ಬೆಂಗಳೂರು: IPL 2026ರಲ್ಲಿ ಸ್ಫೋಟಕ ಬ್ಯಾಟಿಂಗ್ ನಿಂದ ಭಾರೀ ಸದ್ದು ಮಾಡಿದ ಹದಿನೈದು ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಒಬ್ಬ ಅಪರೂಪದ ಆಟಗಾರ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಶ್ಲಾಘಿಸಿದ್ದಾರೆ.
ಹದಿಹರೆಯದ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿಯನ್ನು ರಾಹುಲ್ ದ್ರಾವಿಡ್ ಕನ್ನಡದಲ್ಲಿಯೇ ಹಾಡಿ ಹೊಗಳಿದರು. ಸೂರ್ಯವಂಶಿಯ ಸಾಧನೆಯನ್ನು ಎತ್ತಿ ತೋರಿಸಿದ ದ್ರಾವಿಡ್, ಆತ ಅಪರೂಪದ ಪ್ರತಿಭೆ ಎಂದು ಬಣ್ಣಿಸಿದರು. ಆದರೆ ಇತರ ಯುವ ಆಟಗಾರರಿಗೆ ವೈಭವ್ ಸೂರ್ಯವಂಶಿಯನ್ನು ಹೋಲಿಸಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ಮಹಾರಾಜ ಟ್ರೋಫಿ ಕೆಎಸ್ಸಿಎ T-20 ಟೂರ್ನಿಯ ಐದನೇ ಆವೃತ್ತಿ ಜೂನ್ 20 ರಿಂದ ಆರಂಭವಾಗಲಿದ್ದು, ಅದರ ಟ್ರೋಫಿಯನ್ನು ಗುರುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನಾವರಣಗೊಳಿಸಲಾಯಿತು.
ಮಹಾರಾಜ ಟ್ರೋಫಿ ಅನಾವರಣಗೊಳಿಸಿ ಮತನಾಡಿದಗ ರಾಹುಲ್ ಡ್ರಾವಿಡ್ ಅವರು, ಮಹಾರಾಜ ಟೂರ್ನಿಯು ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ನಡೆಯುತ್ತಿರುವುದು ಸಂತಸ ವಿಚಾರವಾಗಿದೆ. ಇದರಿಂದ ರಾಜ್ಯದ ಹೊಸ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಲಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ಐಪಿಎಲ್ನಲ್ಲಿ ಆಡುವ ಅವಕಾಶ ಸಿಗಬಹುದು ಎಂದರು.
ಸ್ಥಳೀಯ ಲೀಗ್ನಲ್ಲಿ ಗಮನ ಸೆಳೆದಿದ್ದ ರಾಜ್ಯದ ಯಶ್ ರಾಜ್ ಪೂಂಜಾ ಐಪಿಎಲ್ನಲ್ಲಿ ಮಿಂಚಿರುವುದನ್ನು ಇದೇ ವೇಳೆ ಸ್ಮರಿಸಿದರು. ಮಹಾರಾಜ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ಆಟಗಾರರು ಸಿಕ್ಕ ಅವಕಾಶವನ್ನ ಬಳಸಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ವೈಭವ್ ಸೂರ್ಯವಂಶಿಯಂಥಾ ಕ್ರಿಕೆಟಿಗ ಕರ್ನಾಟಕದಲ್ಲೂ ಸಿಗಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಡ್ರಾವಿಡ್, ವೈಭವ್ ಸೂರ್ಯವಂಶಿ ಒಬ್ಬ ವಿಶಿಷ್ಠ, ಅಪರೂಪದ ಆಟಗಾರ. ಸಚಿನ್ ತೆಂಡೂಲ್ಕರ್ ಆದ ಮೇಲೆ 15ನೇ ವಯಸ್ಸಿಗೆ ಇಂಥಾ ಒಬ್ಬ ಆಟಗಾರ ಸಿಗಲು 40 ವರ್ಷ ಬೇಕಾಯ್ತು. 40 ವರ್ಷ ಆದ್ಮೇಲೆ ಇನ್ನೊಬ್ಬ ವೈಭವ್ ಸೂರ್ಯವಂಶಿ ಬಂದಿದ್ದಾನೆ. ನಮ್ ಹುಡುಗರು ಸಹ ಚೆನ್ನಾಗಿ ಆಡುತ್ತಾರೆ. ಆಡಬೇಕು ಕೂಡಾ. ವೈಭವ್ ಒಂಥರಾ ಯೂನಿಕ್ ಪ್ಲೇಯರ್ ಚೆನ್ನಾಗಿ ಆಡುತ್ತಿದ್ದಾನೆ. ಅದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಬೇಕು. ಅವ್ನು ಸ್ಪೆಷಲ್ ಟ್ಯಾಲೆಂಟ್ ಹೊಂದಿದ್ದಾನೆ. ಮುಂದೆಯೂ ಅವನು ಅದೇ ಪರ್ಫಾಮೆನ್ಸ್ ತೋರಿಸ್ತಾನೆ, ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡುತ್ತಾನೆ ಮ್ಯಾಚ್ ಗೆಲ್ಲಿಸ್ತಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.