ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಕೆಎಲ್ ರಾಹುಲ್ ಪೆಟ್ಟು ತಿಂದು ಮೈದಾನದಲ್ಲೇ ಒದ್ದಾಡಿದ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ಹೊಸ್ತಿಲಲ್ಲಿದ್ದು, ಅಂತಿಮ ದಿನ ಗೆಲುವಿನ ಔಪಚಾರಿಕತೆ ಮುಕ್ತಾಯಗೊಳಿಸಲಿದೆ.
ಈ ನಡುವೆ ಭಾರತದ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ಗೆ ಗಾಯದ ಭೀತಿ ಎದುರಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಭಾರತದ ಬೃಹತ್ ಮೊತ್ತದಲ್ಲಿ ಒಂದು ಕಾರಣರಾಗಿದ್ದ ಕೆಎಲ್ ರಾಹುಲ್ 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು.
ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ತಮ್ಮ ಲಯ ಕಂಡುಕೊಂಡಿರುವ ರಾಹುಲ್ ಅಜೇಯ 25 ರನ್ ಗಳಿಸಿದ್ದಾರೆ. ಭಾರತಕ್ಕೆ ಗೆಲುವಿಗೆ ಇನ್ನೂ 58 ರನ್ ಗಳು ಮಾತ್ರ ಬಾಕಿ ಇದೆ.
ವಿಂಡೀಸ್ ವೇಗಿಯ ಪೆಟ್ಟಿಗೆ ಮೈದಾನದಲ್ಲೇ ಒದ್ದಾಡಿದ ಕೆಎಲ್ ರಾಹುಲ್
ಇನ್ನು ಭಾರತದ 2ನೇ ಇನ್ನಿಂಗ್ಸ್ ವೇಳೆ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಗೆ ಪೆಟ್ಟು ತಗುಲಿದೆ. ಈ ಪೆಟ್ಟು ಎಷ್ಟು ಗಟ್ಟಿಯಾಗಿತ್ತು ಎಂದರೆ ಮೈದಾನದಲ್ಲೇ ಕೆಎಲ್ ರಾಹುಲ್ ಒಂದಷ್ಟು ಸಮಯ ಒದ್ದಾಡಿದರು. ವಿಂಡೀಸ್ ವೇಗಿ ಎಸೆದ ಘಾತುಕ ವೇಗದ ಎಸೆತದಿಂದಾಗಿ ನೋವಿನಿಂದಾಗಿ ಕೆಎಲ್ ರಾಹುಲ್ ನರಳಬೇಕಾಯಿತು.
ಆಗಿದ್ದೇನು?
ವಿಂಡೀಸ್ ನೀಡಿದ 121 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಕಳಪೆ ಆರಂಭ ಸಿಕ್ಕಿತು. ಎರಡನೇ ಓವರ್ನಲ್ಲಿ ಯಶಸ್ವಿ ಜೈಸ್ವಾಲ್ ಔಟಾದರು. ಆದರೆ ಆ ಬಳಿಕ ಜೊತೆಯಾದ ರಾಹುಲ್ ಹಾಗೂ ಸುದರ್ಶನ್ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಆದರೆ ಭಾರತದ ಇನ್ನಿಂಗ್ಸ್ನ ಮೂರನೇ ಓವರ್ ಬೌಲಿಂಗ್ ಮಾಡಿದ ವೇಗದ ಬೌಲರ್ ಜೇಡನ್ ಸೀಲ್ಸ್ ಅವರ ಎಸೆತದಲ್ಲಿ ರಾಹುಲ್ ಸರಿಯಾದ ಪೆಟ್ಟು ತಿಂದರು.
ಸೀಲ್ಸ್ ಎಸೆದ ಓವರ್ನ ಮೂರನೇ ಎಸೆತವನ್ನು ರಾಹುಲ್ ರಕ್ಷಣಾತ್ಮಕವಾಗಿ ಆಡಲು ಪ್ರಯತ್ನಿಸಿದರು. ಆದರೆ ಚೆಂಡು ಪಿಚ್ ಆಗಿ ಒಳಗೆ ಬಂದು ರಾಹುಲ್ ಅವರ ಬ್ಯಾಟ್ ಅನ್ನು ದಾಟಿ ನೇರವಾಗಿ ಅವರ ತೊಡೆಸಂದಿಗೆ ಬಡಿಯಿತು.
ರಾಹುಲ್ ಗ್ರೋಯಿನ್ ಗಾರ್ಡ್ ಧರಿಸಿದ್ದರೂ ಸಹ ಚೆಂಡು ರಬಸವಾಗಿ ಬಡಿದ ಕಾರಣ, ರಾಹುಲ್ಗೆ ಭಾರಿ ನೋವಾಯಿತು. ಇದರಿಂದ ರಾಹುಲ್ ತಕ್ಷಣವೇ ತಮ್ಮ ಬ್ಯಾಟ್ ಅನ್ನು ಬೀಸಾಡಿ, ನೋವಿನಿಂದ ಒದ್ದಾಡುತ್ತಾ ಕ್ರೀಸ್ನಿಂದ ದೂರ ಕುಳಿತರು. ರಬಸವಾಗಿ ಬಂದು ಬಡಿದ ಚೆಂಡಿನಿಂದ ನೋವಿಗೆ ತುತ್ತಾದ ರಾಹುಲ್, ನೋವು ತಡೆಯಲು ಸಾಧ್ಯವಾಗದೆ ಕಿರುಚಿ, ಒದ್ದಾಡಿದರು. ಇದರಿಂದ ಆಟವನ್ನು ಸ್ವಲ್ಪ ಸಮಯ ನಿಲ್ಲಿಸಬೇಕಾಯಿತು.
ಫಿಸಿಯೋ ದೌಡು
ನಂತರ, ಟೀಂ ಇಂಡಿಯಾದ ಫಿಸಿಯೋ ತಕ್ಷಣವೇ ಮೈದಾನಕ್ಕೆ ಧಾವಿಸಿದರು. ಇದರಿಂದ ಆಟವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಯಿತು. ಆದಾಗ್ಯೂ, ಅದೃಷ್ಟವಶಾತ್ ರಾಹುಲ್ ಅವರ ಗಾಯ ಗಂಭೀರವಾಗಿರಲಿಲ್ಲ.
ಸ್ವಲ್ಪ ಹೊತ್ತು ಸುದಾರಿಸಿಕೊಂಡ ರಾಹುಲ್ ಮತ್ತೆ ಬ್ಯಾಟಿಂಗ್ ಮಾಡುವುದನ್ನು ಮುಂದುವರೆಸಿದರು. ಇದರ ನಂತರ ರಾಹುಲ್, ಸಾಯಿ ಸುದರ್ಶನ್ ಅವರೊಂದಿಗೆ ಇನ್ನಿಂಗ್ಸ್ ಮುಂದುವರಿಸಿ ಅಜೇಯ ಅರ್ಧಶತಕದ ಜೊತೆಯಾಟ ಕೂಡ ನಡೆಸಿದ್ದಾರೆ.
ಗೆಲುವು ನಾಳೆಗೆ ಮುಂದೂಡಿಕೆ
ಇನ್ನು 4ನೇ ದಿನದಾಟದ ಅಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದ್ದು, ಭಾರತದ ಗೆಲುವಿಗೆ ಇನ್ನೂ 58 ರನ್ ಗಳು ಬೇಕಿದೆ. 25 ರನ್ ಗಳಿಸಿರುವ ಕೆಎಲ್ ರಾಹುಲ್ ಮತ್ತು 30 ರನ್ ಗಳಿಸಿರುವ ಸಾಯಿ ಸುದರ್ಶನ್ ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.