ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಬಹುನಿರೀಕ್ಷಿತ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಆಡದಿರಲು ಪಾಕಿಸ್ತಾನ ನಿರ್ಧರಿಸಿರುವ ಬಗ್ಗೆ ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಾಕಾಗಿ ಪಾಕಿಸ್ತಾನವು ವಿಶ್ವಕಪ್ ಪಂದ್ಯದಿಂದ ಹಿಂದೆ ಸರಿಯುತ್ತಿದೆ. ಅವರು ಶ್ರೀಲಂಕಾದಲ್ಲಿ ಆಡುತ್ತಿದ್ದಾರೆ. ಏನೇ ಇರಲಿ, ಪಾಕಿಸ್ತಾನ ಪಂದ್ಯದಿಂದ ಹಿಂದೆ ಸರಿಯುತ್ತಿರುವುದು ನನಗೆ ಆಶ್ಚರ್ಯ ಉಂಟುಮಾಡಿದೆ. ವಿಶ್ವಕಪ್ನಲ್ಲಿ, ಪ್ರತಿಯೊಂದು ಪಾಯಿಂಟ್ ಕೂಡ ಮುಖ್ಯವಾಗಿದೆ' ಎಂದು ಅವರು ಹೇಳಿದರು.
ಆಟಗಾರರ ಭದ್ರತೆಯನ್ನು ಮುಂದಿಟ್ಟಿದ್ದ ಬಾಂಗ್ಲಾದೇಶವು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿ, ತನ್ನೆಲ್ಲ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಮನವಿ ಮಾಡಿತ್ತು. ಇದನ್ನು ಐಸಿಸಿ ಒಪ್ಪದಿದ್ದಾಗ ಪಟ್ಟು ಬಿಡದ ಬಾಂಗ್ಲಾದೇಶವನ್ನು ಪಂದ್ಯಾವಳಿಯಿಂದಲೇ ಕೈಬಿಡಲಾಯಿತು. ಬಾಂಗ್ಲಾದೇಶವನ್ನು ಬೆಂಬಲಿಸಿ ಪಾಕಿಸ್ತಾನವು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.
ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ಭಾರತ ತಂಡ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಟೂರ್ನಿ ಆರಂಭಕ್ಕೂ ಮುನ್ನ ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಸ್ಪಷ್ಟಪಡಿಸಿದ್ದರು.
ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ಫೆಬ್ರುವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿದ್ದು, ಭಾರತ ಫೆಬ್ರುವರಿ 7 ರಂದು ಯುಎಸ್ಎ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಿದ್ದು, ಫೆಬ್ರುವರಿ 12 ರಂದು ತನ್ನ ಎರಡನೇ ಗುಂಪು ಪಂದ್ಯವನ್ನು ಆಡಲಿದೆ.
ಹಾಲಿ ಚಾಂಪಿಯನ್ಸ್ ಟೀಂ ಇಂಡಿಯಾ, ನಮೀಬಿಯಾ, ನೆದರ್ಲ್ಯಾಂಡ್ಸ್, ಯುಎಸ್ಎ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ.