ಕೊಯಮತ್ತೂರು: ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷಗಳನ್ನು ಪೂರೈಸಿದ ನಟ ಕಿಚ್ಚಾ ಸುದೀಪ್ ಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿ ಗಿಫ್ಟ್ ನೀಡಿದ್ದು, ಬರೊಬ್ಬರಿ 12 ವರ್ಷಗಳ ಬಳಿಕ 3ನೇ ಬಾರಿಗೆ ಸಿಸಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಹೌದು.. ಭಾರತದ 8 ಪ್ರಮುಖ ಸಿನಿಮಾರಂಗದ ಕಲಾವಿದರು, ತಂತ್ರಜ್ಞರು ಒಳಗೊಂಡು ಆಡುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೀಸನ್ -12 (Celebrity Cricket League)ರ ಚಾಂಪಿಯನ್ ಆಗಿ ಕರ್ನಾಟಕ ಬುಲ್ಡೋಜರ್ಸ್ ಹೊರಹೊಮ್ಮಿದೆ.
ನಟ ಕಿಚ್ಚ ಸುದೀಪ್ (Kiccha Sudeep) ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.
ಕೊಯಮತ್ತೂರಿನ ಎಸ್ ಎನ್ ಆರ್ ಕಾಲೇಜು ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗಧಿತ 20 ಓವರ್ ನಲ್ಲಿ 129 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡ 16.4 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯ ಭೇರಿ ಭಾರಿಸಿತು.
12 ವರ್ಷಗಳ ಬಳಿಕ ಕರ್ನಾಟಕ ಚಾಂಪಿಯನ್
ಈ ಗೆಲುವಿನ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ ಬರೊಬ್ಬರಿ 12 ವರ್ಷಗಳ ಬಳಿಕ ಸಿಸಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಹಿಂದೆ 2013 ಹಾಗೂ 2014ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಆಗಿತ್ತು.
ಈ ಸಲ ಕರ್ನಾಟಕ ಆರಂಭದಲ್ಲಿ ಪಂಜಾಬ್ ದೆ ಶೇರ್ ತಂಡದ ವಿರುದ್ದ ಗೆಲುವು ಸಾಧಿಸಿತ್ತು. ಆ ಬಳಿಕ ತೆಲುಗು ವಾರಿಯರ್ಸ್, ಭೋಜ್ಪುರಿ ದಬಾಂಗ್ ವಿರುದ್ಧ ಗೆದ್ದು ಚೆನ್ನೈ ಕಿಂಗ್ಸ್ ವಿರುದ್ಧ ರೋಚಕ ಸೆಮಿ ಫೈನಲ್ನಲ್ಲಿ ಗೆಲುವು ಕಂಡಿತ್ತು.
ರೋಹಿತ್ ಶರ್ಮಾ ಮಾದರಿ ಟ್ರೋಫಿ ಸ್ವೀಕರಿಸಿದ ಕಿಚ್ಚಾ
ಫೈನಲ್ ಗೆಲುವನ್ನು ಕಿಚ್ಚಾ ಸುದೀಪ್ ಭರ್ಜರಿಯಾಗಿ ಸಂಭ್ರಮಿಸಿದ್ದು, ಟ್ರೋಫಿ ಸ್ವೀಕರಿಸುವಾಗ ಸುದೀಪ್ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಗೆದ್ದ ಸಮಯದಲ್ಲಿ ಟ್ರೋಫಿಯನ್ನು ಪಡೆಯುವಾಗ ಹೇಗೆ ಸಂಭ್ರಮಿಸಿದ್ದರೋ ಅದೇ ಶೈಲಿಯಲ್ಲಿ ನಿಧಾನವಾಗಿ ರೋಬೋ ವಾಕ್ ಮಾಡುತ್ತಾ ಹೋಗಿ ಟ್ರೋಫಿ ಸ್ವೀಕರಿಸಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಲಕ್ಕಿ ನಂಬರ್ 12
ಕಿಚ್ಚ ಸುದೀಪ್ಗೆ ಸಿಸಿಎಲ್ 12ನೇ ಆವೃತ್ತಿ ಗೆದ್ದಿದ್ದು ಡಬಲ್ ಸಂಭ್ರಮ. ಒಂದ್ಕಡೆ ಸುದೀಪ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 30 ವರ್ಷಗಳನ್ನು ಪೂರೈಸಿದರೆ, ಇನ್ನೊಂದು ಕಡೆ ಸುಮಾರು 12 ವರ್ಷಗಳಿಂದ ಟ್ರೋಫಿ ಗೆಲ್ಲುವುದಕ್ಕೆ ಕಾದು ಕೂತಿದ್ದ ಕಿಚ್ಚ 12ನೇ ಸೀಸನ್ ಅನ್ನೇ ಗೆದ್ದು ಸಂಭ್ರಮಿಸಿದ್ದಾರೆ. ಕಿಚ್ಚನಿಗೆ 12 ಲಕ್ಕಿ ಅನ್ನೋದು ಸಾಬೀತಾಗುತ್ತಿದೆ. ಯಾಕಂದ್ರೆ ಬಿಗ್ ಬಾಸ್ ಕನ್ನಡ ಸೀಸನ್ 12 ಕೂಡ ಅತೀ ಹೆಚ್ಚು ಟಿಆರ್ಪಿ ಗಿಟ್ಟಿಸಿಕೊಂಡು ದಾಖಲೆ ಬರೆದಿತ್ತು.
ಬಹುಮಾನ ಎಷ್ಟು?
ಮೂಲಗಳ ಪ್ರಕಾರ ವಿನ್ನಿಂಗ್ ಟೀಮ್ ಕರ್ನಾಟಕ ಬುಲ್ಡೋಜರ್ಸ್ಗೆ 50 ಲಕ್ಷ ರೂಪಾಯಿ ಹಣ ಸಿಗಲಿದೆ ಎಂದು ಹೇಳಲಾಗಿದೆ. ಇನ್ನು ರನ್ನರ್ಅಪ್ ಟೀಮ್ ಬೆಂಗಲ್ ಟೈಗರ್ಸ್ಗೆ 25 ಲಕ್ಷ ರೂ ನೀಡಲಾಗುವುದು ಎಂದು ಹೇಳಲಾಗಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಎಲ್ಲೂ ಘೋಷಣೆ ಮಾಡಿಲ್ಲ.