ಭಾರತ vs ದಕ್ಷಿಣ ಆಫ್ರಿಕಾ 
ಕ್ರಿಕೆಟ್

T20 World Cup 2026: 'ಟೀಂ ಇಂಡಿಯಾ ಅಹಂಕಾರ ಬಿಟ್ಟು, ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅಗತ್ಯವಿತ್ತು'

ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ 76 ರನ್‌ಗಳ ಭಾರಿ ಜಯ ಸಾಧಿಸಿದ್ದು, ಈ ಸೋಲು ಭಾರತದ ಅಜೇಯ ಓಟಕ್ಕೆ ತಡೆ ನೀಡಿದೆ.

ಅಹಮದಾಬಾದ್: ಭಾರತ ತಂಡವು ಅತಿಯಾದ ಆತ್ಮವಿಶ್ವಾಸದ ಬದಲಿಗೆ ತಮ್ಮ ಅಹಂಕಾರವನ್ನು ಬಿಟ್ಟು, ಪರಿಸ್ಥಿತಿಗಳಿಗೆ ತಕ್ಕಂತೆ ಹೊಂದಿಕೊಳ್ಳುವ ಅಗತ್ಯವಿತ್ತು. ಅಜಾಗರೂಕತೆಯಿಂದ ದಾಳಿ ಮಾಡುವ ಬದಲು, ಆಟವನ್ನು ಗಮನಿಸಬೇಕಿತ್ತು ಎಂದು ಬ್ಯಾಟಿಂಗ್ ದಂತಕಥೆ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ 76 ರನ್‌ಗಳ ಭಾರಿ ಜಯ ಸಾಧಿಸಿದ್ದು, ಈ ಸೋಲು ಭಾರತದ ಅಜೇಯ ಓಟಕ್ಕೆ ತಡೆ ನೀಡಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಭಾರಿ ಅಂತರದ ಹೀನಾಯ ಸೋಲಾಗಿದೆ.

'ಡೆವಾಲ್ಡ್ ಬ್ರೆವಿಸ್ ಮತ್ತು ಡೇವಿಡ್ ಮಿಲ್ಲರ್ ತಮ್ಮ ಜೊತೆಯಾಟವನ್ನು ಹೇಗೆ ಕಟ್ಟಿದರು ಎಂಬುದನ್ನು ನೋಡಿದ ನಂತರ, ಭಾರತೀಯ ಬ್ಯಾಟ್ಸ್‌ಮನ್‌ಗಳಿಂದಲೂ ಅದು ಅಗತ್ಯವಾಗಿತ್ತು. ಆದರೆ, ಭಾರತೀಯ ಬ್ಯಾಟ್ಸ್‌ಮನ್‌ಗಳು ಹಾಗೆ ಮಾಡಲಿಲ್ಲ. ಅವರು ಅತಿಯಾದ ಆತ್ಮವಿಶ್ವಾಸದಿಂದ ಬಂದರು, ಎಲ್ಲದಕ್ಕೂ ತಮ್ಮ ಬ್ಯಾಟ್ ಬೀಸಿ ವಿಕೆಟ್‌ಗಳನ್ನು ಕಳೆದುಕೊಂಡರು. ದಕ್ಷಿಣ ಆಫ್ರಿಕಾ ಸ್ಪಷ್ಟವಾಗಿ ಭಾರತವನ್ನು ಮೀರಿಸಿತು ಮತ್ತು ಅದು ಅವರಿಗೆ ಅರ್ಹವಾದ ಗೆಲುವು' ಎಂದು ಗವಾಸ್ಕರ್ ಜಿಯೋಸ್ಟಾರ್‌ನಲ್ಲಿ ಹೇಳಿದರು.

ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ನಂತರ, ಮಿಲ್ಲರ್ ಮತ್ತು ಬ್ರೆವಿಸ್ 97 ರನ್‌ಗಳ ಜೊತೆಯಾಟವಾಡಿ ಪ್ರೋಟಿಯಸ್ ತಂಡವನ್ನು 187/7 ಸ್ಕೋರ್‌ಗೆ ಕೊಂಡೊಯ್ದರು. 188 ರನ್ ಗುರಿ ಬೆನ್ನತ್ತಿದ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪದೇ ಪದೆ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.

'ದಕ್ಷಿಣ ಆಫ್ರಿಕಾದ ಇನಿಂನಿಂದ ಭಾರತ ಯಾವುದೇ ಟಿಪ್ಪಣಿಗಳನ್ನು ತೆಗೆದುಕೊಳ್ಳಲಿಲ್ಲ. ಅವರು ಅತಿಯಾದ ಆತ್ಮವಿಶ್ವಾಸದಿಂದಾಗಿ ಪ್ರತಿ ಎಸೆತದಲ್ಲೂ ಬೌಂಡರಿ ಗಳಿಸುವ ಆಶಯದೊಂದಿಗೆ ತಮ್ಮ ಬ್ಯಾಟ್ ಬೀಸಿದರು. ಇದು ಟಿ20 ಕ್ರಿಕೆಟ್ ಆಡುವ ರೀತಿ ಅಲ್ಲ. ನೀವು ಎದುರಾಳಿಗಳಿಂದ ಕಲಿಯಬೇಕು. ಇಂತಹ ಕಠಿಣ ಮೇಲ್ಮೈಯಲ್ಲಿಯೂ ಅವರು ಉತ್ತಮ ಸ್ಕೋರ್ ಗಳಿಸಿದರು. ನೀವು ನಿಮ್ಮ ಅಹಂಕಾರವನ್ನು ತೊಡೆದುಹಾಕಬೇಕು, ಆಟವನ್ನು ಗಮನಿಸಬೇಕು ಮತ್ತು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಬೇಕು' ಎಂದು ಹೇಳಿದರು.

ಭಾರತವು ಪವರ್ ಪ್ಲೇ ಒಳಗೆ ತಮ್ಮ ಅಗ್ರ ಮೂರು ಆಟಗಾರರಾದ ಇಶಾನ್ ಕಿಶನ್ (0), ಅಭಿಷೇಕ್ ಶರ್ಮಾ (15) ಮತ್ತು ತಿಲಕ್ ವರ್ಮಾರನ್ನು (1) ಕಳೆದುಕೊಂಡು 26/3 ಕ್ಕೆ ಇಳಿದಿತ್ತು.

'ತಿಲಕ್ ವರ್ಮಾ ತುಂಬಾ ಚಾಣಾಕ್ಷ ಬ್ಯಾಟ್ಸ್‌ಮನ್. ಆದರೆ, ಈ ಪಂದ್ಯದಲ್ಲಿ ಅವರ ವಿಧಾನದಿಂದ ನಾನು ನಿರಾಶೆಗೊಂಡೆ. ಇಶಾನ್ ಕಿಶನ್ ಮೊದಲ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ಪ್ರತಿ ಓವರ್‌ಗೆ ರನ್ ದರ ಸುಮಾರು 9.5 ಅಗತ್ಯವಿತ್ತು. ಆದ್ದರಿಂದ, ತಿಲಕ್ ಸ್ವತಃ ಹೆಚ್ಚಿನ ಸಮಯವನ್ನು ನೀಡಬಹುದಿತ್ತು. ಇನ್ನೊಂದು ತುದಿಯಲ್ಲಿ, ಅಭಿಷೇಕ್ ಶರ್ಮಾ ಸತತವಾಗಿ ಡಕ್ ಔಟ್ ಆಗಿದ್ದರು. ಆದ್ದರಿಂದ, ಹಿಡಿತ ಸಾಧಿಸುವುದು, ಜೊತೆಯಾಟ ನಿರ್ಮಿಸುವುದು ಮತ್ತು ಮೊದಲ ಆರು ಓವರ್‌ಗಳನ್ನು ದಾಟುವುದು ತಿಲಕ್ ಅವರ ಜವಾಬ್ದಾರಿಯಾಗಿತ್ತು. ಆದರೆ, ಅವರು ಅದನ್ನು ಮಾಡಲು ವಿಫಲರಾದರು' ಎಂದು ಕಿಡಿಕಾರಿದರು.

ಪವರ್‌ಪ್ಲೇನಲ್ಲಿ ನೀವು ಯಾವಾಗಲೂ 70 ರನ್ ಗಳಿಸಬೇಕಾಗಿಲ್ಲ. 55-60 ರನ್‌ಗಳು ಸಹ ಉತ್ತಮ ವೇದಿಕೆಯಾಗುತ್ತಿತ್ತು. ಆದರೆ, ಭಾರತೀಯ ಬ್ಯಾಟ್ಸ್‌ಮನ್‌ಗಳ ಅಜಾಗರೂಕ ವಿಧಾನವು ಅಹಮದಾಬಾದ್‌ನಲ್ಲಿ ಅವರ ಪತನಕ್ಕೆ ಕಾರಣವಾಯಿತು. ಭಾರತ ಮುಂದಿನ ಬಾರಿ ಜಿಂಬಾಬ್ವೆ ವಿರುದ್ಧ ಆಡಬೇಕಿದೆ. ಆಗ ಅಕ್ಷರ್ ಪಟೇಲ್ ಅವರನ್ನು ಪ್ಲೇಯಿಂಗ್ XI ನಲ್ಲಿ ನೋಡಲು ಬಯಸುತ್ತೇನೆ ಎಂದು ಗವಾಸ್ಕರ್ ಹೇಳಿದರು.

'ಜಿಂಬಾಬ್ವೆ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಅಕ್ಷರ್ ಪಟೇಲ್ ಅವರನ್ನು ಮತ್ತೆ ಪ್ಲೇಯಿಂಗ್ XI ಗೆ ಕರೆತರುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಅರ್ಶದೀಪ್ ಸಿಂಗ್ ಬದಲಿಗೆ ನೀವು ಅವರನ್ನು ಸೇರಿಸಿಕೊಳ್ಳಬಹುದು. ಆದರೆ, ಅರ್ಶದೀಪ್ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನಾಗಿ ಬೌಲಿಂಗ್ ಮಾಡಿದರು ಮತ್ತು ಅಷ್ಟು ಉತ್ತಮ ಲಯದಲ್ಲಿ ಕಾಣುವ ಯಾರನ್ನಾದರೂ ನೀವು ಬದಲಾಯಿಸಲು ಬಯಸುವುದಿಲ್ಲ. ಹಾಗಾಗಿ, ಅವರು ಯಾವುದೇ ಬದಲಾವಣೆ ಮಾಡದೆ ಅದೇ ತಂಡದೊಂದಿಗೆ ಆಡಬಹುದು' ಎಂದರು.

'ಆದರೆ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ಕೈತಪ್ಪಬಹುದು ಎಂದು ನಾನು ಭಾವಿಸುತ್ತೇನೆ. ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ, ಅವರು ಕೇವಲ ಎರಡು ಓವರ್ ಬೌಲಿಂಗ್ ಮಾಡಿದರು ಮತ್ತು ಬ್ಯಾಟಿಂಗ್‌ನಲ್ಲಿ ಏನೂ ಮಾಡಲಿಲ್ಲ. ನೆದರ್ಲೆಂಡ್ ವಿರುದ್ಧ, ಅವರು ನಾಲ್ಕು ಓವರ್ ಬೌಲಿಂಗ್ ಮಾಡಿದರು. ಆದರೆ, ಯಾವುದೇ ವಿಕೆಟ್ ಪಡೆಯಲಿಲ್ಲ. ವಾಷಿಂಗ್ಟನ್ ಸುಂದರ್‌ಗೆ ಸಮಯ ಮುಗಿದಿದೆ ಎಂದು ನಾನು ಭಾವಿಸುತ್ತೇನೆ. ಅಕ್ಷರ್ ಪಟೇಲ್ ಖಂಡಿತವಾಗಿಯೂ ಅವರ ಸ್ಥಾನವನ್ನು ತುಂಬುತ್ತಾರೆ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡಿನಲ್ಲಿ SIR: ಅಂತಿಮ ಪಟ್ಟಿ ಬಿಡುಗಡೆ; 74 ಲಕ್ಷ ಮತದಾರರ ಹೆಸರು ಡಿಲೀಟ್

ಸಭೆಯಿಂದ ಎದ್ದು ಹೋಗ್ತೀನೀ?: SC-STಗೆ ಅನ್ಯಾಯ; ಸಚಿವ ಸಂತೋಷ್ ಲಾಡ್ ಮುಂದೆ Congress MLC ಗುಡುಗು, Video!

ಬಾಂಗ್ಲಾದೇಶ ಮುಳುಗಿಸುವ ಯೋಜನೆ, ಅಸ್ಥಿರತೆ ಸೃಷ್ಟಿಗೆ ಯತ್ನಿಸಿದ್ದ ನೊಬೆಲ್ ಯೂನಸ್: ಅಧ್ಯಕ್ಷರಿಂದ ಸ್ಫೋಟಕ ಮಾಹಿತಿ ಬಹಿರಂಗ!

Ranji Trophy final: ಚೊಚ್ಚಲ ಬಾರಿ ಫೈನಲ್‌ಗೆ ಕಾಲಿಟ್ಟಿರುವ ಕಾಶ್ಮೀರ ಬಲಿಷ್ಠ ಕರ್ನಾಟಕದ ವಿರುದ್ಧ ಗೆಲ್ಲಲು ಪವಾಡವೇ ಮಾಡಬೇಕಿದೆ!

ಯಾವುದೇ ಕ್ಷಣದಲ್ಲಿ ಅಮೆರಿಕದಿಂದ ವೈಮಾನಿಕ ದಾಳಿ ಸಾಧ್ಯತೆ: ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

SCROLL FOR NEXT