ಕೊಲೊಂಬೊ (ಶ್ರೀಲಂಕಾ): ಮಹತ್ವದ ಬೆಳವಣಿಗೆಯಲ್ಲಿ ಲಂಕಾ ಪ್ರೀಮಿಯರ್ ಲೀಗ್ (LPL) 2026 ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಆಟಗಾರನಿಗೆ ಲಂಚ ನೀಡಲು ಯತ್ನಿಸಿದ ಗಂಭೀರ ಆರೋಪದ ಮೇಲೆ ಭಾರತದ ಮಾಜಿ ಅಂಡರ್-19 ವಿಶ್ವಕಪ್ ಸ್ಟಾರ್ ಮಂಜೋತ್ ಕಾಲ್ರಾ (Manjot Kalra) ಅವರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದದ್ದು ಹೇಗೆ?
ಶ್ರೀಲಂಕಾದ ಕ್ರೀಡಾ ಸಂಬಂಧಿತ ಅಪರಾಧ ತನಿಖಾ ದಳ (SIU) ಕೊಲಂಬೋದ ಪ್ರತಿಷ್ಠಿತ ಹೋಟೆಲೊಂದರಲ್ಲಿ ಕಾರ್ಯಾಚರಣೆ ನಡೆಸಿ ಮಂಜೋತ್ ಕಾಲ್ರಾನನ್ನು ಬಂಧಿಸಿದೆ. ಸ್ಥಳೀಯ ಆಟಗಾರನಿಗೆ ಮ್ಯಾಚ್ ಫಿಕ್ಸಿಂಗ್ಗಾಗಿ 95 ಲಕ್ಷ ಶ್ರೀಲಂಕಾ ರೂಪಾಯಿ (ಸುಮಾರು 27.7 ಲಕ್ಷ ಭಾರತೀಯ ರೂಪಾಯಿ) ಲಂಚದ ಹಣವನ್ನು ನೀಡುವ ವೇಳೆ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. 10 ದಿನಗಳ ಹಿಂದೆಯೇ ಮಂಜೋತ್ ತನ್ನನ್ನು ಸಂಪರ್ಕಿಸಿದ್ದಾಗಿ ಲಂಕಾ ಆಟಗಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪಕ್ಕಾ ಸ್ಕೆಚ್ ಹಾಕಿ ಹಣ ನೀಡುವಾಗಲೇ ದಾಳಿ ಮಾಡಿದ್ದಾರೆ.
ಏತನ್ಮಧ್ಯೆ ಮಂಜೋತ್ ಕಾಲ್ರಾ ಪ್ರಸಕ್ತ ಸಾಲಿನ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಜಾಫ್ನಾ ಕಿಂಗ್ಸ್ ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದರು. ಈತನೊಂದಿಗೆ ಯುವರಾಜ್ ಪುಷ್ಪ ಎಂಬ ಮತ್ತೊಬ್ಬ ಭಾರತೀಯ ಪ್ರಜೆಯನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ನ್ಯಾಯಾಲಯವು ಮಂಜೋತ್ ಕಾಲ್ರಾನನ್ನು ಜುಲೈ 31 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಂಡರ್-19 ವಿಶ್ವಕಪ್ನ ಹೀರೊ ಈ ಕಾಲ್ರಾ
ಪೃಥ್ವಿ ಶಾ ನೇತೃತ್ವದ ಭಾರತ ತಂಡ 2018 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದಾಗ ಮಂಜೋತ್ ಕಾಲ್ರಾ ಆ ತಂಡದ ಪ್ರಮುಖ ಆಟಗಾರನಾಗಿದ್ದರು. ಅದ್ರಂತೆ, ಅಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಕಾಲ್ರಾ ಅಜೇಯ 101 ರನ್ ಗಳಿಸಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಹೀರೊ ಎನಿಸಿಕೊಂಡಿದ್ದರು. ಆ ತಂಡದಲ್ಲಿ ಶುಭ್ಮನ್ ಗಿಲ್ ಮತ್ತು ಅರ್ಶ್ದೀಪ್ ಸಿಂಗ್ ಅವರಂತಹ ಇಂದಿನ ಸ್ಟಾರ್ ಆಟಗಾರರು ಈತನ ಸಹ ಆಟಗಾರರಾಗಿದ್ದರು.