ಢಾಕಾ: ಬಾಂಗ್ಲಾದೇಶದ ಅನುಭವಿ ಆಟಗಾರ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕರ್ ರಹೀಮ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಬಾಂಗ್ಲಾದೇಶ ತಂಡವು ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಯಾವುದೇ ಗೆಲುವು ಇಲ್ಲದೆ ನಿರ್ಗಮಿಸಿದ ಬೆನ್ನಲ್ಲೇ ಮುಷ್ಫಿಕರ್ ರಹೀಂ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.
ಈ ಕುರಿತು ಪೋಸ್ಟ್ ಹಾಕಿರುವ ಅವರು, 'ಇಂದಿನಿಂದಲೇ ನಾನು ಏಕದಿನ ಸ್ವರೂಪದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ನಮ್ಮ ಸಾಧನೆಗಳು ಜಾಗತಿಕ ಮಟ್ಟದಲ್ಲಿ ಸೀಮಿತವಾಗಿರಬಹುದು, ಆದರೆ ಒಂದು ವಿಷಯ ಖಚಿತ: ನಾನು ನನ್ನ ದೇಶಕ್ಕಾಗಿ ಮೈದಾನಕ್ಕೆ ಬಂದಾಗಲೆಲ್ಲಾ, ನಾನು 100% ಕ್ಕಿಂತ ಹೆಚ್ಚು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಸಾಧ್ಯವಾದದ್ದನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.
ಅಂತೆಯೇ "ಕಳೆದ ಕೆಲವು ವಾರಗಳು ನನಗೆ ತುಂಬಾ ಸವಾಲಿನದ್ದಾಗಿತ್ತು. ಇದು ನನ್ನ ಹಣೆಬರಹ ಎಂದು ನಾನು ಅರಿತುಕೊಂಡಿದ್ದೇನೆ. ಕಳೆದ 19 ವರ್ಷಗಳಿಂದ ನಾನು ಕ್ರಿಕೆಟ್ ಆಡುತ್ತಿದ್ದು, ಇದಕ್ಕಾಗಿ ಸಹಕರಿಸಿದ ನನ್ನ ಕುಟುಂಬ, ಸ್ನೇಹಿತರು ಮತ್ತು ನನ್ನ ಅಭಿಮಾನಿಗಳಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಮುಶ್ಫಿಕರ್ ರಹೀಂ ಪೋಸ್ಚ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು 2005ರಲ್ಲಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಮುಶ್ಫಿಕರ್ ರಹೀಂ, 2006 ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಬಾಂಗ್ಲಾದೇಶ ಪರ 94 ಟೆಸ್ಟ್ ಪಂದ್ಯಗಳನ್ನಾಡಿರುವ ಮುಶ್ಫಿಕರ್ ರಹೀಂ 11 ಶತಕ ಮತ್ತು 27 ಅರ್ಧಶತಕಗಳ ಸಹಿತ 6007 ಕಲೆಹಾಕಿದ್ದಾರೆ. ಕೀಪಿಂಗ್ ನಲ್ಲಿ ಅವರು 111 ಕ್ಯಾಚ್ ಮತ್ತು 15 ಸ್ಟಂಪಿಂಗ್ ಮಾಡಿದ್ದಾರೆ.
ಅಂತೆಯೇ 274 ಏಕದಿನ ಪಂದ್ಯಗಳನ್ನಾಡಿರುವ ಅವರು, 9 ಶತಕ ಮತ್ತು 49 ಅರ್ಧಶತಕಗಳ ಸಹಿತ 7795 ರನ್ ಕಲೆಹಾಕಿದ್ದಾರೆ. ಕೀಪಿಂಗ್ ನಲ್ಲಿ ಅವರು 243 ಕ್ಯಾಚ್ ಮತ್ತು 56 ಸ್ಟಂಪಿಂಗ್ ಮಾಡಿದ್ದಾರೆ. ಇನ್ನು ಟಿ20ಯಲ್ಲಿ 102 ಪಂದ್ಯಗಳನ್ನಾಡಿದ್ದು, ಈ ಪೈಕಿ 6 ಅರ್ಧಶತಕಗಳೊಂದಿಗೆ 1500 ರನ್ ಕಲೆಹಾಕಿದ್ದಾರೆ. ಕೀಪಿಂಗ್ ನಲ್ಲಿ ಅವರು 42 ಕ್ಯಾಚ್ ಮತ್ತು 30 ಸ್ಟಂಪಿಂಗ್ ಮಾಡಿದ್ದಾರೆ.
ವಿಶ್ವಕಪ್ ಟೂರ್ನಿಯಿಂದ ಭಾರತವನ್ನೇ ಹೊರದಬ್ಬಿದ್ದ ಬಾಂಗ್ಲಾ
2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಕೇವಲ 191 ರನ್ ಗಳಿಗೆ ಆಲೌಟ್ ಮಾಡಿದ್ದ ಬಾಂಗ್ಲಾದೇಶ ತಂಡ ಬಳಿಕ 48.3 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು 192ರನ್ ಕಲೆಹಾಕಿ ಭರ್ಜರಿಯಾಗಿ ಗೆದ್ದಿತ್ತು. ಅಂದಿನ ಬಾಂಗ್ಲಾದೇಶ ತಂಡದ ಗೆಲುವು ಭಾರತ ತಂಡವನ್ನು ವಿಶ್ವಕಪ್ ಟೂರ್ನಿಯಿಂದಲೇ ಹೊರಬೀಳುವಂತೆ ಮಾಡಿತ್ತು. ಅಂದು ಇದೇ ಮುಶ್ಫಿಕರ್ ರಹೀಂ ಭಾರತದ ವಿರುದ್ಧ 56 ರನ್ ಗಳಿಸಿ ಬಾಂಗ್ಲಾದೇಶದ ಗೆಲುವಿನ ರೂವಾರಿಯಾಗಿದ್ದರು.
ನಾಗಿನ್ ಡ್ಯಾನ್ಸ್ ಮೂಲಕ ಕುಖ್ಯಾತಿ
2018ರಲ್ಲಿ ನಡೆದ ನಿಡಹಾಸ್ ತ್ರಿಕೋನ ಟಿ20 ಸರಣಿಯಲ್ಲಿ ಬಾಂಗ್ಲಾದೇಶದ ಈ ನಾಗಿನ್ ಡ್ಯಾನ್ಸ್ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಅಂದು ಪಂದ್ಯವೊಂದರಲ್ಲಿ ಶ್ರೀಲಂಕಾ ವಿರುದ್ಧ ಗೆದ್ದಿದ್ದ ಬಾಂಗ್ಲಾದೇಶ ತಂಡ ಟೂರ್ನಿಯ ಪೈನಲ್ ಗೇರಿ ಶ್ರೀಲಂಕಾವನ್ನು ಟೂರ್ನಿಯಿಂದ ಹೊರದಬ್ಬಿತ್ತು. ಬಳಿಕ ಇಡೀ ಮೈದಾನದಲ್ಲಿ ಶ್ರೀಲಂಕಾ ತಂಡವನ್ನು ಅಣಕಿಸುವಂತೆ ನಾಗಿನ್ ಡ್ಯಾನ್ಸ್ ಮಾಡಿತ್ತು. ಆದರೆ ಟೂರ್ನಿಯ ಫೈನಲ್ ನಲ್ಲಿ ಭಾರತ ತಂಡ ಇದೇ ಬಾಂಗ್ಲಾದೇಶ ತಂಡವನ್ನು ವಿರೋಚಿತವಾಗಿ ಮಣಿಸಿ ಕಪ್ ಎತ್ತಿ ಹಿಡಿದಿತ್ತು. ಅಂದು ಭಾರತದ ದಿನೇಶ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಭಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.