ಅಹಮದಾಬಾದ್: ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026 ರ ಐಪಿಎಲ್ ಫೈನಲ್ನಲ್ಲಿ ಗುಜರಾತ್ ನ್ನು ಸೋಲಿಸಿ ಪ್ರಶಸ್ತಿ ಗೆದ್ದ ನಂತರ ಆರ್ ಸಿಬಿ ತಂಡದ ಬೌಲಿಂಗ್ ನ್ನು ದೇವದತ್ ಪಡಿಕ್ಕಲ್ ಶ್ಲಾಘಿಸಿದ್ದಾರೆ.
ಸತತ ಎರಡನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವುದರಲ್ಲಿ ಆರ್ ಸಿಬಿಯ ಬೌಲಿಂಗ್ ಪ್ರಮುಖ ಕಾರಣವಾಗಿದೆ. ಏಕೆಂದರೆ ಅವರು ಟೂರ್ನಿಯುದ್ಧಕ್ಕೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ಭುವನೇಶ್ವರ್ 28 ವಿಕೆಟ್ ಪಡೆದರೆ, ರಸಿಕ್ ಸಲಾಂ ದಾರ್ 19 ವಿಕೆಟ್, ಆಸೀಸ್ ವೇಗಿ ಜೋಶ್ ಹ್ಯಾಜಲ್ವುಡ್ 15 ವಿಕೆಟ್, ಕೃನಾಲ್ ಪಾಂಡ್ಯ 14 ವಿಕೆಟ್ ಗಳಿಸಿದ್ದಾರೆ.
ಐಪಿಎಲ್ 2026 ರ ಫೈನಲ್ನಲ್ಲಿ ಆರ್ಸಿಬಿ ಬೌಲರ್ ಗಳು ಗುಜರಾತ್ ತಂಡವನ್ನು 155 ರನ್ ಗಳಿಗೆ ಕಟ್ಟಿಹಾಕುವ ಮೂಲಕ ಮತ್ತೊಂದು ಶಿಸ್ತುಬದ್ಧ ಪ್ರದರ್ಶನ ನೀಡಿದರು. ರಸಿಕ್ ಸಲಾಂ ದಾರ್ 3, ಭುವನೇಶ್ವರ ಕುಮಾರ್ 2 ಹಾಗೂ ಜೋಶ್ ಹ್ಯಾಜಲ್ವುಡ್ 2 ವಿಕೆಟ್ ಕಬಳಿಸಿದರೆ, ಕೃನಾಲ್ ಪಾಂಡ್ಯ ಕೂಡ ಒಂದು ವಿಕೆಟ್ ಪಡೆದರು. ಬಳಿಕ ಆರ್ ಸಿಬಿ ಇನ್ನೂ ಐದು ವಿಕೆಟ್ ಬಾಕಿಯಿರುವಂತೆಯೇ 18 ಓವರ್ಗಳಲ್ಲಿಯೇ ಗೆಲುವಿನ ನಗೆ ಬೀರಿತು.
ಫೈನಲ್ ಪಂದ್ಯದ ಬಳಿಕ ಆರ್ಸಿಬಿ ತಂಡದ ಬೌಲಿಂಗ್ ಬಗ್ಗೆ ಮಾತನಾಡಿದ ದೇವದತ್ ಪಡಿಕ್ಕಲ್, ಇಡೀ ಬೌಲಿಂಗ್ ವಿಭಾಗವನ್ನು ಶ್ಲಾಘಿಸಿದರು, ನಿಜಕ್ಕೂ ನಂಬಲಿಕ್ಕೆ ಆಗುತ್ತಿಲ್ಲ. ಅಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದಾರೆ. ಅವರ ಬೌಲಿಂಗ್ ಯೋಜನೆ ಅತ್ಯಂತ ಕರಾರುವಕ್ಕಾಗಿತ್ತು. ಕೆಲವು ಸಭೆಗಳಲ್ಲಿ ನಾನು ಕೂಡಾ ಪಾಲ್ಗೊಂಡಿದ್ದೆ. ಅವರು ಅತ್ಯಂತ ಸೂಕ್ಷ್ಮವಾಗಿರುತ್ತಿದ್ದರು ಎಂದು ಹೇಳಿದರು.
ಆರ್ಸಿಬಿ ತಂಡದ ಚೇಸ್ ನಲ್ಲಿ 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿದ ವಿರಾಟ್ ಕೊಹ್ಲಿ ಬಗ್ಗೆ ಪಡಿಕ್ಕಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಫೈನಲ್ನಲ್ಲಿ ಕೊಹ್ಲಿ ಕ್ರೀಸ್ನಲ್ಲಿರುವವರೆಗೆ, ಅವರ ಅನುಭವ ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯದಿಂದಾಗಿ ಯಾವುದೇ ಆತಂಕವಿರಲಿಲ್ಲ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಕೊಹ್ಲಿಯ ನಿರಂತರ ಪ್ರದರ್ಶನ ಮತ್ತು ಸುಧಾರಣೆಯನ್ನು ಅವರು ಹೊಗಳಿದರು. ಪ್ರತಿ ವಿಕೆಟ್ ಬಿದ್ದಾಗ, ವೆಂಕಿಗೆ ನಾನು ಹೇಳುತ್ತಿದ್ದೆ, ಅವರು [ಕೊಹ್ಲಿ] ಇರುವವರೆಗೆ ಭಯ ಪಡಬೇಕಾದ ಅಗತ್ಯವಿಲ್ಲ. ಅವರು ಇತ್ತೀಚಿನ ವರ್ಷಗಳಲ್ಲಿ ನಿರಂತರ ಪ್ರದರ್ಶನ ಹಾಗೂ ಸುಧಾರಣೆ ಕಂಡಿರುವುದಾಗಿ ಹೇಳುತ್ತಿದೆ ಎಂದರು.
ಜೀತೇಶ್ ಶರ್ಮಾ ಮಾತನಾಡಿ, ಪಂದ್ಯ ಗೆಲುವಿನಲ್ಲಿ ಪೂರಕ ವಾತಾವರಣ ನಿರ್ಮಿಸಿದ್ದಕ್ಕೆ ನಾಯಕತ್ವ ಮತ್ತು ಸಹಾಯಕ ಸಿಬ್ಬಂದಿಗೆ ಕ್ರೇಡಿಟ್ ನೀಡಿದರು.