ನವದೆಹಲಿ: ಕಳೆದ ವಾರ ನಡೆದ ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅದ್ಭುತ ಜಯ ಸಾಧಿಸಿ ಟ್ರೋಫಿಗೆ ಮುತ್ತಿಟ್ಟಿದ್ದು, ತಂಡದ ಗೆಲುವಿಗೆ ಕಾರಣರಾಗಿದ್ದ ಭಾರತದ ಸ್ಟಾರ್ ಆಟಗಾರನ ಕೋಚ್ ಮಾತು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಕಳೆದ ಭಾನುವಾರ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಸ್ಫೋಟಕ ಬ್ಯಾಟಿಂಗ್ ಗೆ ಬ್ರೇಕ್ ಹಾಕಿದ ಭಾರತದ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್, 4 ಓವರ್ ನಲ್ಲಿ ಕೇವಲ 30 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದ್ದರು.
ಕುಲದೀಪ್ ಯಾದವ್ ಅವರ ಹೀರೋಯಿಕ್ ಪ್ರದರ್ಶನದ ಫಲವಾಗಿ ಬೃಹತ್ ಮೊತ್ತ ಪೇರಿಸಬೇಕಿದ್ದ ಪಾಕಿಸ್ತಾನ 146 ರನ್ ಗಳ ಸಾಧಾರಣ ಮೊತ್ತಕ್ಕೆ ಕುಸಿದಿತ್ತು.
ಇದೀಗ ಇದೇ ಕುಲದೀಪ್ ಯಾದವ್ ಕುರಿತು ಅವರ ಬಾಲ್ಯದ ಕೋಚ್ ಕಪಿಲ್ ದೇವ್ ಪಾಂಡೆ ನೀಡಿರುವ ಹೇಳಿಕೆ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಸ್ಪಿನ್ನರ್ ಅದ್ಭುತ ಪ್ರದರ್ಶನದ ಹಿಂದಿನ ಕಾರಣವನ್ನು ಕುಲ್ದೀಪ್ ಯಾದವ್ ಅವರ ಬಾಲ್ಯದ ಕೋಚ್ ಕಪಿಲ್ ದೇವ್ ಪಾಂಡೆ ಬಹಿರಂಗಪಡಿಸಿದ್ದಾರೆ.
ಪಾಕಿಗಳ ನೋಡಿದ್ರೆ ಅವನ ರಕ್ತ ಕುದಿಯುತ್ತಿತ್ತು
ಸಂದರ್ಶನದಲ್ಲಿ ಮಾತನಾಡಿರುವ ಕೋಚ್ ಕಪಿಲ್ ದೇವ್ ಪಾಂಡೆ, ' ಪಾಕಿಸ್ತಾನವನ್ನು ನೋಡಿದಾಗ ಕುಲ್ದೀಪ್ ಅವರ ರಕ್ತ ಕುದಿಯುತ್ತಿತ್ತು. ಪಾಕಿಸ್ತಾನ ಈ ಬಾರಿ ಮಕ್ಕಳು ಮತ್ತು ಹವ್ಯಾಸಿಗಳ ತಂಡವನ್ನು ಕಳುಹಿಸಿದೆ ಎಂದು ಮಾಜಿ ಸೈನಿಕರೂ ಕೂಡ ಆಗಿರುವ ಕಪಿಲ್ ದೇವ್ ಪಾಂಡೆ ವ್ಯಂಗ್ಯ ಮಾಡಿದ್ದಾರೆ.
ಅಂತೆಯೇ ಕುಲ್ದೀಪ್ ಯಾವಾಗಲೂ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸುತ್ತಾನೆ. ಪ್ರಮುಖವಾಗಿ ಪಾಕಿಸ್ತಾನದ ವಿರುದ್ಧ ತನ್ನ ಸಂಪೂರ್ಣ ಅತ್ಯುತ್ತಮ ಪ್ರದರ್ಶನ ನೀಡುತ್ತಾನೆ. ನಾನು ಕುಲದೀಪ್ಗೆ ಹೇಳಿದ್ದೆ, ನಿಮ್ಮ ಕೋಚ್ ಒಬ್ಬ ಸೈನಿಕ. ಶಿಸ್ತು ನನ್ನ ರಕ್ತದಲ್ಲೇ ಇದೆ. ಶಿಸ್ತಿನಿಂದ ಆಟವಾಡು. ನೀವು ಪಾಕಿಸ್ತಾನದ ವಿರುದ್ಧ ಸೋಲಬಾರದು ಎಂದು ಹೇಳಿದ್ದೆ. ಇದನ್ನು ಕುಲ್ದೀಪ್ ಯಾದವ್ ಇದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದು ಕಪಿಲ್ ದೇವ್ ಪಾಂಡೆ ಹೇಳಿದ್ದಾರೆ.
ಅದ್ಭುತ ಆರಂಭ ಪಡೆದಿದ್ದ ಪಾಕ್ ದಿಢೀರ್ ಕುಸಿತ
ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಅದ್ಭುತ ಆರಂಭ ಕಂಡಿದ್ದ ಪಾಕಿಸ್ತಾನ ತಂಡ ನಂತರ ಕುಲದೀಪ್ ಯಾದವ್ ರ ಪ್ರಭಾವಿ ಬೌಲಿಂಗ್ ದಾಳಿಗೆ ಪತರಗುಟ್ಟಿತು. 12 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿದ್ದ ಪಾಕಿಸ್ತಾನ ಕೇವಲ 33 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.
ಬಳಿಕ ಚೇಸಿಂಗ್ ನಲ್ಲಿ ತಿಲಕ್ ವರ್ಮಾ ಅವರ ಅಜೇಯ 69 ರನ್ಗಳಿಸಿ ಭಾರತವು ಎರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿಸಿದರು.
ಕುಲದೀಪ್ ಮಾರಕ ಬೌಲಿಂಗ್
ಕುಲದೀಪ್ ಯಾದವ್ ಕೇವಲ 30 ರನ್ ನೀಡಿ ನಾಲ್ಕು ವಿಕೆಟ್ಗಳನ್ನು ಕಬಳಿಸುವ ಮೂಲಕ ಪಂದ್ಯವನ್ನು ತಲೆಕೆಳಗಾಗಿಸಿದರು. ಫೈನಲ್ ಪಂದ್ಯ ಮಾತ್ರವಲ್ಲದೇ ಪಾಕ್ ವಿರುದ್ಧ ಏಷ್ಯಾಕಪ್ ಸರಣಿಯಲ್ಲಿ ಭಾರತ ಒಟ್ಟು 3 ಪಂದ್ಯಗಳನ್ನಾಡಿದೆ.
ಈ ಮೂರು ಪಂದ್ಯಗಳಲ್ಲಿ ಎಂಟು ವಿಕೆಟ್ಗಳು ಸೇರಿದಂತೆ ಇಡೀ ಟೂರ್ನಿಯಲ್ಲಿ ಒಟ್ಟು 17 ವಿಕೆಟ್ ಕಬಳಿಸಿದ್ದಾರೆ. 2025 ರ ಟೂರ್ನಮೆಂಟ್ನಲ್ಲಿ 17 ವಿಕೆಟ್ಗಳೊಂದಿಗೆ ಕುಲ್ದೀಪ್ ವನಿಂದು ಹಸರಂಗ ಅವರೊಂದಿಗೆ ಏಷ್ಯಾ ಕಪ್ ಟಿ20ಐ ಆವೃತ್ತಿಯಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.