ರಾಜಸ್ಥಾನ್ ರಾಯಲ್ಸ್ (RR) ತಂಡವು ಗುಜರಾತ್ ಟೈಟಾನ್ಸ್ (GT) ವಿರುದ್ಧದ ಕ್ವಾಲಿಫೈಯರ್ 2ನಲ್ಲಿ ಸೋಲು ಕಾಣುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಅಭಿಯಾನವನ್ನು ಕೊನೆಗೊಳಿಸಿತು. ವೈಭವ್ ಸೂರ್ಯವಂಶಿ ಅವರ 96 ರನ್ಗಳ ಅದ್ಭುತ ಬ್ಯಾಟಿಂಗ್ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಅನುಭವಿಸಿತು. 215 ರನ್ ಗುರಿ ಬೆನ್ನಟ್ಟಿದ ಜಿಟಿ ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿತು. ಕೊನೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಸುಮಾರು 15-20 ರನ್ಗಳ ಕೊರತೆಯನ್ನು ಅನುಭವಿಸುತ್ತಿರುವಂತೆ ತೋರುತ್ತಿತ್ತು ಮತ್ತು ವೈಭವ್ ಸೂರ್ಯವಂಶಿ ಇದಕ್ಕೆ ತಾನೇ ಹೊಣೆ ಎಂದರು.
ಐಪಿಎಲ್ 2026ರ ಫೈನಲ್ ಪಂದ್ಯದ ನಂತರ ಪ್ರಸಾರಕರೊಂದಿಗೆ ಮಾತನಾಡಿದ 15 ವರ್ಷದ ಬಾಲಕ, ಗುಜರಾತ್ ಟೈಟಾನ್ಸ್ ವಿರುದ್ಧದ ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ತಾನು ಮಧ್ಯಮ ಓವರ್ಗಳಲ್ಲಿ ಹೆಚ್ಚು ಹೊತ್ತು ಸ್ಟ್ರೈಕ್ನಲ್ಲಿ ಆಡಬೇಕಿತ್ತು ಎಂದು ಒಪ್ಪಿಕೊಂಡರು.
'ಕಳೆದ ಪಂದ್ಯದಿಂದ ಕಲಿಯಲು ಬಹಳಷ್ಟಿತ್ತು. ಉದಾಹರಣೆಗೆ, ನಾವು ಸುಮಾರು 10-12 ರನ್ಗಳ ಕೊರತೆಯಿಂದ ಸೋತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದರೆ, ಮಧ್ಯಮ ಓವರ್ಗಳಲ್ಲಿ ನಾನು ಸ್ಟ್ರೈಕ್ ರೊಟೇಟ್ ಕಡಿಮೆ ಮಾಡಿ ಹೆಚ್ಚಿನ ಸ್ಟ್ರೈಕ್ ಅನ್ನು ನಾನೇ ಇಟ್ಟುಕೊಳ್ಳಬೇಕಾಗಿತ್ತು. ಏಕೆಂದರೆ, ಅದು ಹೊಸ ಬ್ಯಾಟ್ಸ್ಮನ್ಗಳಿಗೆ ಸ್ವಲ್ಪ ಕಠಿಣವಾಗುತ್ತಿತ್ತು' ಎಂದು ಅವರು ಹೇಳಿದರು.
'ಆ ಸಮಯದಲ್ಲಿ ವಿಕೆಟ್ ಚೆನ್ನಾಗಿರಲಿಲ್ಲ, ಅದು ಸ್ಟಿಕ್ಕಿ ಆಗಿತ್ತು. ಹಾಗಾಗಿ ಆ ಸಮಯದಲ್ಲಿ ಹೊಸ ಬ್ಯಾಟ್ಸ್ಮನ್ಗಳು ಹೆಚ್ಚು ಸ್ಟ್ರೈಕ್ಗೆ ಬರುತ್ತಿದ್ದರು. ಆಗ ನಾನು ತಪ್ಪು ಮಾಡಿದೆ ಎಂದು ನಾನು ಭಾವಿಸುತ್ತೇನೆ. ಆ ಸಮಯದಲ್ಲಿ ನಾನು ಹೆಚ್ಚು ಸ್ಟ್ರೈಕ್ನಲ್ಲಿ ಇರಬೇಕಿತ್ತು' ಎಂದು ಹೇಳಿದರು.
ಬಿಹಾರದಲ್ಲಿ ಜನಿಸಿದ ವೈಭವ್, ಈ ವರ್ಷ ಪಂದ್ಯಾವಳಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದರು. 237.30ರ ಅಸಾಧಾರಣ ಸ್ಟ್ರೈಕ್ ರೇಟ್ನಲ್ಲಿ 776 ರನ್ಗಳೊಂದಿಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಸ್ಥಾನ ಪಡೆದರು.