ಶುಭಪುರುಷರ ಟಿ20 ವಿಶ್ವಕಪ್ 2026 ಕ್ಕಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಧಿಕೃತವಾಗಿ ಭಾರತದ ತಂಡವನ್ನು ಘೋಷಿಸಿ ಒಂದು ದಿನ ಕಳೆದಿದೆ ಮತ್ತು ಆ ಪ್ರಕಟಣೆಯಲ್ಲಿ, ಅವರು ಮತ್ತೊಮ್ಮೆ ಅಕ್ಷರ್ ಪಟೇಲ್ ಅವರನ್ನು ತಂಡದ ಉಪನಾಯಕನನ್ನಾಗಿ ಹೆಸರಿಸಿದ್ದಾರೆ. ಭಾರತದ ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್ ಅವರನ್ನು ಟಿ20ಐ ತಂಡದಿಂದ ಕೈಬಿಡಲಾಗಿದೆ. ಶುಭಮನ್ ಗಿಲ್ 15 ಇನಿಂಗ್ಸ್ಗಳಲ್ಲಿ 24.25 ಸರಾಸರಿ ಮತ್ತು 137.26 ಸ್ಟ್ರೈಕ್ ರೇಟ್ನಲ್ಲಿ ಕೇವಲ 291 ರನ್ ಗಳಿಸಿದ್ದಾರೆ. ಗಿಲ್ ಅವರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ವಿಷಯದ ಬಗ್ಗೆ ತಿಳಿದಿರುವ ಬಹು ಮೂಲಗಳು ಭಾನುವಾರ ಐಎಎನ್ಎಸ್ಗೆ ತಿಳಿಸಿದ್ದು, ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಹಾಲಿ ಚಾಂಪಿಯನ್ಗಳಾಗಿ ಪ್ರವೇಶಿಸುತ್ತಿರುವ ಪಂದ್ಯಾವಳಿಯನ್ನು ಗೆಲ್ಲುವ ಸಲುವಾಗಿ ಭಾರತದ ಎಲ್ಲ ಸ್ವರೂಪದ ನಾಯಕ ಎಂದೇ ಬಿಂಬಿತವಾಗಿರುವ ಗಿಲ್ ಅವರನ್ನು ಹೊರಗಿಡುವ ನಿರ್ಧಾರ 'ಕಠಿಣವಾಗಿತ್ತು, ಆದರೆ ಅಗತ್ಯ'ವಾಗಿತ್ತು ಎನ್ನಲಾಗಿದೆ.
'ಗಿಲ್ ಅವರನ್ನು ಕೈಬಿಡುವುದು ಕಠಿಣ ಆದರೆ ಅಗತ್ಯವಾದ ನಿರ್ಧಾರವಾಗಿತ್ತು. ತಂಡದ ಹಿತದೃಷ್ಟಿಯಿಂದ ಇದನ್ನು ತೆಗೆದುಕೊಳ್ಳಲಾಗಿದೆ. ಟಿ20ಐ ತಂಡದ ಉಸ್ತುವಾರಿ ವಹಿಸಿರುವ ಜನರು ಗಿಲ್ ಅವರೊಂದಿಗಿನ ತಮ್ಮ ಯೋಜನೆ ಕೆಲಸ ಮಾಡುತ್ತಿಲ್ಲ ಎಂದು ಸ್ವಲ್ಪ ಸಮಯದ ಹಿಂದೆಯೇ ಅರಿತುಕೊಂಡಿದ್ದರು. ಹೀಗಾಗಿಯೇ ಅವರು ಮುಂಬರುವ ವಿಶ್ವಕಪ್ ತಂಡದಿಂದ ಅವರನ್ನು ಕೈಬಿಡಲಾಯಿತು' ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಆಫ್ರಿಕಾ ವಿರುದ್ಧ ಲಕ್ನೋದಲ್ಲಿ ನಡೆದ ಟಿ20 ಪಂದ್ಯದ ಅಭ್ಯಾಸದ ವೇಳೆ ಗಿಲ್ ಕಾಲ್ಬೆರಳಿಗೆ ಗಾಯವಾದ ಒಂದು ದಿನದ ನಂತರ, ಸ್ಯಾಮ್ಸನ್ ಅವರನ್ನು ಆರಂಭಿಕ ಸ್ಥಾನಕ್ಕೆ ಮರಳಿ ಕರೆತರುವ ಮತ್ತು ರಿಂಕು ಸಿಂಗ್ ಅವರನ್ನು ಮರಳಿ ತಂಡಕ್ಕೆ ಕರೆತರುವ ಬಲವಾದ ಭಾವನೆ ಚಿಂತಕರ ಚಾವಡಿಯಲ್ಲಿ ಹುಟ್ಟಿಕೊಂಡಿತು.
ಟಿ20 ವಿಶ್ವಕಪ್ನಲ್ಲಿ ಮತ್ತೆ ಕಾಣಿಸಿಕೊಳ್ಳಲು ವಿಫಲರಾದ ಗಿಲ್ ಅವರನ್ನು ಕೈಬಿಡಬೇಕೆಂಬ ಪ್ರಾಯೋಗಿಕ ಕರೆಗೆ ಹೆಚ್ಚಾಗಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾವುದೇ ಆಟಗಾರ ಕಳಪೆ ಫಲಿತಾಂಶಗಳಿಂದ ಮುಕ್ತನಾಗಿರುವುದಿಲ್ಲ ಮತ್ತು ಜಾಗತಿಕ ಟ್ರೋಫಿಯನ್ನು ಗೆಲ್ಲುವ ಅತ್ಯುತ್ತಮ ಅವಕಾಶವನ್ನು ನೀಡುವ ಸಂಯೋಜನೆಗಳನ್ನು ಮುಖ್ಯವಾಗಿ ಜನರು ಬೆಂಬಲಿಸುತ್ತಾರೆ.
ಗಿಲ್ ಅವರಂತೆಯೇ, ನಾಯಕ ಸೂರ್ಯಕುಮಾರ್ ಯಾದವ್ ಕೂಡ ಕಳಪೆ ಫಾರ್ಮ್ನಲ್ಲಿದ್ದಾರೆ. ಕಳೆದ 22 ಇನಿಂಗ್ಸ್ಗಳಲ್ಲಿ ಒಂದೇ ಒಂದು ಅರ್ಧಶತಕವನ್ನು ಗಳಿಸದೆ ಕೇವಲ 244 ರನ್ಗಳನ್ನು ಗಳಿಸಿದ್ದಾರೆ. ಆದರೆ, ಪಂದ್ಯಾವಳಿಗೆ ಕಡಿಮೆ ಸಮಯವಿರುವಾಗ ನಾಯಕನನ್ನು ಬದಲಾಯಿಸುವುದು ಎಂದಿಗೂ ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. 'ವಿಶ್ವಕಪ್ಗಾಗಿ ತಂಡದ ಆಯ್ಕೆಗಾಗಿ ನಡೆದ ಸಭೆಯಲ್ಲಿ ಯಾರೊಬ್ಬರೂ ನಾಯಕನನ್ನು ಕೈಬಿಡಲು ಮುಂದಾಗಲಿಲ್ಲ. ಏಕೆಂದರೆ, ಅದು ಮೂರ್ಖತನ ನಿರ್ಧಾರವಾಗುತ್ತಿತ್ತು' ಎಂದು ಮೂಲಗಳು ತಿಳಿಸಿವೆ.
ತಂಡ ಘೋಷಣೆಯಾಗಿ ಒಂದು ದಿನ ಕಳೆದಿದ್ದರೂ, ಅಕ್ಷರ್ ಪಟೇಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಿದ ಮತ್ತು ಶುಭಮನ್ ಗಿಲ್ ಅವರನ್ನು ತಂಡದಿಂದ ಕೈಬಿಟ್ಟ ಬಗ್ಗೆ ಚರ್ಚೆಗಳಾಗುತ್ತಲೇ ಇವೆ. 2026ರ ಹೊತ್ತಿಗೆ, ಯಾದವ್ ಮತ್ತು ಅವರ ತಂಡವು ಭಾರತವು ತಮ್ಮ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೇಗೆ ಯೋಜನೆಗಳನ್ನು ರೂಪಿಸುತ್ತದೆ ಎಂಬುದರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.