2025ರ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ತಾರೆ ಡೇವಿಡ್ ಲಾಯ್ಡ್ ಟೀಕಿಸಿದ್ದಾರೆ. ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದ ನಂತರ ತನ್ನೆಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿದೆ. ಇದರ ಪರಿಣಾಮವಾಗಿ, ಟೀಂ ಇಂಡಿಯಾ ತಮ್ಮ ಸೆಮಿಫೈನಲ್ ದಿನಾಂಕವನ್ನು ಮೊದಲೇ ತಿಳಿದಿದ್ದರು. ಆದರೆ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಗುಂಪು ಹಂತದ ಪಂದ್ಯಗಳ ನಂತರ ಪ್ರಯಾಣ ಯೋಜನೆಗಳನ್ನು ಬದಲಿಸಬೇಕಾಯಿತು. ಭಾರತವು ಒಂದೇ ಕ್ರೀಡಾಂಗಣದಲ್ಲಿ ಆಡುತ್ತಿರುವುದರಿಂದಲೇ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಿದೆ. ಈ 'ಅನ್ಯಾಯದ ಪ್ರಯೋಜನವನ್ನು' ಪಡೆದಿದೆ ಎಂದು ಅನೇಕ ಹಿರಿಯ ಆಟಗಾರರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಲಾಯ್ಡ್ ಐಸಿಸಿ ವ್ಯವಸ್ಥೆಗಳನ್ನು 'ಮುಜುಗರ' ಮತ್ತು 'ನಗೆಪಾಟಲು' ಎಂದು ಕರೆದಿದ್ದು, ಅದು ಕ್ರಿಕೆಟಿಗರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹೇಳಿದ್ದಾರೆ.
'ವಿಶ್ವ ಕ್ರಿಕೆಟ್ನಲ್ಲಿ ಚಾಂಪಿಯನ್ಸ್ ಟ್ರೋಫಿಯು ಅತ್ಯುನ್ನತ, ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಆದರೆ, ಆಟದ ವ್ಯವಸ್ಥೆಗಳು ಹಾಸ್ಯಾಸ್ಪದವಾಗಿವೆ ಎಂಬುದು ನಿಜಕ್ಕೂ ಮುಜುಗರದ ಸಂಗತಿ. ನೀವು ಆ ರೀತಿಯ ವ್ಯವಸ್ಥೆ ಮಾಡಿರುವುದು ನಗೆಪಾಟಲಿಗೆ ಈಡಾಗುತ್ತದೆ. ಇದನ್ನ ವಿವರಿಸಲು ನನಗೆ ಪದಗಳೇ ಸಿಗುತ್ತಿಲ್ಲ' ಎಂದಿದ್ದಾರೆ.
'ಇದು ಕೇವಲ ಅಸಂಬದ್ಧ. ಇದನ್ನು ಬೇರೆ ಯಾವ ರೀತಿಯಲ್ಲಿ ವಿವರಿಸಬೇಕು ಎಂದು ನನಗೆ ನಿಜವಾಗಿಯೂ ತಿಳಿದಿಲ್ಲ. ತಂಡಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಬೇಕಾಗಿದ್ದು, ಅವರು ಎಲ್ಲಿ ಆಡುತ್ತಾರೆ ಅಥವಾ ಆಡುವುದಿಲ್ಲ ಎಂಬುದರ ಬಗ್ಗೆ ಸ್ಪಷ್ಟ ಯೋಜನೆ ಇಲ್ಲ. ಇದೊಂದು ಪ್ರಮುಖ ಕಾರ್ಯಕ್ರಮವಾಗಿರುವುದರಿಂದ ಇಂತಹ ಅಸ್ತವ್ಯಸ್ತತೆಯು ಸ್ವೀಕಾರಾರ್ಹವಲ್ಲ' ಎಂದರು.
'ನಾನು ತುಂಬಾ ಹಾಸ್ಯಪ್ರಿಯ ವ್ಯಕ್ತಿ ಮತ್ತು ಅದು ನಿಜಕ್ಕೂ ತುಂಬಾ ತಮಾಷೆ ಎಂದು ನಾನು ಭಾವಿಸುತ್ತೇನೆ. ಆದರೆ, ನಾನು ಆಟಗಾರರಲ್ಲಿ ಒಬ್ಬನಾಗಿದ್ದರೆ ಅದು ಅಷ್ಟು ತಮಾಷೆಯಲ್ಲ' ಎಂದು ಅವರು ಹೇಳಿದರು.
ಈಮಧ್ಯೆ, ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್ ಶತಕಗಳನ್ನು ಸಿಡಿಸಿದರು. ಬುಧವಾರ ಲಾಹೋರ್ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ 50 ರನ್ಗಳ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದ್ದು, ಮಾರ್ಚ್ 9ರಂದು ದುಬೈನಲ್ಲಿ ಭಾರತ ನ್ಯೂಜಿಲೆಂಡ್ ಪ್ರಶಸ್ತಿಗಾಗಿ ಸೆಣೆಸಲಿವೆ.
2000, 2002, 2006 ಮತ್ತು 2013 ರಲ್ಲಿಯೂ ಸೆಮಿಫೈನಲ್ ತಲುಪಿದ್ದ ದಕ್ಷಿಣ ಆಫ್ರಿಕಾ ಪಂದ್ಯ ಸೋತಿತ್ತು. ಇದೀಗ ಐದನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಸೋಲು ಕಂಡಿದೆ.