ಗುರುವಾರ ನಡೆದ ಐಪಿಎಲ್ 2025ನೇ ಆವೃತ್ತಿಯ ಏಳನೇ ಪಂದ್ಯದ ಯೂಟ್ಯೂಬ್ ಲೈವ್ ಸೆಷನ್ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ರಿಷಭ್ ಪಂತ್ ಬ್ಯಾಟಿಂಗ್ ವೈಖರಿಗೆ ನಿರಾಶೆಗೊಂಡ ನಿರೂಪಕ, ಕೋಪದಿಂದ ಟೆಲಿವಿಷನ್ ಸೆಟ್ ಅನ್ನು ಒಡೆದು ಹಾಕಿದ್ದಾರೆ. ದೆಹಲಿ ಕ್ಯಾಪಿಟಲ್ಸ್ (DC) ವಿರುದ್ಧದ ಪಂದ್ಯದಲ್ಲೂ ಪಂತ್ ಆರು ಎಸೆತಗಳಿಗೆ ಶೂನ್ಯಕ್ಕೆ ಔಟಾಗಿದ್ದರು. ಇದೀಗ ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಪಂತ್ ಮತ್ತೊಮ್ಮೆ ಎಡವಿದ್ದಾರೆ. ಪಂತ್ 15 ಎಸೆತಗಳಲ್ಲಿ 15 ರನ್ ಗಳಿಸಿ ಔಟ್ ಆಗಿದ್ದಾರೆ.
ಪಂತ್ ಅವರ ಮತ್ತೊಂದು ಕಳಪೆ ಆಟಕ್ಕೆ ಕೋಪಗೊಂಡ ಕ್ರೀಡಾ ನಿರೂಪಕ ಪಂಕಜ್, ತಾಳ್ಮೆ ಕಳೆದುಕೊಂಡು ಟಿವಿ ಪರದೆಗೆ ಒಡೆಯುತ್ತಾರೆ ಮತ್ತು ತಮ್ಮ ಮುಂದಿದ್ದ ಗಾಜಿನ ಮೇಜನ್ನು ತಳ್ಳುತ್ತಾರೆ. ಪಂಕಜ್ ಪಂತ್ ಅವರನ್ನು ಟೀಕಿಸುತ್ತಿದ್ದಾಗ ಚರ್ಚೆಯಲ್ಲಿ ಭಾಗವಹಿಸಿದ್ದ ಹಿರಿಯ ಕ್ರೀಡಾ ಪತ್ರಕರ್ತ ವಿಕ್ರಾಂತ್ ಗುಪ್ತಾ ಅವರು ಮುಗುಳ್ನಗೆ ಸೂಸುತ್ತಾರೆ.
'ಐಪಿಎಲ್ ನಡೆಯುತ್ತಿದೆ. ಅವರಿಗೆ (ರಿಷಭ್ ಪಂತ್) ಅವಕಾಶ ಸಿಕ್ಕಿದೆ. ಆದರೆ, ನಾನು ಹೇಳುತ್ತಿದ್ದೇನೆ. ಅವರ ಆಟ ಹೇಗಿರುತ್ತದೆ ಎಂಬುದನ್ನು ಮೊದಲೇ ಊಹಿಸಬಹುದಾಗಿದೆ. ನೀವು ಅವರನ್ನು ನಂಬಲು ಸಾಧ್ಯವಿಲ್ಲ. ಅವರು ಯಾವ ರೀತಿಯ ನಾಯಕ? ನಮಗೆ ಅವರಂತಹ ನಾಯಕ ಅಗತ್ಯವಿಲ್ಲ' ಎಂದು ಸ್ಪೋರ್ಟ್ಸ್ ತಕ್ನಲ್ಲಿ ನಡೆದ ನೇರ ಚರ್ಚೆಯ ಸಂದರ್ಭದಲ್ಲಿ ಪಂಕಜ್ ಹೇಳಿದರು.
ಅಭಿಮಾನಿಗಳು ಯೂಟ್ಯೂಬ್ನಲ್ಲಿ ಈ ಕ್ಲಿಪ್ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದು, ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಪಂತ್ ಅವರ ವಿಕೆಟ್ ಪತನವು ಪಂದ್ಯದ ಫಲಿತಾಂಶದ ಮೇಲೆ ನಿಜವಾಗಿಯೂ ಪರಿಣಾಮ ಬೀರಲಿಲ್ಲ. ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಎಲ್ಎಸ್ಜಿ 5 ವಿಕೆಟ್ಗಳಿಂದ ಪಂದ್ಯವನ್ನು ಗೆದ್ದಿದೆ. ಪಂದ್ಯದ ನಂತರ, ಪಂತ್ ಈ ಫಲಿತಾಂಶ ತಂಡಕ್ಕೆ ಬಿಗ್ ರಿಲೀಫ್ ನೀಡಿದೆ ಎಂದಿದ್ದಾರೆ.
ಟಾಸ್ ಗೆದ್ದ ಎಲ್ಎಸ್ಜಿ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಎಚ್ ತಂಡಕ್ಕೆ ಎಲ್ಎಸ್ಜಿ ಬೌಲರ್ಗಳು ಕಾಡಿದರು. ಶಾರ್ದೂಲ್ ಠಾಕೂರ್ ಅವರು 32 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ನೆರವಾದರು. SRH ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 190 ರನ್ ಗಳಿಸಲಷ್ಟೇ ಶಕ್ತವಾಯಿತು.
ಎಲ್ಎಸ್ಜಿ ಪರ ಆವೇಶ್ ಖಾನ್, ಪ್ರಿನ್ಸ್ ಯಾದವ್, ದಿಗ್ವೇಶ್ ರಥಿ ಮತ್ತು ರವಿ ಬಿಷ್ಣೋಯ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.