2026ರ ಟಿ20 ವಿಶ್ವಕಪ್ ವಿಜಯದ ನಂತರ ಭಾರತ ತನ್ನ ಮೊದಲ ಗೆಲುವಿನ ಹುಡುಕಾಟವನ್ನು ಮುಂದುವರೆಸಿದೆ. ಪಂದ್ಯಾವಳಿಯ ನಂತರ ತಂಡವು ನಾಲ್ಕು ಪಂದ್ಯಗಳನ್ನು ಆಡಿದ್ದರೂ ಒಂದನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡವು ಐರ್ಲೆಂಡ್ ವಿರುದ್ಧ 0-2 ಅಂತರದಲ್ಲಿ ಸರಣಿ ವೈಟ್ವಾಶ್ ಅನುಭವಿಸಿತು. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಟಿ20ಐ ಪಂದ್ಯ ಮಳೆಯಿಂದ ರದ್ದಾಗಿತ್ತು. ಆದರೆ, ಎರಡನೇ ಪಂದ್ಯದಲ್ಲಿ ತ್ರೀ ಲಯನ್ಸ್ ನಾಲ್ಕು ವಿಕೆಟ್ಗಳ ಅಂತರದ ಸುಲಭ ಜಯ ಸಾಧಿಸಿತು.
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯವನ್ನು ಭಾರತದ ಮಾಜಿ ಬ್ಯಾಟ್ಸ್ಮನ್ ಆಕಾಶ್ ಚೋಪ್ರಾ ವಿಶ್ಲೇಷಿಸುತ್ತಾ, ಅರ್ಶದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ಎರಡು ದುಬಾರಿ ಓವರ್ಗಳನ್ನು ಬೌಲ್ ಮಾಡಿದಾಗಲೇ ಮುಗಿದು ಪಂದ್ಯ ಧೂಳಿಪಟವಾಯಿತು ಎಂದು ಹೇಳಿದರು.
ಅರ್ಶದೀಪ್ ಸಿಂಗ್ ತಮ್ಮ ಮೊದಲ ಓವರ್ನಲ್ಲಿಯೇ 2 ವಿಕೆಟ್ ಪಡೆದು ಭಾರತಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಅವರು ತಮ್ಮ ಎರಡನೇ ಓವರ್ನಲ್ಲಿ 27 ರನ್ಗಳನ್ನು ಬಿಟ್ಟುಕೊಟ್ಟರು. ಹ್ಯಾರಿ ಬ್ರೂಕ್ ಮತ್ತು ಜೇಕಬ್ ಬೆಥೆಲ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಕೊನೆಯ ನಾಲ್ಕು ಓವರ್ಗಳಲ್ಲಿ ಇಂಗ್ಲೆಂಡ್ಗೆ 49 ರನ್ಗಳು ಬೇಕಾಗಿದ್ದಾಗ ಭಾರತ ಇನ್ನೂ ಆಟದಲ್ಲಿತ್ತು. ಆದರೆ, ಪಂದ್ಯದ ಮತ್ತೊಂದು ನಿರ್ಣಾಯಕ ಹಂತದಲ್ಲಿ ರವಿ ಬಿಷ್ಣೋಯ್ ಒಂದೇ ಓವರ್ನಲ್ಲಿ 29 ರನ್ಗಳನ್ನು ಸೋರಿಕೆ ಮಾಡಿದರು. ಇದು ಪಂದ್ಯವನ್ನು ಇಂಗ್ಲೆಂಡ್ ಪರವಾಗಿ ಬದಲಾಯಿಸಿತು.
'ಎರಡು ಓವರ್ಗಳಲ್ಲಿ 56 ರನ್ಗಳು, ಅರ್ಶದೀಪ್ 27 ಮತ್ತು ರವಿ ಬಿಷ್ಣೋಯ್ 29 ಮತ್ತು ಪಂದ್ಯವು ಅಲ್ಲಿಗೆ ಮುಗಿಯಿತು. ಏಕೆಂದರೆ, ಡಿಫೆಂಡ್ ಮಾಡಿಕೊಳ್ಳಲು ಆಗ 225 ರನ್ಗಳು ನಿಮ್ಮ ಮುಂದಿರಲಿಲ್ಲ. ಆಗ ನಿಮ್ಮ ಬಳಿ ಇದ್ದದ್ದು ರಕ್ಷಣಾತ್ಮಕವಾಗಿ ಆಡುವುದಾಗಿತ್ತು. ವಾಸ್ತವವಾಗಿ, ಒಂದು ಹಂತದಲ್ಲಿ 28 ಎಸೆತಗಳಲ್ಲಿ 58 ರನ್ಗಳು ಬೇಕಾಗಿದ್ದವು. ಪಂದ್ಯವು ಭಾರತದ ಹಿಡಿತದಲ್ಲಿತ್ತು. ಆದರೆ, ಅದರ ನಂತರ, ಜೇಕಬ್ ಬೆಥೆಲ್ ಅವರು ರವಿ ಬಿಷ್ಣೋಯ್ ಅವರ ಓವರ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು ಮತ್ತು ಆಟವು ಮುಗಿದುಹೋಯಿತು' ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದರು.
'ನಾವು ವಿಶ್ವಕಪ್ ಗೆಲ್ಲುವ ಮೊದಲು ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ ಮತ್ತು ಈಗ ನಾವು ಒಂದೇ ಒಂದು ಪಂದ್ಯವನ್ನು ಗೆಲ್ಲುತ್ತಿಲ್ಲ. ನಾವು ಸತತ ಮೂರು ಪಂದ್ಯಗಳನ್ನು ಸೋತಿದ್ದೇವೆ ಮತ್ತು ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ವಿಶ್ವಕಪ್ ನಂತರ ನಮ್ಮ ಮೊದಲ ಗೆಲುವಿಗಾಗಿ ನಾವು ಇನ್ನೂ ಕಾಯುತ್ತಿದ್ದೇವೆ' ಎಂದು ಅವರು ಹೇಳಿದರು.
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಐಗೆ ಭಾರತ ತಂಡವು ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಆದರೆ ಅವರು ದೊಡ್ಡ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ ಮತ್ತು ಎರಡು ಸಿಕ್ಸರ್ಗಳ ಸಹಾಯದಿಂದ 14 ರನ್ ಗಳಿಸಿದ ನಂತರ ಸ್ಟಂಪ್ ಔಟ್ ಆದರು.
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮಂಗಳವಾರ ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ನಲ್ಲಿ ಮೂರನೇ ಟಿ20 ಪಂದ್ಯವನ್ನು ಆಡಲಿವೆ.