ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿ ವೇಳೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಳಿದ ಪಾನೀಯ ಮರುಬಳಕೆ ಮಾಡಲಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಎದ್ದಿದೆ.
ಹೌದು.. ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸುವ ಕ್ರಿಕೆಟ್ ಕ್ರೀಡಾಂಗಣಗಳು, ವಿಶೇಷವಾಗಿ ಸಾವಿರಾರು ಪ್ರೇಕ್ಷಕರಿಗೆ ಸೇವೆ ಸಲ್ಲಿಸುವಾಗ, ಕಟ್ಟುನಿಟ್ಟಾದ ನೈರ್ಮಲ್ಯ ಮಾನದಂಡಗಳನ್ನು ಅನುಸರಿಸುತ್ತಾರೆ ಎಂದು ನಂಬಲಾಗುತ್ತದೆ.
ಪ್ರಮುಖವಾಗಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಂತಹ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಶುಚಿತ್ವ ಮತ್ತು ನೈರ್ಮಲ್ಯದ ವಿಚಾರವಾಗಿ ಸಾಕಷ್ಟು ಕಟ್ಟೆಚ್ಚರ ವಹಿಸಲಾಗುತ್ತದೆ. ಇದರಲ್ಲಿನ ಸಣ್ಣ ಎಡವಟ್ಟು ಕೂಡ ದೊಡ್ಡದಾಗಿ ಸುದ್ದಿಯಾಗುತ್ತದೆ.
ಈ ಪಟ್ಟಿಗೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಸೇರ್ಪಡೆಯಾಗಿದ್ದು, ಇಲ್ಲಿ ನಡೆದ ಒಂದು ಘಟನೆಯ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಫೆಬ್ರವರಿ 10 ರಂದು, ಕ್ರೀಡಾಂಗಣವು ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ನಡುವೆ ಪಂದ್ಯಾವಳಿಯ ಮೊದಲ ಪಂದ್ಯವನ್ನು ನಡೆಸಿತು.
ಪಂದ್ಯದ ಸಮಯದಲ್ಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗಾಗಿ ತಂದು ಉಳಿದ ಪಾನೀಯಗಳನ್ನು ಮರುಬಳಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಉಳಿದ ಪಾನೀಯ ಮರುಬಳಕೆ!
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಿಬ್ಬಂದಿಗಳು ಟ್ರೇನಲ್ಲಿ ಉಳಿದಿದ್ದ ಗ್ಲಾಸ್ ಗಳಲ್ಲಿದ್ದ ತಂಪು ಪಾನೀಯವನ್ನು ಮತ್ತೆ ಬಾಟಲ್ ಗಳಿಗೆ ತುಂಬುತ್ತಿರುವುದು ಕಂಡುಬಂದಿದೆ. ಪಂದ್ಯದ ನಂತರ, ಕ್ರೀಡಾಂಗಣದಿಂದ ಹೊರಡುವಾಗ, ಒಬ್ಬ ಪ್ರೇಕ್ಷಕರು ಇದನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಕ್ರೀಡಾಂಗಣ ನೈರ್ಮಲ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಮಾರಾಟವಾಗದೇ ಉಳಿದದ್ದಾ? or ಕುಡಿದು ಉಳಿದದ್ದಾ?
ಇನ್ನು ಸಿಬ್ಬಂದಿ ಬಾಟಲ್ ತುಂಬುತ್ತಿರುವ ಪಾನೀಯ ಮಾರಾಟವಾಗದೇ ಉಳಿದದ್ದಾ? ಅಥವಾ ಗ್ರಾಹಕರು ಕುಡಿದು ಗ್ಲಾಸ್ ನಲ್ಲೇ ಉಳಿದದ್ದಾ? ಎಂಬ ಪ್ರಶ್ನೆ ಮೂಡುತ್ತಿದೆ.
ಸಿಬ್ಬಂದಿ ಹೇಳಿದ್ದೇನು?
ಕ್ರೀಡಾಂಗಣದ ಮೂಲಗಳ ಪ್ರಕಾರ ಇದು ಮಾರಾಟವಾಗದೇ ಉಳಿದ ಗ್ಲಾಸ್ ಗಳಾಗಿದ್ದು, ಮತ್ತೆ ಕೂಲಿಂಗ್ ಮಾಡಲು ಇವುಗಳನ್ನು ಬಾಟಲ್ ಗಳಿಗೆ ತುಂಬಲಾಗುತ್ತಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. ಅಂತೆಯೇ ನೈರ್ಮಲ್ಯದ ವಿಚಾರದಲ್ಲಿ ತಾವು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.