ಕೊಲಂಬೋ: 2009ರಲ್ಲಿ ಪಾಕಿಸ್ತಾನದ ಲಾಹೋರ್ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿ ಕರಾಳ ಘಟನೆಯನ್ನು ನೆನೆದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅಂದಿನ ದಾಳಿ ವೇಳೆ ತಮಗಾದ ನೋವಿನ ಕುರಿತು ಮಾತನಾಡಿದ್ದು, ನನ್ನ ದೇಹದಲ್ಲಿ ಇನ್ನೂ ಚೂರುಗಳಿವೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಲಾಹೋರ್ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯು ಪಾಕಿಸ್ತಾನ ಕ್ರಿಕೆಟ್ ಅನ್ನು ಶಾಶ್ವತವಾಗಿ ಬದಲಾಯಿಸಿದ್ದು, ಈ ಕರಾಳ ಘಟನೆ ಬಳಿಕ ಪಾಕಿಸ್ತಾನಕ್ಕೆ ಯಾವುದೇ ದೇಶದ ಕ್ರಿಕೆಟ್ ತಂಡಗಳು ಪ್ರಯಾಣಿಸಲೇ ಇಲ್ಲ. ವರ್ಷಗಳ ಕಾಲ, ಪಾಕಿಸ್ತಾನವು ಯುಎಇಯಲ್ಲಿ ತಮ್ಮ ತವರು ಪಂದ್ಯಗಳನ್ನು ಆಡುತ್ತಿತ್ತು.
ಇದೀಗ ಸಂಗಕ್ಕಾರ ಅದೇ ಕರಾಳ ಘಟನೆಯನ್ನು ನೆನೆದಿದ್ದು, ಇಂದಿಗೂ ಆ ದಿನ ಸಂಭವಿಸಿದ ಗಾಯದ ಚೂರುಗಳು ನನ್ನ ದೇಹದಲ್ಲಿವೆ ಎಂದು ಹೇಳಿದ್ದಾರೆ. ಪಾಡ್ಕಾಸ್ಟ್ ನಲ್ಲಿ ಮಾತನಾಡಿದ ಸಂಗಕ್ಕಾರ ಈಗ ಜೀವನದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹೇಗೆ ಬದಲಾಯಿಸಿದರು ಎಂಬುದರ ಕುರಿತು ಮಾತನಾಡಿದ್ದಾರೆ.
ಆಟಗಾರನ ತಮಾಷೆ ನಿಜವಾಗಿತ್ತು
ಅಂದು ದಾಳಿ ನಿಜವಾಗಲೂ ಸಂಭವಿಸುವ ಮೊದಲು ತನ್ನ ತಂಡದ ಒಬ್ಬ ಆಟಗಾರ ಬಾಂಬ್ ಸ್ಫೋಟಗೊಳ್ಳುವ ಬಗ್ಗೆ ತಮಾಷೆ ಮಾಡಿದ್ದ. ನಾವು ಹೋಟೆಲ್ನಲ್ಲಿದ್ದೇವೆ, ಪಂದ್ಯದ ಮೂರನೇ ದಿನ, ಮೈದಾನಕ್ಕೆ ಹೋಗುತ್ತಿದ್ದೇವೆ. ಮುಂದೆ ಕುಳಿತಿದ್ದ ವೇಗದ ಬೌಲರ್ 'ಈ ಸಮತಟ್ಟಾದ ಹಳಿಗಳಲ್ಲಿ ನನ್ನ ಬೆನ್ನು ಮುರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಬಾಂಬ್ ಸ್ಫೋಟಗೊಂಡು ನಾವು ಮನೆಗೆ ಹೋಗುತ್ತೇವೆ' ಎಂದು ತಮಾಷೆ ಮಾಡುತ್ತಾನೆ. ಆತ ಹೀಗೆ ಹೇಳಿ ಒಂದು ನಿಮಿಷವೂ ಕಳೆದಿಲ್ಲ, ಆಗಲೇ ನಮ್ಮ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎಂದು ಸಂಗಕ್ಕಾರ ಹೇಳಿದ್ದಾರೆ.
ಎಲ್ಲರಿಗೂ ಗಾಯಗಳಾಗಿದ್ದವು
"ನಾವು ಗಾಯಗೊಂಡಿದ್ದೇವು. ನನ್ನ ದೇಹದ ಬಲಭಾಗದಲ್ಲಿ ಇನ್ನೂ ಚೂರುಗಳು ಉಳಿದುಕೊಂಡಿವೆ. ಅದೇ ಸಮಯದಲ್ಲಿ, ಶ್ರೀಲಂಕಾ ಅಂತರ್ಯುದ್ಧದ ಮೂಲಕ ಸಾಗುತ್ತಿತ್ತು, ಈ ದಾಳಿಯು ನನ್ನ ದೃಷ್ಟಿಕೋನವನ್ನೇ ಬದಲಾಯಿಸಿತು ಎಂದು ಹೇಳಿದ್ದಾರೆ.
"ನನ್ನ ಪ್ರಕಾರ, ನಾವು ಯುದ್ಧದ ಕೊನೆಯ ಹಂತಗಳು - 2009ರಲ್ಲಿ ಯುದ್ಧದ ಮೂಲಕ ಹೋಗುತ್ತಿದ್ದೆವು. ಆ ದಾಳಿ 2 ನಿಮಿಷಗಳ ಕಾಲ ಸಂಭವಿಸಿತು. ಈ ದಾಳಿ ಬಳಿಕ ಕೆಲವು ವಾರಗಳ ನಂತರ, ನಾನು ಕೊಲಂಬೊ ಮೂಲಕ ಕಾರು ಚಲಾಯಿಸುತ್ತಿದ್ದಾಗ ಸೈನ್ಯ ಅಥವಾ ನೌಕಾಪಡೆಯ ಅಧಿಕಾರಿಯೊಬ್ಬರು ನನ್ನನ್ನು ತಡೆದರು. ಅವರು ಮೊದಲು ಕೇಳಿದ್ದು, 'ಓಹ್, ನೀವು ಹೇಗಿದ್ದೀರಿ?' ಎಂದು. ನಾನು ಚೆನ್ನಾಗಿದ್ದೇನೆ ಎಂದೆ. ನಂತರ ಅವರು, 'ನಾವು ಸುದ್ದಿಯನ್ನು ನೋಡಿದ್ದೇವೆ ಮತ್ತು ನಿಮಗಾಗಿ ನಾವು ತುಂಬಾ ಆಘಾತಕ್ಕೊಳಗಾಗಿದ್ದೆವು' ಎಂದು ಹೇಳಿದರು.
ಸಾಮಾನ್ಯವಾಗಿ ಇಂತಹ ದಾಳಿಗಳನ್ನು ನೆನೆಸಿಕೊಂಡಾಗ ಆಘಾತವಾಗುತ್ತದೆ. ಆದರೆ ಇದು ನಮ್ಮ ಸೈನಿಕರಿಗೆ ನಿತ್ಯವೂ ಆಗುತ್ತಲೇ ಇರುತ್ತದೆ. ಅಂತಹ ಸೈನಿಕರೇ ನನ್ನನ್ನು ನೋಡಿ ನಮ್ಮಯೋಗಕ್ಷೇಮ ವಿಚಾರಿಸಿದ್ದು ನನಗೆ ವಿಶೇಷವಾಗಿತ್ತು. ಆಗಲೇ ನಾವು ವಾಸಿಸುತ್ತಿರುವ ಜಗತ್ತನ್ನು ನಾನು ಅರಿತುಕೊಂಡೆ. ನಾವು ಕ್ರಿಕೆಟ್ ಆಡುತ್ತೇವೆ. ಉತ್ತಮ ಸಂಬಳ ಪಡೆಯುತ್ತೇವೆ ಮತ್ತು ಇದ್ದಕ್ಕಿದ್ದಂತೆ ನಾವು ದೇಶವು 20-26 ವರ್ಷಗಳಿಂದ ಅನುಭವಿಸುತ್ತಿರುವುದನ್ನು ಎರಡು ನಿಮಿಷಗಳ ಕಾಲ ಅನುಭವಿಸಿದೆವು. ಆದರೆ ಇದ್ದಕ್ಕಿದ್ದಂತೆ ನಾವು ವೀರರಾಗುತ್ತೇವೆ ಎಂದು ಹೇಳುವ ಮೂಲಕ ಸೈನಿಕ ತ್ಯಾಗ ಶ್ಲಾಘಿಸಿದರು.
ಅಂದು ಆಗಿದ್ದೇನು?
2009 ಮಾರ್ಚ್ 3, 2009 ರಂದು ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ನ ಮೂರನೇ ದಿನದಂದು ಲಾಹೋರ್ ನ ಗಡಾಫಿ ಕ್ರೀಡಾಂಗಣದ ಬಳಿಯ ಜನನಿಬಿಡ ಲಿಬರ್ಟಿ ಸರ್ಕಲ್ ನಲ್ಲಿ ಒಂದು ಡಜನ್ಗೂ ಹೆಚ್ಚು ಭಯೋತ್ಪಾದಕರು ಲಂಕಾ ತಂಡದ ಬಸ್ ಮೇಲೆ ಗುಂಡಿನ ಮಳೆಗರೆದಿದ್ದರು. ಈ ಭೀಕರ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದರು ಮತ್ತು ಹಲವಾರು ಶ್ರೀಲಂಕಾದ ಆಟಗಾರರು ಸೇರಿದಂತೆ 20 ಕ್ಕೂ ಹೆಚ್ಚು ಜನರು ಗಾಯಗೊಂಡರು. ಶ್ರೀಲಂಕಾ ಆಟಗಾರರಾದ ಕುಮಾರ್ ಸಂಗಕ್ಕಾರ, ಅಜಂತಾ ಮೆಂಡಿಸ್, ತಿಲನ್ ಸಮರವೀರ, ತರಂಗ ಪರಣವಿತನ, ಸುರಂಗ ಲಕ್ಮಲ್ ಮತ್ತು ತಿಲಿನಾ ತುಷಾರ ಅವರು ದಾಳಿಯಲ್ಲಿ ಗಾಯಗೊಂಡರು.