ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಮುಂಬರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಪಂದ್ಯಗಳನ್ನು ಆಯೋಜಿಸುವ ಅವಕಾಶವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ 11 ಜೀವಗಳನ್ನು ಬಲಿ ಪಡೆದ ಕಾಲ್ತುಳಿತ ಘಟನೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕೆಲವು ಪಂದ್ಯಗಳನ್ನು ಕಾರ್ಯವತ್ತಂನಲ್ಲಿರುವ ತಿರುವನಂತಪುರದ ಗ್ರೀನ್ಫೀಲ್ಡ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವ ಬಗ್ಗೆ ಐಸಿಸಿ ಈಗ ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಜೊತೆ ಚರ್ಚೆ ನಡೆಸುತ್ತಿದೆ. ಐಸಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಕೆಸಿಎ ಅಧ್ಯಕ್ಷ ಕೆ ಜಯೇಶ್ ದೃಢಪಡಿಸಿದ್ದಾರೆ.
ಪಾಕಿಸ್ತಾನ ಅರ್ಹತೆ ಪಡೆಯದಿದ್ದರೆ, ಫೈನಲ್ ಸೇರಿದಂತೆ ಐದು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಮೊದಲಿಗೆ ನಿರ್ಧರಿಸಲಾಗಿತ್ತು. ಆದರೆ, ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ'ಕುನ್ಹಾ ನೇತೃತ್ವದ ಆಯೋಗ ಈ ಸ್ಥಳವನ್ನು ದೊಡ್ಡ ಪ್ರಮಾಣದ ಕಾರ್ಯಕ್ರಮಗಳಿಗೆ 'ಮೂಲಭೂತವಾಗಿ ಅಸುರಕ್ಷಿತ' ಎಂದು ಹೆಸರಿಸಿದ ಬೆನ್ನಲ್ಲೇ ಕೆಎಸ್ಸಿಎ ಈಗಾಗಲೇ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಯನ್ನು ಈಗಾಗಲೇ ಮೈಸೂರಿಗೆ ಸ್ಥಳಾಂತರಿಸಿದೆ.
'ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಐಸಿಸಿ ಅಧ್ಯಕ್ಷ ಜಯ್ ಶಾ ಈ ವಾರದ ಆರಂಭದಲ್ಲಿ ಮುಂಬೈನಲ್ಲಿ ಕೆಸಿಎ ಅಧ್ಯಕ್ಷ ಜಯೇಶ್ ಅವರನ್ನು ಭೇಟಿ ಮಾಡಿ 'ನೀವು ಆತಿಥೇಯರಾಗಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಿದ್ದೀರಾ?' ಎಂಬ ಪ್ರಮುಖ ಪ್ರಶ್ನೆಯನ್ನು ಕೇಳಿದ್ದಾರೆ' ಎಂದು ವರದಿಯಾಗಿದೆ.
50,000 ಪ್ರೇಕ್ಷಕರ ಸಾಮರ್ಥ್ಯವಿರುವ ಕೇರಳ ಕ್ರಿಕೆಟ್ ಕ್ರೀಡಾಂಗಣವು ಸೂಕ್ತ ಸ್ಥಳದಲ್ಲಿದ್ದು, ಇತ್ತೀಚೆಗೆ 2023ರ ನವೆಂಬರ್ನಲ್ಲಿ 6 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರುವ ದಾಖಲೆ ಹೊಂದಿದೆ. ಆಸನ ಸಾಮರ್ಥ್ಯದ ವಿಷಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಮೀರಿಸುತ್ತದೆ.
'ಮಹಿಳಾ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲು ತಿರುವನಂತಪುರಂ ಸಿದ್ಧವಾಗಿದೆ ಎಂದು ನಾವು ಅವರಿಗೆ ಭರವಸೆ ನೀಡಿದ್ದೇವೆ. ನಮ್ಮಲ್ಲಿ ಅಗತ್ಯ ಮೂಲಸೌಕರ್ಯಗಳಿವೆ. ನಾವು ಎಷ್ಟು ಪಂದ್ಯಗಳನ್ನು ಆಯೋಜಿಸುತ್ತೇವೆ ಎಂಬುದು ಇನ್ನೂ ದೃಢಪಟ್ಟಿಲ್ಲ. ನಾವು ಐಸಿಸಿಯ ಅನುಮೋದನೆಗಾಗಿ ಕಾಯುತ್ತಿದ್ದೇವೆ ಮತ್ತು ಹಲವಾರು ವ್ಯವಸ್ಥಾಪನಾ ಸವಾಲುಗಳನ್ನು ಇನ್ನೂ ಪರಿಹರಿಸಬೇಕಾಗಿದೆ' ಎಂದು ಜಯೇಶ್ ಹೇಳಿದರು.
ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ಪಂದ್ಯಾವಳಿ ನಡೆಯಲಿದ್ದು, ಹೊಸ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ಬಿಸಿಸಿಐ ಮತ್ತು ಐಸಿಸಿ ಪರದಾಡುವಂತಾಗಿದೆ. ಬೆಂಗಳೂರಿನ ಸ್ಟೇಡಿಯಂ ಅಲಭ್ಯತೆಯು ವಿಶ್ವಕಪ್ ಮೇಲೆ ಪರಿಣಾಮ ಬೀರುವುದಲ್ಲದೆ, ಸುರಕ್ಷತೆಯ ಕ್ರಮಗಳು ಬದಲಾಗದಿದ್ದರೆ ಐಪಿಎಲ್ 2026ರಲ್ಲಿ ಆರ್ಸಿಬಿ ಮೇಲೆಯೂ ಪರಿಣಾಮಗಳನ್ನು ಬೀರಬಹುದು.