ಢಾಕಾ: ಟಿ20 ವಿಶ್ವಕಪ್ 2026ಕ್ಕೂ ಮುನ್ನ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿದ್ದ ವಿವಾದದ ಬಗ್ಗೆ ಬಾಂಗ್ಲಾದೇಶದ ಟಿ20 ತಂಡದ ನಾಯಕ ಲಿಟ್ಟನ್ ದಾಸ್ ಮತ್ತೊಮ್ಮೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಭದ್ರತಾ ಸಮಸ್ಯೆ ಇದೆ ಎಂಬ ಕಾರಣ ನೀಡಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಟೂರ್ನಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿತ್ತು. ಆದರೆ ಆಟಗಾರರನ್ನು ಈ ಕುರಿತು ಯಾವುದೇ ಚರ್ಚೆಯಲ್ಲಿ ಭಾಗಿಯಾಗಿಸಲಿಲ್ಲ ಎಂದು ಲಿಟ್ಟನ್ ದಾಸ್ ಹೇಳಿದ್ದಾರೆ.
ಈ ಹಿಂದೆ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಬೇಕಿದ್ದ ಬಾಂಗ್ಲಾದೇಶ ತಂಡ ಭದ್ರತಾ ಕಾರಣ ನೀಡಿ ಹಿಂದೆ ಸರಿದಿತ್ತು. ಐಸಿಸಿ ಮತ್ತು ಬಿಸಿಸಿಐ ಹಲವು ಬಾರಿ ಭದ್ರತೆ ಕುರಿತು ಭರವಸೆ ನೀಡಿದರೂ ಬಾಂಗ್ಲಾದೇಶ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅಂತಿಮವಾಗಿ ತಂಡ ಟೂರ್ನಿಯಲ್ಲಿ ಭಾಗವಹಿಸದೇ ಇದ್ದು, ಅದರ ಸ್ಥಾನದಲ್ಲಿ ಸ್ಕಾಟ್ಲೆಂಡ್ ಆಡಿತ್ತು.
ಆದರೀಗ ಟೂರ್ನಿ ಮುಕ್ತಾಯವಾಗಿ 4 ತಿಂಗಳ ಬಳಿಕ ಇದೇ ವಿಚಾರವಾಗಿ ಬಾಂಗ್ಲಾದೇಶ ತಂಡದ ನಾಯಕ ಲಿಟ್ಟನ್ ದಾಸ್ ಮಹತ್ವದ ಹೇಳಿಕೆ ನೀಡಿದ್ದಾರೆ.
ರೂಂ ಹೊರಗೆ ಬಂದೂಕು ಹಿಡಿದು ನಿಂತಿದ್ದರು.. ಅಲ್ಲೇ ಆಡಿದ್ದೀವಿ
ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ಪ್ರೊಥೊಮ್ ಆಲೋಗೆ ನೀಡಿದ ಸಂದರ್ಶನದಲ್ಲಿ ಲಿಟ್ಟನ್ ದಾಸ್ ಮಾತನಾಡಿದ್ದು, ಪಾಕಿಸ್ತಾನದಲ್ಲಿ ನಮ್ಮ ಕೊಠಡಿಯ ಹೊರಗೆ ಬಂದೂಕು ಹಿಡಿದು ನಿಂತಿದ್ದರು. ಅಂತಹ ಪರಿಸ್ಥಿತಿಯಲ್ಲೇ ಆಡಿದ್ದೇವೆ. ಹಾಗಿದ್ದರೆ ಭಾರತದಲ್ಲಿ ಆಡಲು ಏನು ಸಮಸ್ಯೆ? ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು ಪ್ರಶ್ನಿಸಿದ್ದಾಗಿ ಲಿಟ್ಟನ್ ದಾಸ್ ಹೇಳಿದ್ದಾರೆ.
'ಆಟಗಾರರಾಗಿ ತಾವು ವಿಶ್ವಕಪ್ನಲ್ಲಿ ಆಡಲು ಬಯಸಿದ್ದೆವು, ಆದರೆ ಅಂತಿಮ ನಿರ್ಧಾರವನ್ನು ಬಿಸಿಬಿ ಆಡಳಿತವೇ ತೆಗೆದುಕೊಂಡಿತು. ನಮ್ಮನ್ನು ಬಿಸಿಬಿಯ ಹಿರಿಯ ಅಧಿಕಾರಿಗಳ ಸಭೆಗೆ ಕರೆದಿದ್ದರು. ನಾವು ಅಲ್ಲಿಗೆ ಚಹಾ ಕುಡಿಯಲು ಹೋಗಿದ್ದೇವೆ ಎನ್ನುವ ಮನಸ್ಥಿತಿಯಲ್ಲಿದ್ದೆವು.
ಏರ್ಕಂಡೀಷನ್ ಕೊಠಡಿಯಲ್ಲಿ ಕುಳಿತು ಚಹಾ ಕುಡಿಯೋಣ ಎಂದುಕೊಂಡಿದ್ದೆವು. ಅಲ್ಲಿ ನಮ್ಮ ಅಭಿಪ್ರಾಯ ಕೇಳಿದರು. ಆಟಗಾರರಾದ ನಾವು ಏನು ಹೇಳುತ್ತೇವೆ? ನಮಗೆ ಯಾವುದೇ ಜಗಳ ಬೇಡ, ನಾವು ಸಹಜವಾಗಿಯೇ ಆಡಲು ಬಯಸುತ್ತೇವೆ," ಎಂದು ಹೇಳಿದ್ದಾಗಿ ಲಿಟ್ಟನ್ ದಾಸ್ ಹೇಳಿದರು.
ಭದ್ರತೆ ಇಲ್ಲ ಎಂದ ಅಧಿಕಾರಿಗಳು
ಈ ವೇಳೆ "ಅವರು ನಮಗೆ ಆ ದೇಶದಲ್ಲಿ (ಭಾರತದಲ್ಲಿ) ಭದ್ರತೆ ಇಲ್ಲ ಎಂದು ಹೇಳಿದರು. ಅದಕ್ಕೆ ನಾವು, ನಾವು ಪಾಕಿಸ್ತಾನದಲ್ಲೂ ಆಡಿದ್ದೇವೆ ಎಂದು ತಿಳಿಸಿದ್ದೆವು. ಅಲ್ಲಿ ನಮ್ಮ ಕೊಠಡಿಯ ಹೊರಗೆ ಬಂದೂಕು ಹಿಡಿದು ಭದ್ರತಾ ಸಿಬ್ಬಂದಿ ನಿಂತಿರುತ್ತಿದ್ದರು. ಅದಕ್ಕಿಂತ ಅಪಾಯಕಾರಿ ಪರಿಸ್ಥಿತಿ ಇನ್ನೇನು ಇರಬಹುದು? ನಾವು ಪಾಕಿಸ್ತಾನದಲ್ಲಿ ಆಡಲು ಸಾಧ್ಯವಾದರೆ ಭಾರತದಲ್ಲಿ ಏಕೆ ಆಡಬಾರದು?" ಎಂದು ಪ್ರಶ್ನಿಸಿದ್ದಾಗಿ ಲಿಟ್ಟನ್ ದಾಸ್ ಹೇಳಿದ್ದಾರೆ.
ಹಿಂಸಾಚಾರ ಕುರಿತು ಉತ್ತರಿಸಲ್ಲ
ಇದಕ್ಕೂ ಮೊದಲು, ಜನವರಿಯಲ್ಲಿ ಈ ವಿವಾದ ಭುಗಿಲೆದ್ದಾಗ ಲಿಟ್ಟನ್ ದಾಸ್ ಈ ವಿಚಾರದಲ್ಲಿ ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿದ್ದರು.
"ನಾವು ವಿಶ್ವಕಪ್ ಆಡಲಿದ್ದೇವೆಯೇ ಎಂಬುದೇ ಖಚಿತವಿಲ್ಲ. ನನ್ನ ದೃಷ್ಟಿಯಿಂದ ನಾನು ಅನಿಶ್ಚಿತತೆಯಲ್ಲಿದ್ದೇನೆ. ಎಲ್ಲರೂ ಅನಿಶ್ಚಿತತೆಯಲ್ಲಿದ್ದಾರೆ. ಈ ಕ್ಷಣದಲ್ಲಿ ಇಡೀ ಬಾಂಗ್ಲಾದೇಶವೇ ಗೊಂದಲದಲ್ಲಿದೆ ಎಂದು ನನಗೆ ಅನಿಸುತ್ತದೆ. ನೀವು ಯಾವ ಪ್ರಶ್ನೆ ಕೇಳಲಿದ್ದೀರಿ ಎಂಬುದು ನನಗೆ ಗೊತ್ತಿದೆ. ಆದರೆ ಅದಕ್ಕೆ ಉತ್ತರಿಸುವುದು ನನಗೆ ಸುರಕ್ಷಿತವಲ್ಲ. ಹಾಗಾಗಿ ಯಾವುದೇ ಉತ್ತರ ಇಲ್ಲ," ಎಂದು ಆಗ ಅವರು ಹೇಳಿದ್ದರು.