ರೊಮಾರಿಯೊ ಶೆಫರ್ಡ್ 
ಕ್ರಿಕೆಟ್

IPL 2025: 'kill them softly'; ಸಕ್ಸಸ್ ಮಂತ್ರವನ್ನು ಪಠಿಸಿದ RCB ಫಿನಿಷರ್ ರೊಮಾರಿಯೊ ಶೆಫರ್ಡ್!

'ಇಂದು ನನಗೆ ಅವಕಾಶ ಸಿಕ್ಕಿತು. ನಾನು ಬಹಳ ಸಮಯದಿಂದ ಕಾಯುತ್ತಿದ್ದೆ. ಅಂತಿಮವಾಗಿ ಬ್ಯಾಟಿಂಗ್ ಮಾಡಲು ಅವಕಾಶ ದೊರೆಯಿತು ಮತ್ತು ತಂಡಕ್ಕೆ ಉತ್ತಮ ಫಿನಿಶ್ ನೀಡಲು ಬಯಸಿದ್ದೆ' ಎಂದರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಐಪಿಎಲ್‌ನಲ್ಲಿ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಸಿಎಸ್‌ಕೆ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ ತಂಡದ ಪವರ್-ಹಿಟ್ಟರ್ ರೊಮಾರಿಯೊ ಶೆಫರ್ಡ್, 'ಅವರನ್ನು ಮೃದುವಾಗಿ ಕೊಲ್ಲು' ಎಂಬ ಸಕ್ಸಸ್ ಮಂತ್ರವನ್ನು ಬಹಿರಂಗಪಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 18ನೇ ಆವೃತ್ತಿಯ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ಶೆಫರ್ಡ್‌ ಅವರ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವು ಆರ್‌ಸಿಬಿ ತಂಡ ಬೃಹತ್ ಮೊತ್ತವನ್ನು ಕಲೆಹಾಕಲು ನೆರವಾಯಿತು. ಸಿಎಸ್‌ಕೆಯನ್ನು ಸೋಲಿನ ಅಂಚಿಗೆ ತಳ್ಳಿತು. ಕೊನೆಯ ಓವರ್‌ನಲ್ಲಿ, ಸಿಎಸ್‌ಕೆ ಬೌಲರ್ ಖಲೀಲ್ ಅಹ್ಮದ್ ಅವರ ನೀರಿಳಿಸಿದರು. ಒಂದೇ ಓವರ್‌ನಲ್ಲಿ 33 ರನ್‌ಗಳಿಗೆ ಮಿಂಚಿದರು. ಮತೀಷ ಪತಿರಾಣಾ ಅವರ ಐದು ಎಸೆತದಲ್ಲಿಯೂ ಶೆಫರ್ಡ್ 20 ರನ್ ಗಳಿಸಿದರು. ಈ ಮೂಲಕ ಆರ್‌ಸಿಬಿ ತಂಡವು 5 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಲು ನೆರವಾದರು.

ಕೆರಿಬಿಯನ್ ತಾರೆ 14 ಎಸೆತಗಳಲ್ಲಿ 53 ರನ್ ಗಳಿಸಿ ಅಜೇಯರಾಗುಳಿದರು. ಇದು ಲೀಗ್ ಇತಿಹಾಸದಲ್ಲಿಯೇ ಎರಡನೇ ಅತ್ಯಂತ ವೇಗದ ಅರ್ಧಶತಕವಾಗಿದೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಮಾತನಾಡಿದ 30 ವರ್ಷದ ಆಟಗಾರ, ತಮ್ಮ ಬೇಸ್ ಮತ್ತು ಸ್ವಿಂಗ್ ಅನ್ನು ಬಳಸಿ ಶಕ್ತಿಯುತ ಬ್ಯಾಟಿಂಗ್ ಮಾಡುವುದಾಗಿ ಹಂಚಿಕೊಂಡರು. 'ಇಂದು ನನಗೆ ಅವಕಾಶ ಸಿಕ್ಕಿತು. ನಾನು ಬಹಳ ಸಮಯದಿಂದ ಕಾಯುತ್ತಿದ್ದೆ. ಅಂತಿಮವಾಗಿ ಬ್ಯಾಟಿಂಗ್ ಮಾಡಲು ಅವಕಾಶ ದೊರೆಯಿತು ಮತ್ತು ತಂಡಕ್ಕೆ ಉತ್ತಮ ಫಿನಿಶ್ ನೀಡಲು ಬಯಸಿದ್ದೆ' ಎಂದರು.

ರೊಮಾರಿಯೊ ಶೆಫರ್ಡ್

'ನಾನು ಸ್ಕೋರ್ ಬಗ್ಗೆ ಯೋಚಿಸುತ್ತಿರಲಿಲ್ಲ. ನನ್ನೆಡೆಗೆ ಬರುವ ಪ್ರತಿಯೊಂದು ಚೆಂಡಿನ ಬಗ್ಗೆ ಯೋಚಿಸುದ್ದೆ. ಒಂದೊಂದು ಚೆಂಡನ್ನು ನಾಲ್ಕು ಅಥವಾ ಸಿಕ್ಸ್ ಹೊಡೆಯಲು ಪ್ರಯತ್ನಿಸುತ್ತಿದ್ದೆ. ಟಿಮ್ಮಿ ನನಗೆ ರಿಲ್ಯಾಕ್ಸ್ ಆಗಲು ಮತ್ತು ಪ್ರಯತ್ನಿಸಲು ಹೇಳಿದರು ಮತ್ತು ನಾನು ಅದನ್ನೇ ಮಾಡಿದೆ' ಎಂದು ಅವರು ಹೇಳಿದರು.

ಪಂದ್ಯಾವಳಿಯ ಆರಂಭಿಕ ಹಂತದಲ್ಲಿ, ಆರ್‌ಸಿಬಿ ಬ್ಯಾಟಿಂಗ್ ಘಟಕ ಕೊಂಚ ಹೆಣಗಾಡುತ್ತಿತ್ತು. ಆದರೆ, ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರ ಆಗಮನದಿಂದ ಎಲ್ಲವೂ ಬದಲಾಯಿತು. ಅದು ಅಂತಿಮವಾಗಿ ಫಲ ನೀಡಿತು.

'ಮೊದಲ ಎರಡು ಪಂದ್ಯಗಳಲ್ಲಿ, ನಾವು ಬ್ಯಾಟಿಂಗ್ ಘಟಕವಾಗಿ ವಿಫಲರಾಗುತ್ತಿದ್ದೆವು. ದಿನೇಶ್ ಕಾರ್ತಿಕ್ ಅವರು ನಮ್ಮನ್ನು ಕರೆದುಕೊಂಡು ಹೋಗಿ ಪ್ರತಿಯೊಬ್ಬರಿಗೂ ತಮ್ಮ ರೋಲ್ ಏನೆಂಬುದನ್ನು ಮತ್ತು ಏನು ಮಾಡಬೇಕೆಂಬುದನ್ನು ವಿವರಿಸಿದರು. ಅದು ಇಂದು ಫಲ ನೀಡಿತು' ಎಂದು ಶೆಫರ್ಡ್ ಹೇಳಿದರು.

ಶೆಫರ್ಡ್ ಬ್ಯಾಟಿಂಗ್‌ನಲ್ಲಿ ಮಿಂಚಿದರೂ, ಬೌಲಿಂಗ್‌ ಕೂಡ ಮಾಡಿದರು.

'ನಾನು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ 50-50 ಗಳಿಸಲು ಪ್ರಯತ್ನಿಸುತ್ತೇನೆ; ಆದರೆ, ಇಂದು ಬೌಲಿಂಗ್ ಉತ್ತಮವಾಗಿರಲಿಲ್ಲ. ಬೌಲಿಂಗ್ ವಿಚಾರದಲ್ಲಿ ಇದು ಕೆಟ್ಟ ದಿನವಾಗಿತ್ತು. ಆದರೆ, ನಮ್ಮ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿತು ಮತ್ತು ನಮ್ಮನ್ನು ಗೆಲುವಿನ ದಡ ಮುಟ್ಟಿಸಲು ನೆರವಾಯಿತು. ಲುಂಗಿ ಎನ್‌ಗಿಡಿ ಮತ್ತು ಭುವಿ ಉತ್ತಮ ಬೌಲಿಂಗ್ ಮಾಡಿದರು. ನನ್ನ ಮಂತ್ರ 'ಅವರನ್ನು ಮೃದುವಾಗಿ ಕೊಲ್ಲು' ಎಂದು ಮಾತು ಮುಗಿಸಿದರು.

ಪಂದ್ಯಕ್ಕೆ ಬಂದಾಗ, ವಿರಾಟ್ ಕೊಹ್ಲಿ (62), ಜಾಕೋಬ್ ಬೆಥೆಲ್ (55) ಮತ್ತು ಶೆಫರ್ಡ್ (53*) ಅವರ ಅದ್ಭುತ ಪ್ರದರ್ಶನವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 213/5 ಗಳಿಸಲು ನೆರವಾಯಿತು. ಇದಕ್ಕೆ ಉತ್ತರವಾಗಿ, ಚೆನ್ನೈ ತಂಡದ ಆಯುಷ್ ಮ್ಹಾತ್ರೆ (94) ಮತ್ತು ರವೀಂದ್ರ ಜಡೇಜಾ (77*) ಅವರ ಉತ್ತಮ ಪ್ರದರ್ಶನ ನೀಡಿದರು. ಆದರೆ, ಗೆಲ್ಲುಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT