ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಭರ್ಜರಿ ಜಯ ಸಾಧಿಸಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ರಜತ್ ಪಾಟೀದಾರ್ ವಿಕೆಟ್ ವರ್ತಿಸಿದ ರೀತಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಮತ್ತು ಬೌಲರ್ಗಳನ್ನು, ವಿಶೇಷವಾಗಿ ಭುವನೇಶ್ವರ್ ಕುಮಾರ್ ಮತ್ತು ಜಾಶ್ ಹೇಜಲ್ವುಡ್ ಅವರ ಪ್ರದರ್ಶನಕ್ಕಾಗಿ ಶ್ಲಾಘಿಸಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 2026ನೇ ಆವೃತ್ತಿಯ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪವರ್ ಪ್ಲೇನಲ್ಲಿಯೇ ಸಂಕಷ್ಟಕ್ಕೆ ಸಿಲುಕಿತು. ವೇಗಿಗಳಾದ ಭುವನೇಶ್ವರ್ ಮತ್ತು ಹೇಜಲ್ವುಡ್ ಡಿಸಿ ಬ್ಯಾಟರ್ಗಳ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಭುವಿ ಮೊದಲ ಓವರ್ನ ಮೊದಲ ಎಸೆತದಲ್ಲಿಯೇ ವಿಕೆಟ್ ಕಬಳಿಸಿದರು.
ಅಂತಿಮವಾಗಿ ಭುವನೇಶ್ವರ್ ಕುಮಾರ್ 3 ಮತ್ತು ಜಾಶ್ ಹೇಜಲ್ವುಡ್ ನಾಲ್ಕು ವಿಕೆಟ್ ಕಬಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 75 ರನ್ಗಳಿಗೆ ಆಲೌಟ್ ಮಾಡಲು ನೆರವಾದರು. ಅಭಿಷೇಕ್ ಪೊರೆಲ್ (30), ಡೇವಿಡ್ ಮಿಲ್ಲರ್ (19) ಮತ್ತು ಕೈಲ್ ಜೇಮಿಸನ್ (12) ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಒಂದಂಕಿಯನ್ನೂ ದಾಟಲು ಸಾಧ್ಯವಾಗಲಿಲ್ಲ.
ಪಂದ್ಯದ ನಂತರ ಮಾತನಾಡಿದ ಪಾಟೀದಾರ್, 'ವಿಕೆಟ್ ಹೇಗೆ ವರ್ತಿಸಿತು ಎಂಬುದನ್ನು ನೋಡಿ ನನಗೂ ಆಶ್ಚರ್ಯವಾಯಿತು. ಪವರ್ಪ್ಲೇನಲ್ಲಿ ಬೌಲಿಂಗ್ ಮಾಡಿದ ರೀತಿಗೆ ಎಲ್ಲ ಕ್ರೆಡಿಟ್ ಬೌಲರ್ಗಳಾದ ಹೇಜಲ್ವುಡ್ ಮತ್ತು ಭುವಿಗೆ ಸಲ್ಲುತ್ತದೆ. ಒಳ್ಳೆಯ ವಿಷಯವೆಂದರೆ ನಮಗೆ ಆರಂಭಿಕ ವಿಕೆಟ್ಗಳು ಸಿಕ್ಕವು ಮತ್ತು ಅದು ನಮ್ಮನ್ನು ಉತ್ತಮ ಸ್ಥಾನದಲ್ಲಿರಿಸಿತು' ಎಂದು ಹೇಳಿದರು.
ತಂಡವು ಆರಂಭಿಕ ವಿಕೆಟ್ಗಳನ್ನು ಪಡೆಯುವ ಸಲುವಾಗಿಯೇ ತಮ್ಮ ಪ್ರಮುಖ ವೇಗಿಗಳ ನಡುವೆ ಪವರ್ಪ್ಲೇ ಅನ್ನು ವಿಭಜಿಸುವ ಬಗ್ಗೆ ಯೋಚಿಸಿದೆ ಎಂದ ಪಾಟೀದಾರ್, ನಾಲ್ಕು ಓವರ್ಗಳಲ್ಲಿ 1/7 ಅಂಕಿ ಅಂಶಗಳೊಂದಿಗೆ ಸ್ಪಿನ್ನರ್ ಸುಯಾಶ್ ಶರ್ಮಾ ಅವರ 'ಸ್ಟಂಪ್-ಟು-ಸ್ಟಂಪ್' ಬೌಲಿಂಗ್ ಅನ್ನು ಶ್ಲಾಘಿಸಿದರು.
'ಬೇಗನೆ ವಿಕೆಟ್ ಪಡೆದರೆ, ಭುವನೇಶ್ವರ್ ಮತ್ತು ಹೇಜಲ್ವುಡ್ ತಲಾ 3-3 ಓವರ್ ಬೌಲಿಂಗ್ ಮಾಡುತ್ತಾರೆ ಎಂದು ನಾವು ಯೋಜಿಸಿದ್ದೆವು. ಸುಯಾಶ್ ಸಾಕಷ್ಟು ಸ್ಪಿನ್ ಮಾಡಿದರು - ಅವರು ಬೌಲಿಂಗ್ ಮಾಡಿದ ರೀತಿ ನೋಡಲು ಸಂತೋಷವಾಯಿತು. ನಿಮ್ಮ ದಿನಚರಿಯನ್ನು ಅನುಸರಿಸುವುದು ಬಹಳ ಮುಖ್ಯ. ಇನ್ನೂ ಬಹಳ ದೂರ ಸಾಗಬೇಕಾಗಿದೆ. ನಾವು ಒಂದೊಂದೇ ಪಂದ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಸಕಾರಾತ್ಮಕ ವಿಷಯವೆಂದರೆ, ವಿಭಿನ್ನ ಆಟಗಾರರು ತಂಡದ ಗೆಲುವಿಗೆ ಕಾರಣರಾಗುತ್ತಿದ್ದಾರೆ. ನೀವು ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿರಬೇಕು (ಟಿ 20 ಕ್ರಿಕೆಟ್ನಲ್ಲಿ ಫ್ಲಾಟ್ ಪಿಚ್ಗಳಲ್ಲಿ). ಏಕೆಂದರೆ, ಬೌಲರ್ಗಳು ಮಾತ್ರ ನಿಮಗೆ ಚಾಂಪಿಯನ್ಶಿಪ್ಗಳನ್ನು ಗೆಲ್ಲಲು ಸಾಧ್ಯ' ಎಂದರು.
ಈ ಗೆಲುವಿನೊಂದಿಗೆ, ಆರ್ಸಿಬಿ ಆಡಿರುವ ಎಂಟು ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿದೆ. ಆರ್ಸಿಬಿ ಅಂಕಪಟ್ಟಿಯಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳನ್ನು ಗೆದ್ದಿರುವ ಡಿಸಿಯು ಈ ಸೋಲಿನಿಂದಾಗಿ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.