ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ 
ಕ್ರಿಕೆಟ್

'ಮುಂದುವರಿಯಲು ನಿರ್ಧರಿಸಿದ್ದೇನೆ': ಸ್ಮೃತಿ ಮಂಧಾನ ಬಳಿಕ ಮದುವೆ ರದ್ದಾದ ಬಗ್ಗೆ ಪಲಾಶ್ ಮುಚ್ಚಲ್ ಮಾತು!

ಸ್ಮೃತಿ ಮತ್ತು ಪಲಾಶ್ ಅವರ ಮದುವೆ ನವೆಂಬರ್ 23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆಯಬೇಕಿತ್ತು.

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರೊಂದಿಗಿನ ಮದುವೆ ರದ್ದಾದ ಬಗ್ಗೆ ಪಲಾಶ್ ಮುಚ್ಚಲ್ ಇದೀಗ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

'ನನ್ನ ಜೀವನದಲ್ಲಿ ಮುಂದುವರಿಯಲು ಮತ್ತು ನನ್ನ ವೈಯಕ್ತಿಕ ಸಂಬಂಧದಿಂದ ಹಿಂದೆ ಸರಿಯಲು ನಾನು ನಿರ್ಧರಿಸಿದ್ದೇನೆ. ನನಗೆ ಅತ್ಯಂತ ಪವಿತ್ರವಾದ ವಿಷಯದ ಬಗ್ಗೆ ಆಧಾರರಹಿತ ವದಂತಿಗಳಿಗೆ ಜನರು ಅಷ್ಟು ಸುಲಭವಾಗಿ ಪ್ರತಿಕ್ರಿಯಿಸುವುದನ್ನು ನೋಡುವುದು ನನಗೆ ತುಂಬಾ ಕಷ್ಟಕರವಾಗಿದೆ. ಇದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಹಂತವಾಗಿದೆ ಮತ್ತು ನಾನು ನನ್ನ ನಂಬಿಕೆಗಳೊಂದಿಗೆ ಅದನ್ನು ನಿಭಾಯಿಸುತ್ತೇನೆ' ಎಂದಿದ್ದಾರೆ.

'ಆಧಾರರಹಿತ ಗಾಸಿಪ್ ಆಧರಿಸಿ ಯಾರನ್ನಾದರೂ ಜಡ್ಜ್ ಮಾಡುವ ಮೊದಲು ನಾವು ಒಂದು ಸಮಾಜವಾಗಿ ವಿರಾಮ ತೆಗೆದುಕೊಳ್ಳಲು ಕಲಿಯಬೇಕು, ವದಂತಿಗಳ ಮೂಲಗಳನ್ನು ಎಂದಿಗೂ ಗುರುತಿಸಲಾಗುವುದಿಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಇದರಿಂದಾಗಿ ನಿಮ್ಮ ಮಾತುಗಳು ನಮಗೆ ಎಂದಿಗೂ ಅರ್ಥವಾಗದ ರೀತಿಯಲ್ಲಿ ಗಾಯವನ್ನು ಉಂಟುಮಾಡಬಹುದು' ಎಂದರು.

'ನಾವು ಈ ವಿಷಯಗಳ ಬಗ್ಗೆ ಯೋಚಿಸುತ್ತಿರುವಾಗ, ಪ್ರಪಂಚದ ಅನೇಕ ಜನರು ತೀವ್ರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಸುಳ್ಳು ಮತ್ತು ಮಾನಹಾನಿಕರ ವಿಷಯವನ್ನು ಹರಡುವವರ ವಿರುದ್ಧ ನನ್ನ ತಂಡವು ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಈ ಕಠಿಣ ಸಮಯದಲ್ಲಿ ನನ್ನೊಂದಿಗೆ ದಯೆಯಿಂದ ನಿಂತ ಎಲ್ಲರಿಗೂ ಧನ್ಯವಾದಗಳು' ಎಂದು ಪಲಾಶ್ ಮುಚ್ಚಲ್ ಬರೆದುಕೊಂಡಿದ್ದಾರೆ.

ಸ್ಮೃತಿ ಮತ್ತು ಪಲಾಶ್ ಅವರ ಮದುವೆ ನವೆಂಬರ್ 23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆಯಬೇಕಿತ್ತು. ಮದುವೆ ದಿನದಂದು, ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರ ಆರೋಗ್ಯ ಕೈಕೊಟ್ಟಿದ್ದರಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅದಾದ ಕೆಲವೇ ಗಂಟೆಗಳ ನಂತರ, ಪಲಾಶ್ ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಮದುವೆಯನ್ನು ಮುಂದೂಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು.

ನಂತರದ ದಿನಗಳಲ್ಲಿ, ಸ್ಮೃತಿ ಮತ್ತು ಪಲಾಶ್ ಇಬ್ಬರೂ ಸಾಮಾಜಿಕ ಮಾಧ್ಯಮದಿಂದ ಸಂಪೂರ್ಣ ದೂರ ಉಳಿದಿದ್ದರು. ಸ್ಮೃತಿ ಅವರು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿನ ಪ್ರಪೋಸಲ್ ವಿಡಿಯೋ ಸೇರಿದಂತೆ ಮದುವೆ ಮತ್ತು ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಪ್ರತಿಯೊಂದು ಪೋಸ್ಟ್ ಅನ್ನು ಸಹ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಿಂದ ಅಳಿಸಿದ್ದರು. ಇದು ಸಾಕಷ್ಟು ವದಂತಿಗಳಿಗೆ ಕಾರಣವಾಗಿತ್ತು.

ಇದೀಗ ಸ್ಮೃತಿ ಮಂಧಾನ ಅವರೇ ಮದುವೆ ರದ್ದಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದು, ತಮ್ಮ ಸುತ್ತಲು ಎದ್ದಿದ್ದ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ. ಬಳಿಕ ಪಲಾಶ್ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ ನೇಮಕಾತಿ ವಯೋಮಿತಿ 5 ವರ್ಷ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ಐಷಾರಾಮಿ ರಿಯಲ್ ಎಸ್ಟೇಟ್ ಮೂಲಕ ಅಮೆರಿಕದಿಂದ 'ಹೊಸ ಗಾಜಾ' ಕಟ್ಟುವ ಭರವಸೆ!

ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತದಿಂದ ಮುರಳಿ ಕೃಷ್ಣ ಸಾವು!

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ 'ದಂಡುಪಾಳ್ಯ ಗ್ಯಾಂಗ್' ಸದಸ್ಯನ ಬಂಧನ!

ಟ್ರಂಪ್ ರ 'ಶಾಂತಿ ಮಂಡಳಿ' ಸೇರಲು ಭಾರತ ನಕಾರ; ಪಾಕಿಸ್ತಾನ ಸಹಿ!

SCROLL FOR NEXT