ಟಿ20 ವಿಶ್ವಕಪ್ನಲ್ಲಿ ಅಜೇಯ ಓಟವನ್ನು ಮುಂದುವರಿಸಿದ್ದ ಟೀಂ ಇಂಡಿಯಾ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ ಸೆಮಿಫೈನಲ್ಗೆ ಅರ್ಹತೆ ಪಡೆಯುವಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ವಿಶ್ವದ ಅತ್ಯುತ್ತಮ ಟಿ20 ತಂಡವು 2026ರ ಟಿ20 ವಿಶ್ವಕಪ್ನಿಂದ ಹೊರಹೋಗುವ ಅಪಾಯದಲ್ಲಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವು ಅಹಮದಾಬಾದ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಅಂತರದ ಹೀನಾಯ ಸೋಲು ಅನುಭವಿಸಿತು. ಇದರಿಂದಾಗಿ ತಂಡದ ಆತ್ಮವಿಶ್ವಾಸ ಕುಗ್ಗಿತು ಮತ್ತು ಮುಖ್ಯವಾಗಿ, ತಂಡದ ನೆಟ್ ರನ್ ರೇಟ್ ಮೇಲೆ ಭಾರಿ ಹೊಡೆತ ಬಿದ್ದಿತು.
ಆದಾಗ್ಯೂ, ಜಿಂಬಾಬ್ವೆ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 72 ರನ್ ಅಂತರದ ಜಯ ಸಾಧಿಸಿದ ನಂತರ ಭಾರತ ಮತ್ತೆ ಚೇತರಿಸಿಕೊಂಡಿದೆ. ಇದೀಗ ಸೆಮಿಫೈನಲ್ ತಲುಪುವ ತಂಡದ ಆಸೆಯನ್ನು ಜೀವಂತವಾಗಿಟ್ಟಿದೆ. ಭಾರತ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಒಂದು ವೇಳೆ ಸೋತರೆ, ಮುಂದಿನ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ಭಾರತದ ಸೆಮಿಫೈನಲ್ ಅರ್ಹತಾ ಸನ್ನಿವೇಶ
ಸನ್ನಿವೇಶ 1: ನಾಕೌಟ್ ಪಂದ್ಯವಾದ ಈ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಲೇಬೇಕು. ಈ ಪಂದ್ಯದಲ್ಲಿ ಯಾವುದೇ ತಂಡ ಗೆಲುವು ಸಾಧಿಸಿದರೂ, ಅವರು ಸೆಮಿಫೈನಲ್ಗೆ ಅರ್ಹತೆ ಪಡೆಯುತ್ತಾರೆ.
ದಕ್ಷಿಣ ಆಫ್ರಿಕಾ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸುವುದರೊಂದಿಗೆ ಸೆಮಿಫೈನಲ್ಗೆ ಅರ್ಹತೆ ಪಡೆದಿದ್ದು, ಉಳಿದ ಒಂದು ಸ್ಥಾನಕ್ಕೆ ವೆಸ್ಟ್ ಇಂಡೀಸ್ ಮತ್ತು ಭಾರತ ಸೆಣಸಲಿವೆ. ಭಾರತ ಗೆದ್ದರೆ ನಾಲ್ಕು ಅಂಕಗಳೊಂದಿಗೆ ಅರ್ಹತೆ ಪಡೆಯುತ್ತದೆ.
ಸನ್ನಿವೇಶ 2: ಒಂದು ವೇಳೆ ಭಾರತ ಮುಂದಿನ ಪಂದ್ಯ ಅಂದರೆ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡರೆ ಪಂದ್ಯಾವಳಿಯಿಂದ ಔಟ್ ಆಗುತ್ತದೆ. ಆಗ ವೆಸ್ಟ್ ಇಂಡೀಸ್ ಅರ್ಹತೆ ಪಡೆಯುತ್ತದೆ.