ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮತ್ತು ಆಟಗಾರರು ಭಾರತದಲ್ಲಿ ನಡೆಯಲಿರುವ T20 ವಿಶ್ವಕಪ್ ಅನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು ಎಂದು ಹೇಳಿಕೆ ನೀಡಿದ್ದ ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಅದಾದ ಒಂದು ದಿನದ ನಂತರ ಮತ್ತೆ ಯೂಟರ್ನ್ ಹೊಡೆದಿದ್ದಾರೆ. ಮಂಗಳವಾರ, ನಜ್ರುಲ್ ಸುದ್ದಿಗಾರರೊಂದಿಗೆ ಮಾತನಾಡಿ, ಬಿಸಿಬಿ ಮತ್ತು ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸದಿರಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದರು. ಈ ಹೇಳಿಕೆಯು ಗೊಂದಲ ಮತ್ತು ಟೀಕೆಗೆ ಕಾರಣವಾಯಿತು. ಈ ಹಿಂದೆ ಸರ್ಕಾರವು ಆಟಗಾರರ ಭದ್ರತೆಯ ದೃಷ್ಟಿಯಿಂದ ಸರ್ಕಾರವೇ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿತ್ತು. ಈ ಕುರಿತು ಬುಧವಾರ ಸ್ಪಷ್ಟನೆ ನೀಡಿರುವ ನಜ್ರುಲ್, ಈ ವಿಷಯವನ್ನು ಸ್ಪಷ್ಟವಾಗಿ ವಿವರಿಸಲು ವಿಫಲವಾಗಿದ್ದೇನೆ. ವಿಶ್ವಕಪ್ನಲ್ಲಿ ಆಡದಿರುವ ನಿರ್ಧಾರವನ್ನು ಸರ್ಕಾರವೇ ಮಾಡಿದೆ ಎಂದು ನಾನು ಮತ್ತೊಮ್ಮೆ ದೃಢವಾಗಿ ಹೇಳುತ್ತೇನೆ' ಎಂದಿದ್ದಾರೆ.
ಬಿಸಿಬಿ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಮ್ಮ ಹಿಂದಿನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ನಜ್ರುಲ್ ವಿವರಿಸಿದರು. ಆಡದಿದ್ದಕ್ಕೆ ವಿಷಾದವಿದೆಯೇ ಎಂಬ ಪ್ರಶ್ನೆ ಕೇಳಲಾಗಿದೆಯೇ ಹೊರತು ನಿರ್ಧಾರ ತೆಗೆದುಕೊಂಡವರು ಯಾರು ಎಂಬುದರ ಬಗ್ಗೆ ಅಲ್ಲ ಎಂದು ಅವರು ಹೇಳಿದ್ದಾರೆ.
ಭದ್ರತೆಯ ಆಧಾರದ ಮೇಲೆ ಸರ್ಕಾರದ ನಿರ್ಧಾರ
ನಜ್ರುಲ್ ಅವರ ಪ್ರಕಾರ, ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಸರ್ಕಾರ ಜನವರಿಯ ಆರಂಭದಲ್ಲಿ ತಂಡವನ್ನು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿತ್ತು. ಹಿಂದಿನ ಹಲವಾರು ಹೇಳಿಕೆಗಳಲ್ಲಿ ಅವರು ಆ ನಿಲುವನ್ನು ಸ್ಪಷ್ಟಪಡಿಸಿದ್ದರು ಎಂದು ಅವರು ಸಮರ್ಥಿಸಿಕೊಂಡರು.
ಕ್ರಿಕೆಟ್ ಮಂಡಳಿ ಮತ್ತು ಆಟಗಾರರು ಬಹಿಷ್ಕಾರದ ಹಿಂದಿದ್ದಾರೆ ಎಂದು ಹೇಳಿದಾಗ ವಿವಾದ ಪ್ರಾರಂಭವಾಯಿತು. ಈ ಹೇಳಿಕೆಯು ಸರ್ಕಾರವು ಜವಾಬ್ದಾರಿಯನ್ನು ಬಿಸಿಬಿಗೆ ವರ್ಗಾಯಿಸುತ್ತಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತು.
ಹಣಕಾಸಿನ ನಷ್ಟ, ಪಂದ್ಯಗಳನ್ನು ತಪ್ಪಿಸುವುದು ಮತ್ತು ಸಂಭಾವ್ಯ ನಿರ್ಬಂಧಗಳ ಅಪಾಯದ ಹೊರತಾಗಿಯೂ, ಮಂಡಳಿ ಮತ್ತು ಆಟಗಾರರು ಸರ್ಕಾರದ ನಿರ್ಧಾರವನ್ನು ಯಾವುದೇ ಪ್ರತಿಭಟನೆಯಿಲ್ಲದೆ ಒಪ್ಪಿಕೊಂಡರು ಎಂದು ನಜ್ರುಲ್ ತಮ್ಮ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.
ನಿರ್ಧಾರಕ್ಕೆ ಬದ್ಧರಾಗಿರುವ ಮುಖ್ಯ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ರಾಷ್ಟ್ರೀಯ ಭದ್ರತೆ ಮತ್ತು ಘನತೆಯ ಹಿತದೃಷ್ಟಿಯಿಂದ ಕೈಗೊಂಡ ಈ ಕ್ರಮವನ್ನು ಬೆಂಬಲಿಸಿದ್ದಕ್ಕಾಗಿ ಆಟಗಾರರು ಮತ್ತು ಅಧಿಕಾರಿಗಳನ್ನು ಶ್ಲಾಘಿಸಿದರು.