ಹರ್ಭಜನ್ ಸಿಂಗ್ photo | PTI
ಕ್ರಿಕೆಟ್

'ಅದರಲ್ಲಿ ನನ್ನ ತಪ್ಪೇನು ಇರಲಿಲ್ಲ': ಬೆಂಗಳೂರಿನ NCAಯಿಂದ ಹೊರಹಾಕಲ್ಪಟ್ಟ ಘಟನೆ ನೆನಪಿಸಿಕೊಂಡ ಹರ್ಭಜನ್ ಸಿಂಗ್!

2000ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಕಳುಹಿಸಲಾದ ಮೊದಲ ತಂಡದಲ್ಲಿ ಹರ್ಭಜನ್ ಕೂಡ ಒಬ್ಬರಾಗಿದ್ದರು.

ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, 2000ನೇ ಇಸವಿಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ (NCA) ತಮ್ಮನ್ನು ಹೊರಹಾಕಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆಹಾರ ಕ್ರಮದ ಪಟ್ಟಿಯನ್ನು (ಡಯಟ್ ಚಾರ್ಟ್) ಹರಿದುಹಾಕುವಂತಹ ಪರಿಸ್ಥಿತಿ ಉಂಟಾಗಲು ಕಾರಣವಾದ ಅಂಶಗಳನ್ನು ಅವರು ವಿವರಿಸಿದ್ದು, ಈ ಘಟನೆಯೇ ಅವರನ್ನು ಅಕಾಡೆಮಿಯಿಂದ ಹೊರಹಾಕಲು ಕಾರಣವಾಗಿತ್ತು.

ಬಲಗೈ ಆಫ್-ಸ್ಪಿನ್ನರ್ ಆಗಿದ್ದ ಹರ್ಭಜನ್, 1998 ರಿಂದ 2016 ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದರು ಮತ್ತು ತಮ್ಮ ವೃತ್ತಿಜೀವನದಲ್ಲಿ 600ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದರು. ಎನ್‌ಸಿಎ ಘಟನೆಯ ಕುರಿತು ಮಾತನಾಡುತ್ತಾ, 'ಅಲ್ಲಿ ನೀಡಲಾಗುತ್ತಿದ್ದ ಆಹಾರವು ತಾವು ಕಡ್ಡಾಯವಾಗಿ ಪಾಲಿಸಬೇಕಿದ್ದ ನಿರ್ದಿಷ್ಟ ಡಯಟ್ ಚಾರ್ಟ್‌ಗೆ ಅನುಗುಣವಾಗಿರಲಿಲ್ಲ. ಹಲವು ಬಾರಿ ದೂರು ನೀಡಿದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ, ಇದು ಅಂತಿಮವಾಗಿ ನನ್ನ ಆಕ್ರೋಶಕ್ಕೆ ಕಾರಣವಾಯಿತು' ಎಂದು ಅವರು ತಿಳಿಸಿದರು.

'ಅವರು ನನ್ನನ್ನು ಅಲ್ಲಿಂದ ಹೊರಹಾಕಿದರು. ಅದರಲ್ಲಿ ನನ್ನ ತಪ್ಪೇನೂ ಇರಲಿಲ್ಲ, ಇದನ್ನು ನಾನು ಇಂದಿಗೂ ಬಹಿರಂಗವಾಗಿಯೇ ಹೇಳುತ್ತೇನೆ. ಅದು ನಮ್ಮ ಹಕ್ಕಾಗಿತ್ತು. ಅಲ್ಲಿನ ಊಟ ಚೆನ್ನಾಗಿರಲಿಲ್ಲ. ಆಗಿನ ನಿಯಮಗಳ ಪ್ರಕಾರ, ನಮಗೆ ಸಾಕಷ್ಟು ವಿಷಯಗಳನ್ನು ಹೇಳಿಕೊಡಲಾಗುತ್ತಿತ್ತು ಮತ್ತು ಆಹಾರಕ್ರಮಕ್ಕಾಗಿ ಒಂದು ಚಾರ್ಟ್ ಅನ್ನು ಹಾಕಲಾಗಿತ್ತು. ಆದರೆ, ಅದಕ್ಕೆ ಅನುಗುಣವಾಗಿ ನಮಗೆ ಊಟ ಸಿಗುತ್ತಿರಲಿಲ್ಲ. ಹಲವು ಬಾರಿ ದೂರು ನೀಡಿದರೂ ಊಟದ ಗುಣಮಟ್ಟ ಸುಧಾರಿಸಲಿಲ್ಲ. ಹಾಗಾಗಿ ಒಂದು ದಿನ ನಾನು ಆ ಚಾರ್ಟ್ ಅನ್ನು ಹರಿದುಹಾಕಿದೆ. ಚಾರ್ಟ್ ಹರಿದುಹಾಕಿದ್ದು ಮಾತ್ರವೇ ನನ್ನ ತಪ್ಪಾಗಿತ್ತು' ಎಂದು ಭಾರತದ ಮಾಜಿ ಸ್ಪಿನ್ನರ್ 'ಕ್ರಿಕೆಟ್ ನೆಕ್ಸ್ಟ್ ಆಫೀಶಿಯಲ್' (cricketnextofficial) ನಲ್ಲಿ ಹೇಳಿದರು.

2000ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಕಳುಹಿಸಲಾದ ಮೊದಲ ತಂಡದಲ್ಲಿ ಹರ್ಭಜನ್ ಕೂಡ ಒಬ್ಬರಾಗಿದ್ದರು. ತಮ್ಮ ವಿರುದ್ಧ ಹೋಗುವವರನ್ನು ಸಹಿಸಿಕೊಳ್ಳಲಾಗದಂತಹ ಕೆಲವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯಲ್ಲಿದ್ದರು ಎಂದು ಅವರು ಹೇಳಿದ್ದರು.

'ಆದರೆ ಬಹುಶಃ ಯಾರಾದರೂ ಇಂತಹ ಕೆಲಸವೊಂದನ್ನು ಮಾಡುವವರೆಗೂ ಪರಿಸ್ಥಿತಿ ಬದಲಾಗುವುದಿಲ್ಲವೇನೋ. ನಾನು ಹಕ್ಕುಗಳಿಗಾಗಿ ಹೋರಾಡುತ್ತಿದ್ದೆ. ನಾನು ಧ್ವನಿ ಎತ್ತಿರದಿದ್ದರೆ, ಇಂದಿಗೂ ಅದೇ ಆಹಾರ ಕ್ರಮವನ್ನೇ ಅನುಸರಿಸಲಾಗುತ್ತಿತ್ತು. ಆ ಯೋಜನೆ ಬದಲಾಯಿತು, ನನ್ನನ್ನೂ ತೆಗೆದುಹಾಕಲಾಯಿತು - ಅದು ಬೇರೆ ವಿಷಯ, ಆದರೆ ಅದರಲ್ಲಿ ನನ್ನ ತಪ್ಪೇನೂ ಇರಲಿಲ್ಲ. ತಮ್ಮನ್ನು ಪ್ರಶ್ನಿಸುವ ಧೈರ್ಯವಿರುವ ವ್ಯಕ್ತಿ ಅಲ್ಲಿರುವುದನ್ನು ಬಯಸದ ಕೆಲವರು ಬಿಸಿಸಿಐನಲ್ಲಿದ್ದರು' ಎಂದು ಹರ್ಭಜನ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ, ಹಲವರಿಗೆ ಗಾಯ

ಬಿಲಿಯನೇರ್ Gautam Adaniಗೆ ಬಿಗ್ ರಿಲೀಫ್: ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಜಾಗೊಳಿಸಿದ ಅಮೆರಿಕಾ ನ್ಯಾಯಾಲಯ..!

ಬಿಡದಿ ಹೋರಾಟ ಅರ್ಧಕ್ಕೆ ಸ್ಥಗಿತ; ‘ರೈತರ ನ್ಯಾಯಕ್ಕಾಗಿ ತಾರ್ಕಿಕ ಅಂತ್ಯದವರೆಗೆ ಹೋರಾಟ’ ಎಂದ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ..!

ಬರ ಪರಿಹಾರಕ್ಕೆ ಕೇಂದ್ರದಿಂದ ಇನ್ನೂ ಉತ್ತರ ಬಂದಿಲ್ಲ; ಅಗತ್ಯವಿದ್ದರೆ ನ್ಯಾಯಾಲಯದ ಮೊರೆ: DCM ಡಾ. ಪರಮೇಶ್ವರ್‌

JDS ಪಾದಯಾತ್ರೆಯಲ್ಲಿ ರೈತರಿಲ್ಲ, ಪಕ್ಷದ ಕಾರ್ಯಕರ್ತರ ಕರೆತಂದಿದ್ದಾರೆ; ನಿಖಿಲ್‌ ರಾಜಕೀಯ ಭವಿಷ್ಯಕ್ಕಾಗಿ ಹೋರಾಟ: ಡಿಕೆ ಶಿವಕುಮಾರ್‌ ವ್ಯಂಗ್ಯ