ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಭಾರತ ತಂಡದ ಕ್ರಿಕೆಟಿಗ ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ ಆರೋಗ್ಯದಲ್ಲಿ ಏರುಪೇರಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಲಾಗಿದೆ.
ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ (Karnataka Ranji team captain Mayank Agarwal) ಅವರು ತೀವ್ರ ಅಸ್ವಸ್ಥರಾಗಿದ್ದು(critically ill), ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ತ್ರಿಪುರಾಗೆ ಪ್ರಯಾಣಿಸುತ್ತಿದ್ದ ಮಯಾಂಕ್
ತ್ರಿಪುರಾ ವಿರುದ್ಧ ರಣಜಿ ಪಂದ್ಯವನ್ನು ಗೆದ್ದಿರುವ ಕರ್ನಾಟಕ ತಂಡವು ತನ್ನ ಮುಂದಿನ ಪಂದ್ಯವನ್ನು ಫೆಬ್ರವರಿ 2ರಿಂದ ಗುಜರಾತ್ನ ಸೂರತ್ನಲ್ಲಿ ಆಡಬೇಕಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ತಂಡವು ಸೋಮವಾರ ತ್ರಿಪುರಾದ ಅಗರ್ತಲಾದಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿತ್ತು. ಮೂಲಗಳ ಪ್ರಕಾರ ರಣಜಿ ಪಂದ್ಯಕ್ಕಾಗಿ ತ್ರಿಪುರಾದಲ್ಲಿದ್ದ ಅವರು, ವಿಮಾನದಲ್ಲಿ ವಾಪಸ್ ಆಗುತ್ತಿದ್ದಾಗ ತೀವ್ರವಾಗಿ ಅಸ್ವಸ್ಥರಾಗಿದ್ದು, ಪ್ರಯಾಣದ ವೇಳೆ ಮಯಾಂಕ್ ಅಗರ್ವಾಲ್ ಅವರು ವಿಮಾನದ ಮುಂಭಾಗದಲ್ಲಿಡಲಾಗಿದ್ದ ನೀರಿನ ಬಾಟಲಿಯಿಂದ ನೀರು ಕುಡಿದಿದ್ದಾರೆ.
ತಕ್ಷಣವೇ ಅವರಿಗೆ ಅಸ್ವಸ್ಥ ಕಾಡಲಾರಂಭಿಸಿದೆ. ಬಾಯಿ ಮತ್ತು ಗಂಟಲಿನಲ್ಲಿ ವಿಪರೀತ ಉರಿಯುಂಟಾಗಿದ್ದು, ನೀರು ಕುಡಿಯುತ್ತಿದ್ದಂತೆ ಅವರ ಗಂಟಲಿನಲ್ಲಿ ಉರಿ ಶುರುವಾಗಿದೆ. ಬಾಯಿ ಮತ್ತು ನಾಲಿಗೆಗೆ ಕೂಡ ಸುಟ್ಟಂತ ಅನುಭವಾಗಿದೆ. ಅವರಿಗೆ ಮಾತನಾಡಲು ಸಾಧ್ಯವಾಗಿಲ್ಲ. ತೀವ್ರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಅಗರ್ತಲಾದ ಎಎಲ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಮೊದಲ ಟೆಸ್ಟ್: ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಮಂಡಿಯೂರಿದ ಟೀಂ ಇಂಡಿಯಾ, 28 ರನ್ಗಳಿಂದ ಹೀನಾಯ ಸೋಲು!
ನೀರೆಂದು ಆ್ಯಸಿಡ್ ಕುಡಿದರೇ ಮಯಾಂಕ್ ಅಗರ್ವಾಲ್?
ಇತ್ತೀಚಿನ ಮಾಹಿತಿಗಳ ಪ್ರಕಾರ, ಸ್ಟೋರೇಜ್ ಏರಿಯಾದಲ್ಲಿ ವಿಮಾನದ ಸಿಬ್ಬಂದಿಯು ವಾಟರ್ ಬಾಟಲ್ನಲ್ಲಿ ಆ್ಯಸಿಡ್ ಇಟ್ಟಿದ್ದರು ಎನ್ನಲಾಗಿದೆ. ಮಯಾಂಕ್ ಅಗರ್ವಾಲ್ ಅವರು ನೀರೆಂದು ತಪ್ಪಾಗಿ ಭಾವಿಸಿ ಆ್ಯಸಿಡ್ ಕುಡಿದಿದ್ದಾರೆ. ಆ್ಯಸಿಡ್ ಕುಡಿದ ಮರುಕ್ಷಣವೇ ಅವರು ಎಲ್ಲವನ್ನು ಉಗುಳಿದ್ದಾರೆ. ಹಾಗಾಗಿ ಆ್ಯಸಿಡ್ ಅವರ ಹೊಟ್ಟೆಯನ್ನು ತಲುಪಿರುವ ಸಾಧ್ಯತೆ ಕ್ಷೀಣವಾಗಿದೆ. ವೈದ್ಯರು ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ.