ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದ ಗೆಲುವಿನ ಹೊರತಾಗಿಯೂ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಮೈದಾನದಲ್ಲೇ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
ನಿನ್ನೆ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 61 ರನ್ ಗಳ ಹೀನಾಯ ಸೋಲುಕಂಡಿತು. ಭಾರತ ನೀಡಿದ್ದ 176 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಾಕಿಸ್ತಾನ 18 ಓವರ್ ನಲ್ಲಿ ಕೇವಲ 114ರನ್ ಗೆ ಆಲೌಟ್ ಆಯಿತು. ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದ್ದ ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪ್ರಾಬಲ್ಯ ಮೆರೆದು ಏಕಪಕ್ಷೀಯವಾಗಿ ಪಂದ್ಯ ಗೆದ್ದು ಬೀಗಿತು.
ಈ ನಡುವೆ ಇದೇ ಪಂದ್ಯದಲ್ಲಿ ದೊಡ್ಡ ಹೈಡ್ರಾಮಾ ಕೂಡ ನಡೆದಿದ್ದು, ಇದು ಭಾರತ ಮತ್ತು ಪಾಕಿಸ್ತಾನ ಆಟಗಾರರ ನಡುವೆ ಅಲ್ಲ.. ಬದಲಿಗೆ ಭಾರತೀಯ ಆಟಗಾರರ ನಡುವೆಯೇ ಕೆಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದು ಎಷ್ಟರ ಮಟ್ಟಿಗೆ ಜೋರಿತ್ತು ಎಂದರೆ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಾ ಆ ಆಟಗಾರನಿಗೆ ಹಸ್ತಲಾಘವ ಕೂಡ ಮಾಡದೇ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಆತ ಕೂಡ ತನ್ನ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದ.
ಇಷ್ಟಕ್ಕೂ ಯಾರು ಆ ಆಟಗಾರ..? ಆಗಿದ್ದೇನು?
ನಾಯಕ ಸೂರ್ಯ ಮತ್ತು ಹಾರ್ದಿಕ್ ಪಾಂಡ್ಯಾರ ಕೆಂಗಣ್ಣಿಗೆ ಗುರಿಯಾಗಿದ್ದು ಬೇರಾರು ಅಲ್ಲ.. ಭಾರತದ ತಂಡದ ಸ್ಪಿನ್ನರ್ ಕುಲದೀಪ್ ಯಾದವ್. ನಿನ್ನೆ ನಡೆದ ಪಂದ್ಯದಲ್ಲಿ 3 ಓವರ್ ಎಸೆದು ಕೇವಲ 14 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಇಷ್ಟಾಗಿಯೂ ಕುಲದೀಪ್ ಕ್ಯಾಪ್ಟನ್ ಸೂರ್ಯ ಮತ್ತು ಹಾರ್ದಿಕ್ ರ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಆಗಿದ್ದೇನು?
ಹಾರ್ದಿಕ್ ಪಂದ್ಯದ ಕೊನೆಯ ವಿಕೆಟ್ ಪಡೆದರು. ಬಳಿಕ ಎಲ್ಲ ಭಾರತೀಯ ಆಟಗಾರರು ಪರಸ್ಪರ ಹೈ-ಫೈವ್ ಮಾಡಿ, ಕೈಕುಲುಕಿ, ಅಪ್ಪುಗೆ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಹಾರ್ದಿಕ್ ಮತ್ತು ಸೂರ್ಯ ಕುಮಾರ್ ಯಾದವ್ ಕುಲದೀಪ್ ಯಾದವ್ ಮೇಲೆ ಕೋಪಗೊಂಡಂತೆ ಕಂಡುಬಂದಿತು.
ಪಂದ್ಯದ ಕೊನೆಯಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಹಸ್ತಲಾಘವ ಮಾಡದೇ ಕುಲದೀಪ್ ಗೆ ಆಕ್ರೋಶದಿಂದಲೇ ಏನೋ ಹೇಳಿದಂತಿತ್ತು. ಉಭಯ ಆಟಗಾರರ ನಡೆ ಅಲ್ಲಿಯೇ ಇದ್ದ ಮತ್ತೋರ್ವ ಆಟಗಾರ ತಿಲಕ್ ವರ್ಮಾ ಕಳವಳಗೊಂಡರು. ಆಟಗಾರರ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಯತ್ನದಲ್ಲಿ ರಿಂಕು ಸಿಂಗ್ ಮಧ್ಯಪ್ರವೇಶಿಸ ಬೇಕಾಯಿತು.
ಕೋಪಕ್ಕೆ ಕಾರಣವೇನು?
ಹಾರ್ದಿಕ್ ಮತ್ತು ಸೂರ್ಯ ಕೋಪಕ್ಕೆ ಕುಲದೀಪ್ ಯಾದವ್ ಕ್ಯಾಚ್ ಬಿಟ್ಟಿದ್ದು ಕಾರಣ ಎನ್ನಲಾಗಿದೆ. ಪಾಕಿಸ್ತಾನ ಇನ್ನಿಂಗ್ಸ್ ಅಂತ್ಯವಾಗುವ ಕೆಲವೇ ಕ್ಷಣಗಳ ಮೊದಲು ಅಂದರೆ ಹಾರ್ದಿಕ್ ಪಾಂಡ್ಯಾ ಎಸೆದ 18ನೇ ಓವರ್ ನಲ್ಲಿ ಪಾಕಿಸ್ತಾನದ ಶಾಹೀನ್ ಅಫ್ರಿದಿ 2 ಬಾರಿ ಜೀವದಾನ ಪಡೆದರು. ಮೊದಲು ವಿಕೆಟ್ ಕೀಪರ್ ಇಶಾನ್ ಕಿಶನ್ ಕ್ಯಾಚ್ ಬಿಟ್ಟರೆ ಮರು ಎಸೆತದಲ್ಲೇ ಕುಲದೀಪ್ ಯಾದವ್ ಕೂಡ ಕ್ಯಾಚ್ ಬಿಟ್ಟರು.
18ನೇ ಓವರ್ ನ 2 ಎಸೆತದಲ್ಲಿ ಶಾಹೀನ್ ಅಫ್ರಿದಿ ದೊಡ್ಡ ಹೊಡೆತಕ್ಕೆ ಕೈಹಾಕಿದ್ದರು. ಶಾರ್ಟ್ ಲೆಂತ್ ಎಸೆತವನ್ನು ಫಾರ್ವರ್ಡ್ ಪುಲ್ ಮಾಡಿದರು. ಈ ವೇಳೆ ಚೆಂಡು ಗಾಳಿಯಲ್ಲಿ ಹಾರಿ ಲಾಂಗ್ ಆನ್ ನಲ್ಲಿ ನಿಂತಿದ್ದ ಕುಲದೀಪ್ ಯಾದವ್ ಅವರ ಬಳಿ ಹೋಯಿತು.
ಇದನ್ನು ಕ್ಯಾಚ್ ಪಡೆಯಲು ಕುಲದೀಪ್ ಯಾದವ್ ವಿಫರಾಗಿದ್ದು ಮಾತ್ರವಲ್ಲದೇ ಚೆಂಡನ್ನು ಬೌಂಡರಿ ಆಚೆಗೆ ಬಿಟ್ಟಿದ್ದರು. ಇದರಿಂದ ಸಿಕ್ಸರ್ ಹೋಗಿತ್ತು. ಇದು ಹಾರ್ದಿಕ್ ಪಾಂಡ್ಯಾ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಅದೇ ಓವರ್ ನ ಕೊನೆಯ ಎಸೆತದಲ್ಲಿ ತಾರಿಕ್ ರನ್ನು ಬೌಲ್ಡ್ ಮಾಡುವ ಮೂಲಕ ಪಾಕಿಸ್ತಾನವನ್ನು ಆಲೌಟ್ ಮಾಡಿದ್ದರು. ಬಳಿಕ ಆಟಗಾರರ ಹಸ್ತಲಾಘವ ವೇಳೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.