ವೃತ್ತಿಪರ ಕ್ರಿಕೆಟ್ ಆಡುವಾಗ ಮಹಿಳಾ ಕ್ರೀಡಾಪಟುಗಳು ಎದುರಿಸುವ ಕಠಿಣ ಸವಾಲುಗಳ ಬಗ್ಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ಮುಟ್ಟಿನ ದಿನಗಳಲ್ಲಿ ತೀವ್ರ ಹೊಟ್ಟೆನೋವು, ಸುಸ್ತು ಹಾಗೂ ದೈಹಿಕ ಅಸ್ವಸ್ಥತೆ ಇದ್ದರೂ ದೇಶಕ್ಕಾಗಿ ಆಡಬೇಕಾಗುತ್ತದೆ ಎಂದು ಸ್ಮೃತಿ ಮಂಧಾನ ಅವರು ICC ಮಹಿಳಾ ಟಿ20 ವಿಶ್ವಕಪ್ 2026ಕ್ಕೂ ಮುನ್ನ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿದ್ದಾರೆ.
ಟೆಸ್ಟ್ ಪಂದ್ಯಗಳಲ್ಲಿ ಬಿಳಿ ಜರ್ಸಿ ಧರಿಸುವ ವೇಳೆ ಮುಟ್ಟಿನಿಂದ ಕಲೆಗಳಾಗುವ ಭಯವೂ ಮಾನಸಿಕ ಒತ್ತಡ ಉಂಟುಮಾಡುತ್ತದೆ ಎಂದು ಮಂಧಾನ ಹೇಳಿದ್ದಾರೆ.
ಒಮ್ಮೆ ಟೆಸ್ಟ್ ಪಂದ್ಯದ ವೇಳೆ ಪ್ಯಾಡ್ ಬದಲಾಯಿಸಲು ಅಂಪೈರ್ ಅನುಮತಿಯೊಂದಿಗೆ ಮೈದಾನ ತೊರೆಯಬೇಕಾದ ಅನುಭವವನ್ನೂ ಮಂಧಾನ ಹಂಚಿಕೊಂಡಿದ್ದು, ಪಂದ್ಯದ ಮಧ್ಯದಲ್ಲಿ ತಮಗೆ ಪೀರಿಯಡ್ಸ್ ಆಯಿತು, ಹಾಗಾಗಿ ಸ್ಯಾನಿಟರಿ ಪ್ಯಾಡ್ ಬದಲಾಯಿಸಲು ಅಂಪೈರ್ ಬಳಿ ಅನುಮತಿ ಕೇಳಿ ಮೈದಾನದಿಂದ ಹೊರಗೆ ಹೋಗಬೇಕಾಯಿತು ಎಂದಿದ್ದಾರೆ.
ಇಂದಿನ ದಿನಗಳಲ್ಲಿ ತಂಡದ ವೈದ್ಯರು, ಫಿಸಿಯೋಗಳು ಹಾಗೂ ಪೌಷ್ಟಿಕ ತಜ್ಞರು ಉತ್ತಮ ಬೆಂಬಲ ನೀಡುತ್ತಿರುವುದರಿಂದ ಪರಿಸ್ಥಿತಿ ಸುಧಾರಿಸಿದೆ ಎಂದು ಮಂಧಾನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ಕ್ರೀಡಾಪಟುಗಳ ಮುಟ್ಟಿನ ದಿನಗಳ ಸವಾಲುಗಳ ಬಗ್ಗೆ ಈಗ ಮುಕ್ತ ಚರ್ಚೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಹ ಅವರು ಅಭಿಪ್ರಾಯಪಟ್ಟಿದ್ದಾರೆ.
ವೃತ್ತಿಪರ ಕ್ರೀಡೆಯಲ್ಲಿ ಮುಟ್ಟಿನ ಬಗ್ಗೆ ಮುಕ್ತವಾಗಿ ಮಾತನಾಡುವ ಅವರ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕ್ರೀಡೆಯಲ್ಲಿ ಮುಂದುವರಿಯಲು ಬಯಸುವ ಯುವತಿಯರಿಗೆ, ವಿಶ್ವದ ಪ್ರಮುಖ ಆಟಗಾರ್ತಿಯೊಬ್ಬರಿಂದ ಇಂತಹ ಮಾತುಗಳು ಧೈರ್ಯ ಮತ್ತು ಸ್ಫೂರ್ತಿ ನೀಡುತ್ತವೆ.