಕೂ ಹಿರಿಯ ಆಟಗಾರರನ್ನು ಒಳಗೊಂಡ ತಂಡ ರಚನೆಗೆ ಆಯ್ಕೆ ಸಮಿತಿ ಮುಂದಾಗಿದ್ದು ರೋಹಿತ್ ಶರ್ಮಾರ ನಿರ್ಧಾರದ ಮೇಲೆ ಆಯ್ಕೆ ಸಮಿತಿ ಆಯ್ಕೆಗಳು ಅಂತಿಮವಾಗುತ್ತವೆ ಎಂದು ಹೇಳಲಾಗಿದೆ.

ಈ ನಡುವೆ, ವಿರಾಟ್‌ ಕೊಹ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ವಿರಾಮ ಕೇಳಿದ್ದಾರೆ. ಈ ಕಾರಣದಿಂದ ಅವರನ್ನು ವೈಟ್‌ ಬಾಲ್‌ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇಲ್ಲ. ಹೀಗಾಗಿ ರೋಹಿತ್ ಶರ್ಮಾ ನಾಯಕತ್ವದ ಕೌಶಲ್ಯವನ್ನು ನಂಬಿ, ಅವರನ್ನೇ ಚುಟುಕು ಮಾದರಿಯ ಕ್ರಿಕೆಟ್‌ಗೂ ನಾಯಕರನ್ನಾಗಿ ಮಾಡುವ ಚಿಂತನೆ ಸಾಗಿದೆ. 
 

SCROLL FOR NEXT