ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇಂಗ್ಲೆಂಡ್ ಟಾರ್ಗೆಟ್ ನ್ನು ಭಾರತ ಸುಲಭವಾಗಿ ತಲುಪಿತ್ತು. ಆದರೆ ಕೆಎಲ್ ರಾಹುಲ್ ಬ್ಯಾಟಿಂಗ್ ವಿಧಾನದ ಬಗ್ಗೆ ತೀವ್ರ ಅಸಮಾಧಾನಗಳು ವ್ಯಕ್ತವಾಗುತ್ತಿವೆ.
ಭಾರತಕ್ಕೆ ಗೆಲ್ಲಲು ಇಂಗ್ಲೆಂಡ್ ತಂಡ 249 ರನ್ ಗಳ ಟಾರ್ಗೆಟ್ ನೀಡಿತ್ತು. ಉತ್ತಮ ರನ್ ಚೇಸ್ ನಲ್ಲಿದ್ದ ಭಾರತ ತಂಡಕ್ಕೆ ಗೆಲ್ಲುವುದಕ್ಕೆ ಇನ್ನು ಕೇವಲ 28 ರನ್ ಗಳ ಅಗತ್ಯವಿದ್ದಾಗ 6 ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಕೆಎಲ್ ರಾಹುಲ್ ಗೆ ಬಂದರು. ಭಾರತದ ಗೆಲುವು ಆ ವೇಳೆಗೆ ಬಹುತೇಕ ಖಾತ್ರಿಯಾಗಿತ್ತು. ಇತ್ತ ಶುಭ್ಮನ್ ಗಿಲ್ ಶತಕದ ಸನಿಹದಲ್ಲಿದ್ದರು.
ತನ್ನ ಜೊತೆಯಾಟಗಾರ ಶತಕವನ್ನು ವೇಗವಾಗಿ ಪೂರೈಸಲಿ ಎಂಬ ಧೋರಣೆಯಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡ್ತಿದ್ರಾ? ಎಂಬ ಅನುಮಾನ ಮೂಡುವಂತೆ ಇತ್ತು ರಾಹುಲ್ ಬ್ಯಾಟಿಂಗ್ ಶೈಲಿ. ಕೆಎಲ್ ರಾಹುಲ್ ಅವರ ಈ ಬ್ಯಾಟಿಂಗ್ ಶೈಲಿಗೆ ಭಾರತದ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ.
ಶುಭ್ಮನ್ ಗಿಲ್ ಶತಕ ಸುಲಭವಾಗಲಿ ಎಂಬ ಧೋರಣೆಯಲ್ಲಿ ಆಡುತ್ತಿದ್ದ ಕೆಎಲ್ ರಾಹುಲ್ ಬ್ಯಾಟಿಂಗ್ ವೇಳೆ ತ್ವರಿತವಾಗಿ ಗಿಲ್ ಗೆ ಸ್ಟ್ರೈಕ್ ನೀಡುವ ಆತುರದಲ್ಲಿ ಕ್ಯಾಚ್ ಇತ್ತು ಪೆವಿಲಿಯನ್ ಗೆ ಮರಳಿದರು. ತಮ್ಮ ಬ್ಯಾಟಿಂಗ್ ಶೈಲಿಯ ನ್ಯೂನತೆಯಿಂದಾಗಿ ಔಟ್ ಆದರು ಎಂಬ ಅಸಮಾಧಾನವೂ ವ್ಯಕ್ತವಾಗತೊಡಾಗಿದೆ.
ಕಾಮೆಂಟರಿಯಲ್ಲಿ ಕೆಎಲ್ ರಾಹುಲ್ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುನಿಲ್ ಗವಾಸ್ಕರ್, ಕೆಎಲ್ ರಾಹುಲ್ ತಮ್ಮ ಸಹಜವಾದ ಬ್ಯಾಟಿಂಗ್ ಆಡಬೇಕು, ಶುಭ್ಮನ್ ಗಿಲ್ ಅವರ ಆದ್ಯತೆಯಾಗಬಾರದು ತಂಡ ಆದ್ಯತೆಯಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
"ಅವರು ತಮ್ಮ ಸಹಜ ಆಟವನ್ನು ಆಡಬೇಕು. ತಮ್ಮ ಸಂಗಾತಿಗೆ ಶತಕ ಗಳಿಸುವ ಅವಕಾಶವಿದೆ ಎಂದು ಖಚಿತಪಡಿಸಿಕೊಳ್ಳಲು ಅವರು ಆತುರದಲ್ಲಿದ್ದಾರೆ" ಎಂದು ಗವಾಸ್ಕರ್ ಕೆಎಲ್ ರಾಹುಲ್ ಅವರ ಆಟದ ಬಗ್ಗೆ ಕಾಮೆಂಟರಿಯಲ್ಲಿ ಮಾತನಾಡುತ್ತಿದ್ದರು.
ಅದಕ್ಕೆ ತಕ್ಕಂತೆ ಕೆಎಲ್ ರಾಹುಲ್ ಔಟ್ ಆದರು, ಇದರ ಬೆನ್ನಲ್ಲೇ ಮತನಾಡಿದ ಗವಾಸ್ಕರ್ "ಏನಾಯಿತು ನೋಡಿ. ನಾನು ಹೇಳುತ್ತಿದ್ದದ್ದು ಇದೇ. ಇದು ತಂಡದ ಆಟ, ನೀವು ಹಾಗೆ ಮಾಡಬೇಕಾಗಿಲ್ಲ. ಅವರು ತಮ್ಮ ಸಂಗಾತಿಗೆ ಶತಕ ಗಳಿಸಲು ಸಹಾಯ ಮಾಡಲು ಚೆಂಡನ್ನು ಟ್ಯಾಪ್ ಮಾಡಲು ನೋಡುತ್ತಿದ್ದರು. ಅದು ಅರ್ಧ ಮನಸ್ಸಿನ ಹೊಡೆತವಾಗಿತ್ತು" ಎಂದು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ ರಾಹುಲ್ ಔಟಾದ ಮುಂದಿನ ಓವರ್ ನಲ್ಲೇ 87 ರನ್ ಗಳನ್ನು ಗಳಿಸಿದ ಗಿಲ್ ಸಹ ಔಟ್ ಆದರು.
ಗುರುವಾರ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿತು.