ಅಹ್ಮದಾಬಾದ್: ಟಿ20 ವಿಶ್ವಕಪ್ 2026 ಟೂರ್ನಿಯ ಲೀಗ್ ಹಂತ ಮುಕ್ತಾಯವಾಗಿದ್ದು ಇದೀಗ ಎಲ್ಲ ಚಿತ್ತ ಸೂಪರ್ 8 ಹಂತದತ್ತ ನೆಟ್ಟಿದೆ. ಈ ನಡುವೆ ದಕ್ಷಿಣ ಆಫ್ರಿಕಾ ತಂಡದ ಕೋಚ್ ಶುಕ್ರಿ ಕಾನ್ರಾಡ್ ಭಾರತ ತಂಡದ ಕುರಿತು ಕ್ಷುಲ್ಲಕ ಹೇಳಿಕೆ ನೀಡಿದ್ದಾರೆ.
ಟಿ20 ವಿಶ್ವಕಪ್ನ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲು 8 ತಂಡಗಳು ಸಜ್ಜಾಗಿವೆ. ಈ ಸುತ್ತಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ.
ಇನ್ನು ದ್ವಿತೀಯ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಲಿದೆ. ಹಾಗೆಯೇ ನಾಳೆ (ಫೆ.22) ನಡೆಯಲಿರುವ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.
ಉಭಯ ತಂಡಗಳೂ ಈ ಮಹತ್ವದ ಸೂಪರ್ 8 ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಈ ನಡುವೆ ಪಂದ್ಯದ ಕುರಿತು ಆಟಗಾರರ ಅಭ್ಯಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ದಕ್ಷಿಣ ಆಫ್ರಿಕಾ ಕೋಚ್ ಶುಕ್ರಿ ಕಾನ್ರಾಡ್, ಭಾರತ ತಂಡದ ವಿರುದ್ಧ ಕ್ಷುಲ್ಲಕ ಹೇಳಿಕೆ ನೀಡಿದ್ದಾರೆ.
ಸಣ್ಣ-ಪುಟ್ಟ ತಂಡಗಳ ವಿರುದ್ಧ ಗೆಲ್ಲೋದಲ್ಲ
ಈ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತನ್ನ ಸಂಪೂರ್ಣ ಬಲದೊಂದಿಗೆ ಆಡಲಿದ್ದು, ಟೀಮ್ ಇಂಡಿಯಾದ ಬಂಡವಾಳವನ್ನು ಬಯಲು ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ. 'ಭಾರತ ತಂಡವು ಮೊದಲ ಸುತ್ತಿನಲ್ಲಿ ಯಾವುದೇ ಬಲಿಷ್ಠ ತಂಡದ ವಿರುದ್ಧ ಕಣಕ್ಕಿಳಿದಿಲ್ಲ.
ಇದೀಗ ಅವರು ಸೌತ್ ಆಫ್ರಿಕಾ ತಂಡವನ್ನು ಎದುರಿಸಬೇಕಿದೆ. ಹೀಗಾಗಿ ಅವರು ಹೆಚ್ಚಿನ ಒತ್ತಡಕ್ಕೆ ಒಳಗಾಗಲಿದ್ದಾರೆ. ಭಾರತವು ಹಾಲಿ ಚಾಂಪಿಯನ್ ಮತ್ತು ಆತಿಥೇಯ ರಾಷ್ಟ್ರವಾಗಿರುವುದರಿಂದ ಅವರ ಮೇಲೆ ಅಪಾರ ನಿರೀಕ್ಷೆಯಿದೆ. ಈ ಒತ್ತಡವನ್ನು ಬಳಸಿ ಭಾರತವನ್ನು “ಅಸಹಾಯಕ” ಸ್ಥಿತಿಗೆ ತಳ್ಳುವುದಾಗಿ ಕಾನ್ರಾಡ್ ಹೇಳಿದ್ದಾರೆ.
ಹಲವು ಆಟಗಾರರು ಕಳಪೆ ಫಾರ್ಮ್ ನಲ್ಲಿದ್ದಾರೆ
ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಆಟಗಾರರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದರ ನಡುವೆ ಅಭಿಮಾನಿಗಳ ಕಡೆಯಿಂದಲೂ ಟೀಮ್ ಇಂಡಿಯಾ ಆಟಗಾರರು ಒತ್ತಡ ಎದುರಿಸುತ್ತಿದ್ದಾರೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲಕ್ಷಾಂತರ ಅಭಿಮಾನಿಗಳ ಎದುರು ಆಡುವುದು ಭಾರತಕ್ಕೆ ಶಕ್ತಿಯೂ ಹೌದು, ದೊಡ್ಡ ಹೊರೆಯೂ ಹೌದು. ಹೀಗಾಗಿ ಈ ಪಂದ್ಯದ ಮೂಲಕ ನಾವು ಭಾರತ ತಂಡದ ಬಂಡವಾಳ “ಬಯಲು” ಮಾಡುತ್ತೇವೆ ಎಂದು ಕಾನ್ರಾಡ್ ಹೇಳಿದ್ದಾರೆ.