ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಹದಿನೈದು ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ "ನಿಜವಾಗಿಯೂ ವಿಶೇಷ" ಪ್ರತಿಭೆ ಎಂದು ಶ್ಲಾಘಿಸಿದ ಬಳಿಕ ವಿರಾಟ್ ಕೊಹ್ಲಿ ಅವರಿಂದಲೂ ವಿಶೇಷ ಮೆಚ್ಚುಗೆ ಪಡೆದಿದ್ದಾರೆ.
ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡಲು ಇಷ್ಟಪಡುವುದಾಗಿ ಹೇಳಿರುವ ಸಚಿನ್ ತೆಂಡೂಲ್ಕರ್, ಆದಾಗ್ಯೂ, ಟೆಸ್ಟ್ ಮಾದರಿಯ ಕ್ರಿಕೆಟ್ ಆಡುವಂತೆ ವೈಭವ್ ಸೂರ್ಯವಂಶಿಯನ್ನು ಒತ್ತಾಯಪಡಿಸಬಾರದು ಎಂದು ಹೇಳಿದ್ದಾರೆ.
ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸುವ ಮೂಲಕ ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ಅನ್ನು ಗೆದ್ದುಕೊಂಡಿತು.
ಫೈನಲ್ ಪಂದ್ಯವನ್ನು 15 ವರ್ಷದ ಯುವಕ ವೈಭವ್ ಸೂರ್ಯವಂಶಿ ವೀಕ್ಷಿಸಿದರು. ಈ ಟೂರ್ನಿಯಲ್ಲಿ 776 ರನ್ಗಳೊಂದಿಗೆ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಹೊಸ ಕೇಶವಿನ್ಯಾಸವನ್ನು ಹೊಂದಿದ್ದ ಸೂರ್ಯವಂಶಿ, ಐಸಿಸಿ ಅಧ್ಯಕ್ಷ ಜಯ್ ಶಾ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರೊಂದಿಗೆ ಸ್ಟ್ಯಾಂಡ್ಗಳಲ್ಲಿ ಕುಳಿತಿರುವುದು ಕಂಡುಬಂದಿತು. ಪಂದ್ಯದ ನಂತರ ವಿರಾಟ್ ಕೊಹ್ಲಿ ಬಳಿ ತೆರಳಿ ಮಾತುಕತೆ ನಡೆಸಿದ್ದಾರೆ.
ಕೊಹ್ಲಿ ಸೂರ್ಯವಂಶಿಯವರ ಭುಜದ ಮೇಲೆ ಕೈ ಇಡುವುದು ತ್ತು ಇಬ್ಬರೂ ಪರಸ್ಪರ ಒಂದೆರಡು ನಿಮಿಷಗಳ ಕಾಲ ಮಾತನಾಡುವುದನ್ನು ಕ್ಯಾಮೆರಾಗಳು ಸೆರೆಹಿಡಿದಿವೆ. ಯಾವುದರ ಬಗ್ಗೆ ಮಾತುಕತೆ ನಡೆಯಿತು ಎಂಬುದು ದೃಢಪಟ್ಟಿಲ್ಲ. ಕೊಹ್ಲಿ ಈ ಹಿಂದೆ ಅವರ ಬ್ಯಾಟಿಂಗ್ ತಂತ್ರವನ್ನು ಸಹ ಹೊಗಳಿದ್ದರು.