ಚೆನ್ನೈ: ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಈ ಸರಣಿ ಸಂಪೂರ್ಣ ನಿರಾಸೆ ಮೂಡಿಸಿದ್ದು 5 ಪಂದ್ಯಗಳ ಟಿ20 ಸರಣಿಯಲ್ಲಿ 4-0 ಅಂತರದಲ್ಲಿ ವೈಟ್ ವಾಶ್ ಆಗಿದೆ.
ಟ್ರಾಫಿಕ್ ಜಾಮ್ನಿಂದಾಗಿ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಕೂಡ ನಿಗದಿತ ಸಮಯಕ್ಕೆ ನಡೆಯದ ಪರಿಸ್ಥಿತಿ ಎದುರಾದರೆ, ಮೈದಾನದಲ್ಲಿ ಭಾರತ ಸತತ ಸೋಲುಗಳನ್ನು ಅನುಭವಿಸಿ ಟಿ20 ಸರಣಿಯನ್ನು ಗೆಲುವಿಲ್ಲದೆ ಮುಗಿಸಿದೆ.
ಶನಿವಾರ ಸೌತಾಂಪ್ಟನ್ನಲ್ಲಿ ಭಾರತ-ಇಂಗ್ಲೆಂಡ್ 5ನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬೌಲಿಂಗ್ ಆಯ್ದರು. ಟೀಂ ಇಂಡಿಯಾ ಬಸ್ ಟ್ರಾಫಿಕ್ನಲ್ಲಿ ಸಿಲುಕಿದ್ದರಿಂದ ಪಂದ್ಯ 45 ನಿಮಿಷ ತಡವಾಗಿ ಆರಂಭವಾಯಿತು.
ವಾಸ್ತವವಾಗಿ ಉಭಯ ತಂಡಗಳ ನಡುವಿನ ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಬೇಕಿತ್ತು. ಅಂದರೆ ಟಾಸ್ ಸಂಜೆ 6:30 ಕ್ಕೆ ನಡೆಯಬೇಕಿತ್ತು. ಆದರೆ ಈ ಪಂದ್ಯದ ಟಾಸ್ ಸಂಜೆ 7:15 ಕ್ಕೆ ನಡೆದರೆ, ಪಂದ್ಯ 7:30 ಕ್ಕೆ ಆರಂಭವಾಯಿತು.
ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ ಟೀಂ ಇಂಡಿಯಾ
ಯಾವುದೇ ಪಂದ್ಯ ತಡವಾಗಿ ಆರಂಭವಾಗಲು ಒಂದು ಹವಾಮಾನ ವೈಪರಿತ್ಯ ಕಾರಣವಾಗಬೇಕು ಅಥವಾ ಮೈದಾನದಲ್ಲಿನ ಸಿದ್ಧತೆಗಳಲ್ಲಿ ಲೋಪ ಉಂಟಾಗಿರಬೇಕು. ಆದರೆ ಈ ಐದನೇ ಟಿ20 ಪಂದ್ಯದ ಟಾಸ್ ವಿಳಂಬವಾಗಲು ಟೀಂ ಇಂಡಿಯಾ ತಡವಾಗಿ ಮೈದಾನಕ್ಕೆ ಆಗಮಿಸಿದ್ದು. ಟೀಂ ಇಂಡಿಯಾ ತಡವಾಗಿ ಕ್ರೀಡಾಂಗಣಕ್ಕೆ ಬರುವುದಕ್ಕೆ ಕಾರಣವೂ ಇದ್ದು, ತಂಡದ ಬಸ್ ಕ್ರೀಡಾಂಗಣಕ್ಕೆ ಬರುವ ಹಾದಿಯಲ್ಲಿ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿತು.
ಹೀಗಾಗಿ ನಿಗದಿತ ಸಮಯಕ್ಕೆ ಆಟಗಾರರು ಕ್ರೀಡಾಂಗಣಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಟಾಸ್ ನಡೆಯುವ ಸಮಯಕ್ಕೆ ಆಟಗಾರರು ಕ್ರೀಡಾಂಗಣಕ್ಕೆ ಬಂದರು. ಹೀಗಾಗಿ ಪಂದ್ಯದ ಟಾಸ್ ಅನ್ನು 45 ನಿಮಿಷ ತಡವಾಗಿ ನಡೆಸಲಾಯಿತು.
ಮತ್ತೆ ಸೋಲು, ವ್ಯಾಪಕ ಟೀಕೆ
ಆದರೆ ಟ್ರಾಫಿಕ್ ತೊಂದರೆ ಮಾತ್ರವಲ್ಲ, ಇಡೀ ಪ್ರವಾಸದಲ್ಲೂ ಭಾರತಕ್ಕೆ ಯಾವುದೇ ಸಂಗತಿ ಕೈಗೂಡಲಿಲ್ಲ. ಬೆಲ್ಫಾಸ್ಟ್ಗೆ ಕಾಲಿಟ್ಟ ದಿನದಿಂದಲೇ ಆರಂಭವಾದ ಸಮಸ್ಯೆಗಳು ಕೊನೆಯ ಪಂದ್ಯದಲ್ಲೂ ಮುಂದುವರಿದವು. ಅಂತಿಮ ಟಿ20ಯಲ್ಲಿ ಭಾರತ 56 ರನ್ಗಳಿಂದ ಸೋಲು ಕಂಡಿತು.
ಈ ಸೋಲಿನೊಂದಿಗೆ ಭಾರತ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 0-2 ಹಾಗೂ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ 0-4 ಅಂತರದಿಂದ ವೈಟ್ವಾಶ್ ಅನುಭವಿಸಿತು.
ಒಟ್ಟಾರೆ ಆರು ಟಿ20 ಪಂದ್ಯಗಳಲ್ಲೂ ಸೋಲು ಕಂಡಿರುವ ಭಾರತ, ನಾಯಕ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಮೊದಲ ಗೆಲುವಿನ ನಿರೀಕ್ಷೆಯನ್ನೂ ಈಡೇರಿಸಿಕೊಳ್ಳಲು ವಿಫಲವಾಯಿತು. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮೇಲೂ ಒತ್ತಡ ಹೆಚ್ಚಾಗುತ್ತಿದೆ.
ತಂಡದ ಆಯ್ಕೆ ಮತ್ತು ನಿರ್ವಹಣೆಯೂ ಟೀಕೆಗೆ ಗುರಿಯಾಗಿದೆ. ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್ ಅವರನ್ನು ಮೊದಲ ಮೂರು ಪಂದ್ಯಗಳಿಗೆ ಕೈಬಿಟ್ಟು, 15 ವರ್ಷದ ಪ್ರತಿಭಾವಂತ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಯಿತು. ಆದರೆ ಸೂರ್ಯವಂಶಿ ದೊಡ್ಡ ಮೊತ್ತ ಗಳಿಸಲು ವಿಫಲರಾದ ಬಳಿಕ ಅಂತಿಮ ಪಂದ್ಯಕ್ಕೆ ಅವರನ್ನು ಕೈಬಿಟ್ಟು ಮತ್ತೆ ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಲಾಯಿತು.
ಅಷ್ಟೇ ಅಲ್ಲ, ಭಾರತ ಆಡಿದ ಪ್ರತಿಯೊಂದು ಪಂದ್ಯದಲ್ಲೂ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಸ್ಥಿರ ಆಡುವ ಹನ್ನೊಂದರ ಕೊರತೆ ಸ್ಪಷ್ಟವಾಗಿ ಕಂಡುಬಂದಿತು. ಪದೇ ಪದೇ ಗಾಯದ ಸಮಸ್ಯೆ ಮತ್ತು ಕಳಪೆ ಫೀಲ್ಡಿಂಗ್ ಕೂಡ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತು.
ಶ್ರೇಯಸ್ ಅಯ್ಯರ್ ಅಸಮಾಧಾನ
ಪಂದ್ಯದ ಟಾಸ್ ವೇಳೆ ಮಾತನಾಡಿದ್ದ ನಾಯಕ ಶ್ರೇಯಸ್ ಅಯ್ಯರ್, "ತಂಡಕ್ಕೆ ಮುಂದಿನ ದಿನಗಳಲ್ಲಿ ಯಾವ ಸಂಯೋಜನೆ ಉತ್ತಮ ಎಂಬುದನ್ನು ಪರೀಕ್ಷಿಸುವ ಸಮಯ ಇದಾಗಿದೆ" ಎಂದು ಹೇಳಿದ್ದರು. ಆದರೆ ಇದರಿಂದ ಹಿಂದಿನ ಪಂದ್ಯಗಳಲ್ಲಿ ಅನುಸರಿಸಿದ್ದ ತಂತ್ರ, ಆಟಗಾರರ ಪಾತ್ರದ ಸ್ಪಷ್ಟತೆ ಹಾಗೂ ಡ್ರೆಸ್ಸಿಂಗ್ ರೂಮ್ನ ಸ್ಥಿರತೆ ಬಗ್ಗೆ ಪ್ರಶ್ನೆಗಳು ಮೂಡಿವೆ.
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಮೂರನೇ ಕ್ರಮಾಂಕದ ಪ್ರಮುಖ ಬ್ಯಾಟರ್ ಎಂದು ಪರಿಗಣಿಸಲಾಗಿದ್ದ ಹಾಗೂ ಉಪನಾಯಕನಾಗಿಯೂ ನೇಮಕಗೊಂಡಿದ್ದ ತಿಲಕ್ ವರ್ಮಾ ಅವರನ್ನು ನಂತರ ಬ್ಯಾಟಿಂಗ್ ಕ್ರಮದಲ್ಲಿ ಕೆಳಗಿಳಿಸಲಾಯಿತು.
ಮತ್ತೊಂದೆಡೆ, ವಾಷಿಂಗ್ಟನ್ ಸುಂದರ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದರೆ, ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡಿರುವುದು ತಂಡಕ್ಕೆ ಮತ್ತಷ್ಟು ಹಿನ್ನಡೆಯಾಯಿತು. ಇವರಿಗೆ ಸೂಕ್ತ ಪರ್ಯಾಯ ಆಟಗಾರರನ್ನು ಕಂಡುಹಿಡಿಯುವಲ್ಲಿ ತಂಡ ವಿಫಲವಾಗಿದೆ.
ಟಿ20 ವಿಶ್ವಕಪ್ ಗೆದ್ದ ಕೇವಲ ಏಳು ಪಂದ್ಯಗಳ ಬಳಿಕವೇ ಇಂಗ್ಲೆಂಡ್ ವಿರುದ್ಧ ಭಾರತ 257/3 ರನ್ಗಳನ್ನು ಬಿಟ್ಟುಕೊಟ್ಟಿರುವುದು ತಂಡದ ಇತ್ತೀಚಿನ ಪ್ರದರ್ಶನದ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ಕ್ರಿಕೆಟ್ ವಲಯ ವಿಶ್ಲೇಷಿಸುತ್ತಿದೆ.