ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಬೆಂಗಳೂರಿನ ಐಕಾನಿಕ್ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ಎಂಡ್ಗಳಿಗೆ ಹೊಸ ಹೆಸರುಗಳನ್ನು ಅಧಿಕೃತವಾಗಿ ಘೋಷಿಸಿತು. ನಿನ್ನೆ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಸಂದರ್ಭದಲ್ಲಿ ಈ ಗೌರವವನ್ನು ಭಾರತ ತಂಡದ ಮಾಜಿ ನಾಯಕರಾದ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರಿಗೆ ನೀಡಲಾಯಿತು.
ಹಳೆಯ BEML ಎಂಡ್ಗೆ ರಾಹುಲ್ ದ್ರಾವಿಡ್ ಅವರ ಹೆಸರು ಇಡಲಾಗಿದ್ದು, ಪೆವಿಲಿಯನ್ ಎಂಡ್ಗೆ ಅನಿಲ್ ಕುಂಬ್ಳೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಈ ಸಮಾರಂಭದಲ್ಲಿ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸಂತೋಷ್ ಮೆನನ್ ಸೇರಿದಂತೆ ಸಂಘದ ಇತರ ಸದಸ್ಯರು ಭಾಗವಹಿಸಿದ್ದರು. ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ಕುಟುಂಬ ಸದಸ್ಯರೂ ಈ ವಿಶೇಷ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ವರ್ಷದ ಫೆಬ್ರವರಿಯಲ್ಲಿ KSCA, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಮಾಜಿ ಭಾರತೀಯ ಕ್ರಿಕೆಟ್ ಗಾರ್ತಿ ಶಾಂತಾ ರಂಗಸ್ವಾಮಿ ಅವರ ಹೆಸರಿನಲ್ಲಿ ಸ್ಟ್ಯಾಂಡ್ಗಳು/ಎಂಡ್ಗಳನ್ನು ನಾಮಕರಣ ಮಾಡುವುದಾಗಿ ಘೋಷಿಸಿತ್ತು.
ಇದು ನನ್ನ ಎರಡನೇ ಮನೆ ಎಂಬಂತಿದೆ. ನಮ್ಮ ಮನೆಗಿಂತಲೂ ಹೆಚ್ಚು ಸಮಯವನ್ನು ನಾವು ಇಲ್ಲಿ ಕಳೆದಿದ್ದೇವೆ. ಇದೇ ಸ್ಥಳವೇ ನನ್ನ ಜೀವನಕ್ಕೆ ಬೇಕಾದ ಎಲ್ಲವನ್ನೂ ಕೊಟ್ಟಿದೆ. KSCA ಮತ್ತು ಈ ಕ್ರೀಡಾಂಗಣ ನನ್ನ ಜೀವನಕ್ಕೆ ನೀಡಿದ ಕೊಡುಗೆಗೆ ನಾನು ಎಂದಿಗೂ ಋಣಿಯಾಗಿರುತ್ತೇನೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಇನ್ನೊಂದೆಡೆ, ಅನಿಲ್ ಕುಂಬ್ಳೆ ಅವರು ತಮ್ಮ ಬಾಲ್ಯದಿಂದಲೇ ಈ ಮೈದಾನದೊಂದಿಗೆ ಹೊಂದಿರುವ ನಂಟನ್ನು ಹಂಚಿಕೊಂಡಿದ್ದಾರೆ. ಒಂಬತ್ತು ವರ್ಷದ ಬಾಲಕನಾಗಿದ್ದಾಗ ಇಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದೆ. ಇಂದು ಪೆವಿಲಿಯನ್ ಮೇಲೆ ನನ್ನ ಹೆಸರನ್ನು ನೋಡುವುದು ತುಂಬಾ ವಿಶೇಷವಾಗಿದೆ ಎಂದು ಹೇಳಿದ್ದಾರೆ.
ಅನಿಲ್ ಕುಂಬ್ಳೆ ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಕ್ರಮವಾಗಿ 619 ಮತ್ತು 337 ವಿಕೆಟ್ಗಳನ್ನು ಪಡೆದ ಭಾರತದ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ಬೌಲರ್ ಆಗಿದ್ದಾರೆ. ರಾಹುಲ್ ದ್ರಾವಿಡ್ ಅವರು 13,288 ರನ್ಗಳೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಎರಡನೇ ಅತಿ ಹೆಚ್ಚು ರನ್ಗಳಿಸಿದ ಆಟಗಾರರಾಗಿದ್ದಾರೆ.