ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಐಪಿಎಲ್ 2026ನೇ ಆವೃತ್ತಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಿದ್ದರೆ, ಮತ್ತೊಂದು ಮಳೆಯಿಂದಾಗಿ ರದ್ದಾಗಿದೆ. ಮಳೆಯಿಂದ ಬಾಧಿತವಾದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಮಾಡಲು ಏಕೆ ಆಯ್ಕೆ ಮಾಡಿಕೊಂಡರು ಎಂಬುದು ಇದೀಗ ಎಲ್ಲ ಕಡೆಯಿಂದ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ. ಅಲ್ಲದೆ, ತಂಡ ದುಬಾರಿ ಹಣ ನೀಡಿ ಖರೀದಿಸಲಾದ ಕ್ಯಾಮರೂನ್ ಗ್ರೀನ್ ಮೇಲೆ ಇದೀಗ ಗುಡುಗುತ್ತಿದ್ದಾರೆ.
ಆಸ್ಟ್ರೇಲಿಯಾದ ಆಲ್ರೌಂಡರ್ ₹2 ಕೋಟಿ ಮೂಲ ಬೆಲೆಗೆ ತನ್ನನ್ನು ನೋಂದಾಯಿಸಿಕೊಂಡಿದ್ದರು. ಆದರೆ, ಕೆಕೆಆರ್ ಅವರನ್ನು ಹರಾಜಿನಲ್ಲಿ ಬರೋಬ್ಬರಿ ₹25.20 ಕೋಟಿ ನೀಡಿ ಖರೀದಿಸಿತು. ಆದರೆ, ಗ್ರೀನ್ ಇದೀಗ ತಂಡಕ್ಕೆ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದಾರೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗ್ರೀನ್ ಉತ್ತಮ ಫಾರ್ಮ್ನಲ್ಲಿಲ್ಲ. ಆಲ್ರೌಂಡರ್ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದರೂ, ಅವರ ಬ್ಯಾಟಿಂಗ್ ಅಥವಾ ಬೌಲಿಂಗ್ 4-5 ವರ್ಷಗಳ ಹಿಂದಿದ್ದ ರೀತಿಯಲ್ಲಿ ಇಲ್ಲ.
ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗ್ರೀನ್ ಮತ್ತು ಅವರಂತಹ ಇತರ ಆಟಗಾರರನ್ನು ನಿಷೇಧಿಸುವ ಮೂಲಕ ಒಂದು ಪೂರ್ವನಿದರ್ಶನವನ್ನು ಸ್ಥಾಪಿಸಬೇಕು. ಏಕೆಂದರೆ, ಗ್ರೀನ್ ಅವರನ್ನು ಯಾಕಾಗಿ ಖರೀದಿಸಲಾಗಿತ್ತೋ ಅವರು ಅದನ್ನು ತಂಡಕ್ಕೆ ನೀಡಲು ಸಾಧ್ಯವಾಗಿಲ್ಲ ಎಂದು ಸೂಚಿಸಿದ್ದಾರೆ.
ಪಂಜಾಬ್ ಕಿಂಗ್ಸ್ನ ಕೂಪರ್ ಕೊನೊಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ನ ಮಿಚೆಲ್ ಮಾರ್ಷ್ರಂತಹ ಆಟಗಾರರಿಗೆ ಗ್ರೀನ್ನಂತೆ ಕ್ರಿಕೆಟ್ ಆಸ್ಟ್ರೇಲಿಯಾ ಬೌಲಿಂಗ್ ಮಾಡಲು ಅನುಮತಿ ನೀಡಿಲ್ಲ. ಗವಾಸ್ಕರ್ ಇದನ್ನು ಅತಿರೇಕದ ಸಂಗತಿ ಎಂದು ಪರಿಗಣಿಸುತ್ತಾರೆ.
ಕೆಲವು ದಿನಗಳ ಹಿಂದೆ, ಬೆನ್ ಡಕೆಟ್ ಅವರನ್ನು ಉಲ್ಲೇಖಿಸಿ, ಅಮಾನ್ಯ ಕಾರಣಗಳಿಗಾಗಿ ಐಪಿಎಲ್ನಿಂದ ಹೊರಗುಳಿಯುವ ಆಟಗಾರರ ಮೇಲಿನ ನಿಷೇಧವನ್ನು ಹೆಚ್ಚಿಸುವಂತೆ ಗವಾಸ್ಕರ್ ಸೂಚಿಸಿದ್ದರು. ಇದೀಗ, ಐಪಿಎಲ್ಗೆ ಬಂದಿದ್ದರೂ ತಂಡಕ್ಕೆ ಬೇಕಾಗಿರುವ ಬೌಲಿಂಗ್ ಮತ್ತು ಬ್ಯಾಟಿಂಗ್ ನೀಡಲು ವಿಫಲರಾಗುವ ಕ್ಯಾಮರೂನ್ ಗ್ರೀನ್ನಂತಹ ಆಟಗಾರರನ್ನು ಬಿಸಿಸಿಐ ನಿಷೇಧಿಸುವುದನ್ನು ಪರಿಗಣಿಸಬೇಕೆಂದು ಗವಾಸ್ಕರ್ ಒತ್ತಾಯಿಸಿದ್ದಾರೆ.
ಗ್ರೀನ್, ಕೊನೊಲಿ ಅಥವಾ ಮಾರ್ಷ್ ಬಗ್ಗೆ ಫ್ರಾಂಚೈಸಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಆಸ್ಟ್ರೇಲಿಯಾದ ಆಟಗಾರ ಬಿಕರಿಯಾದ ಹರಾಜಿನ ಹಣದಲ್ಲಿ ಶೇ 10 ರಷ್ಟನ್ನು ಆಯಾ ಮಂಡಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ನೀಡುತ್ತದೆ. ಆದ್ದರಿಂದ, ಆಸ್ಟ್ರೇಲಿಯಾ ಮಂಡಳಿಯು ಪಕ್ಕಕ್ಕೆ ಸರಿಯಬೇಕು ಮತ್ತು ಮಧ್ಯಪ್ರವೇಶಿಸಬಾರದು, ಐಪಿಎಲ್ ಫ್ರಾಂಚೈಸಿಗಳು ಆ ಆಟಗಾರರನ್ನು ನಿರ್ವಹಿಸಲು ಅವಕಾಶ ನೀಡಬೇಕು ಎಂದರು.
'ಒಬ್ಬ ಬೌಲರ್ ಪಂದ್ಯದಲ್ಲಿ ಕೇವಲ ನಾಲ್ಕು ಓವರ್ ಬೌಲ್ ಮಾಡಬಹುದು... ಆಟದಲ್ಲಿ ಅವರು ಹಾಗೆ ಮಾಡುವುದನ್ನು ತಡೆಯುವುದು ಏನು? ಫಿಟ್ ಆಗದ ಆಟಗಾರ ಮೊದಲ ದಿನದಿಂದಲೇ ಹಿಂದೆ ಸರಿದು ಫ್ರಾಂಚೈಸಿಗೆ ಬೇರೊಬ್ಬರನ್ನು ಆಯ್ಕೆ ಮಾಡಲು ಅವಕಾಶ ನೀಡುವುದು ನ್ಯಾಯಯುತ. ಫ್ರಾಂಚೈಸಿಗೆ 'ಮೊದಲೇ ಮಾಹಿತಿ ನೀಡಲಾಗಿತ್ತು' ಎಂದು ಸೂಚಿಸುವುದು ಉತ್ತಮ ನೆಪವಲ್ಲ. ಬಹುಶಃ ಬಿಸಿಸಿಐ ಮಧ್ಯಪ್ರವೇಶಿಸಿ... ಮೊದಲ ಪಂದ್ಯದಿಂದ ಲಭ್ಯವಿಲ್ಲದ ಆಟಗಾರರಿಗೆ ಇದೇ ರೀತಿಯದ್ದನ್ನು ಪರಿಚಯಿಸಬೇಕಾಗಬಹುದು. ಫ್ರಾಂಚೈಸಿಗಳು... ಪೂರ್ಣ ಬದ್ಧತೆಗೆ ಅರ್ಹರಲ್ಲವೇ?' ಎಂದು ಗವಾಸ್ಕರ್ ಸ್ಪೋರ್ಟ್ಸ್ಸ್ಟಾರ್ಗಾಗಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.