ಕಲ್ಯಾಣಿ: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡ 67 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ರಣಜಿ ಟ್ರೋಫಿ ಫೈನಲ್ಗೆ ಪ್ರವೇಶಿಸಿ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.
ಸೆಮಿಫೈನಲ್ ಪಂದ್ಯದಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದ ಬಂಗಾಳ ತಂಡವನ್ನು ಆರು ವಿಕೆಟ್ಗಳಿಂದ ಸೋಲಿಸಿ ಇತಿಹಾಸ ಸೃಷ್ಟಿಸಿದೆ.
ಪಂದ್ಯದಲ್ಲಿ ಒಂಬತ್ತು ವಿಕೆಟ್ಗಳು ಮತ್ತು ಮೊದಲ ಇನ್ನಿಂಗ್ಸ್ನಲ್ಲಿ 54 ಎಸೆತಗಳಲ್ಲಿ 42 ರನ್ ಗಳಿಸಿದ ಔಕಿಬ್ ನಬಿ ಅವರ ಆಲ್ರೌಂಡ್ ಪ್ರದರ್ಶನದಿಂದ ಜಮ್ಮು ತಂಡ ಎರಡು ಬಾರಿಯ ಚಾಂಪಿಯನ್ ಬಂಗಾಳ ವಿರುದ್ಧ ಆರು ವಿಕೆಟ್ಗಳ ಜಯ ಸಾಧಿಸಿತು.
ಬಂಗಾಳ ನೀಡಿದ 126 ರನ್ಗಳ ಗುರಿಯನ್ನು ಜಮ್ಮು–ಕಾಶ್ಮೀರ 34.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸಾಧಿಸಿತು.
ವನ್ಸಾಜ್ ಶರ್ಮಾ (ಔಟ್ ಆಗದೆ 43) ಮತ್ತು ಅಬ್ದುಲ್ ಸಮದ್ (ಔಟ್ ಆಗದೆ 30) ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಈ ಪಂದ್ಯದಲ್ಲಿ ವೇಗದ ಬೌಲರ್ ಔಕಿಬ್ ನಬಿ ಒಟ್ಟು 9 ವಿಕೆಟ್ಗಳನ್ನು ಪಡೆದು ಆತಿಥೇಯ ತಂಡದ ಗೆಲ್ಲುವ ಅವಕಾಶಗಳನ್ನು ಕಳೆದುಕೊಳ್ಳುವಂತೆ ಮಾಡಿದರು.
1959–60ನಲ್ಲಿ ಮೊದಲ ಬಾರಿ ರಣಜಿ ಟ್ರೋಫಿಯಲ್ಲಿ ಪಾಲ್ಗೊಂಡ ಜಮ್ಮು–ಕಾಶ್ಮೀರ ತಂಡವನ್ನು ಇದುವರೆಗೆ ದೊಡ್ಡ ಸ್ಪರ್ಧಿಯೆಂದು ಪರಿಗಣಿಸಲಾಗಿರಲಿಲ್ಲ. ಆದರೆ, 2013–14ರಲ್ಲಿ ನಾಕೌಟ್ಗೆ ಅರ್ಹತೆ ಪಡೆದ ನಂತರ ತಂಡ ಕ್ರಮೇಣ ಪ್ರಗತಿ ಸಾಧಿಸುತ್ತ ಬಂದಿದೆ.
ಕ್ರಿಕೆಟ್ ತಂಡಕ್ಕೆ ಸಿಎಂ ಒಮರ್ ಅಬ್ದುಲ್ಲಾ ಅಭಿನಂದನೆ
ಏತನ್ಮಧ್ಯೆ ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಆಟಗಾರರು, ಕೋಚ್ಗಳು ಮತ್ತು ಸಿಬ್ಬಂದಿಯ ಶ್ರಮವನ್ನು ಪ್ರಶಂಸಿಸಿದ್ದಾರೆ.
ಈ ಸಾಧನೆ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ಭವಿಷ್ಯದಲ್ಲಿ ಜಮ್ಮು–ಕಾಶ್ಮೀರ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ನೋಡುವ ದಿನ ದೂರವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಂಡದ ಸಾಧನೆ ನಿರಂತರ ಶ್ರಮ, ಶಿಸ್ತು ಮತ್ತು ಉತ್ತಮ ಮಾರ್ಗದರ್ಶನದ ಫಲಿತಾಂಶ ಇದಾಗಿದ್ದು, ಈ ಸಾಧನೆಯು ಕೇಂದ್ರಾಡಳಿತ ಪ್ರದೇಶದಾದ್ಯಂತ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದೆ, ಸರ್ಕಾರ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರತಿಭಾ ಪೋಷಣೆಗೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.