ನವದೆಹಲಿ: ಐರ್ಲೆಂಡ್, ಇಂಗ್ಲೆಂಡ್ ಮತ್ತು ಏಷ್ಯನ್ ಗೇಮ್ಸ್ ಗೆ ಭಾರತದ ಟಿ-20 ತಂಡವನ್ನು ಪ್ರಕಟಿಸಲಾಗಿದೆ. 2026ರಲ್ಲಿ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ಮಾತ್ರವಲ್ಲ ತಂಡದಿಂದಲೂ ಗೇಟ್ ಪಾಸ್ ನೀಡಲಾಗಿದೆ.
ಡಿಸೆಂಬರ್ 2023 ರಲ್ಲಿ ಭಾರತದ ಪರ ಕೊನೆಯ ಟಿ20 ಆಡಿದ್ದ ಶ್ರೇಯಸ್ ಅಯ್ಯರ್ ಅವರನ್ನು ಐರ್ಲೆಂಡ್ನಲ್ಲಿ ನಡೆಯಲಿರುವ ಎರಡು ಪಂದ್ಯಗಳು, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳು ಮತ್ತು ಸೆಪ್ಟೆಂಬರ್- ಅಕ್ಟೋಬರ್ನಲ್ಲಿ ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಹೊಸ ನಾಯಕರನ್ನಾಗಿ ನೇಮಿಸಲಾಗಿದೆ.
ಸೂರ್ಯ ಕುಮಾರ್ ಯಾದವ್ ವಿಶ್ವಕಪ್ ಮತ್ತು ಐಪಿಎಲ್ನಲ್ಲಿ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ ನಂತರ ನಾಯಕತ್ವದ ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು. ವಿಶ್ವಕಪ್ನಲ್ಲಿ ಅವರು ಒಂಬತ್ತು ಇನ್ನಿಂಗ್ಸ್ಗಳಲ್ಲಿ ಕೇವಲ 242 ರನ್ ಗಳಿಸಿದರು. ಯುನೈಟೆಡ್ ಸ್ಟೇಟ್ಸ್ ವಿರುದ್ಧ ಅವರ ಅಜೇಯ 84 ರನ್ ಮಾತ್ರ ಕಲೆಹಾಕಿದ್ದರು.
ನಾಯಕತ್ವದಿಂದ ಗೇಟ್ ಪಾಸ್ ಬಳಿಕ ಸೂರ್ಯಕುಮಾರ್ ಯಾದವ್ ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್ ಹಾಕಿದ್ದಾರೆ. ಟೀಂ ಇಂಡಿಯಾ ಹೊಸ ತಂಡದ ಪೋಸ್ಟರ್ ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಬಳಿಕ ಸವಾಲು ಎದುರಿಸಲು ಹೊರಟ ತಂಡಕ್ಕೆ ಶುಭಕೋರಿದ್ದಾರೆ.
ಪ್ರತಿಭಾನ್ವಿತ ತಂಡಕ್ಕೆ ಶುಭಾಶಯಗಳು. ಮುಂಬರುವ ಸವಾಲು ಎದುರಿಸಲು ಆಲ್ ದಿ ಬೆಸ್ಟ್ ಎಂದು ಸೂರ್ಯಕುಮಾರ್ ಯಾದವಾ ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಹೇಳಿದ್ದಾರೆ. ಈ ಮೂಲಕ ತಂಡದಿಂದ ಹೊರಬಿದ್ದರೂ ತಂಡಕ್ಕೆ ಸೂರ್ಯಕುಮಾರ್ ಯಾದವ್ ಶುಭಕೋರಿ ಪಾಸಿಟೀವ್ ಆಗಿ ತೆಗೆದುಕೊಂಡಿದ್ದಾರೆ.
ಮತ್ತೊಂದು ಪ್ರತ್ಯೇಕ ಪೋಸ್ಟ್ ನಲ್ಲಿ ಟೀಂ ಇಂಡಿಯಾ ಟಿ20 ತಂಡಕ್ಕೆ ಆಯ್ಕೆಯಾಗಿರುವ 15ರ ಬಾಲಕ ವೈಭವ್ ಸೂರ್ಯವಂಶಿ ಕುರಿತು ಪೋಸ್ಟ್ ಮಾಡಿದ್ದಾರೆ. ಈ ಸ್ಥಾನವನ್ನು ನೀವು ಗಳಿಸಿದ್ದೀರಿ. ನಿಮ್ಮ ಅದ್ಭುತ ಪಯಣ ನೋಡಲು ಕಾತರನಾಗಿದ್ದೇನೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.