2026ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ತಿಂಗಳೊಳಗೆ, ಭಾರತೀಯ ಆಟಗಾರರು 50 ಓವರ್ಗಳ ಸ್ವರೂಪಕ್ಕೆ ಸಜ್ಜಾಗುತ್ತಿದ್ದಾರೆ. ಅವರು ಶನಿವಾರ ಧರ್ಮಶಾಲಾದಲ್ಲಿ ಪ್ರಾರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಆಡಲಿದ್ದಾರೆ. ರೋಹಿತ್ ಶರ್ಮಾ ಅವರಿಗೆ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಈ ಪಂದ್ಯದಲ್ಲಿ ಭಾಗವಹಿಸಲು ಅನುಮತಿ ನೀಡಿದ್ದರೂ, ವಿರಾಟ್ ಕೊಹ್ಲಿ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ರೋಹಿತ್ ಭಾರತದ ನಾಯಕ ಶುಭಮನ್ ಗಿಲ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸುವ ನಿರೀಕ್ಷೆಯಿದೆ. ಆದರೆ, ಕೊಹ್ಲಿ ಅವರ ಮೂರನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಸದ್ಯ ಯಶಸ್ವಿ ಜೈಸ್ವಾಲ್ ಮತ್ತು ಇಶಾನ್ ಕಿಶನ್ ಈ ಸ್ಥಾನಕ್ಕೆ ಪೈಪೋಟಿಯಲ್ಲಿರುವ ಇಬ್ಬರು ಬ್ಯಾಟ್ಸ್ಮನ್ಗಳು ಆಗಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಕಿಶನ್ ಭಾರತಕ್ಕೆ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
'ಮತ್ತೊಮ್ಮೆ, (ಅವರು) ಈ ಸಮಯದಲ್ಲಿ ದೇವರ ನೆಚ್ಚಿನ ಮಗು. ಮತ್ತು ಅವರು 3ನೇ ಕ್ರಮಾಂಕದಲ್ಲಿ ರನ್ ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಆ ರೀತಿಯ ಫಾರ್ಮ್ನಲ್ಲಿರುತ್ತಾನೆ. ಅವಕಾಶ ಸಿಕ್ಕಾಲಗೆಲ್ಲ, ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡುತ್ತಾರೆ. ಯಾವುದೇ ಅವಕಾಶವಿದ್ದರೂ ಮೊದಲಿಗೆ ಅವರು ಅಲ್ಲಿಯೇ ನಿಂತಿರುತ್ತಾರೆ ಮತ್ತು ತಂಡಕ್ಕೆ ಬರುತ್ತಾರೆ, ರನ್ ಗಳಿಸುತ್ತಾರೆ ಮತ್ತು ತನ್ನನ್ನು ತಾನು ಸಾಬೀತುಪಡಿಸಿಕೊಳ್ಳುತ್ತಾರೆ. ಅವರು ಯಾವಾಗಲೂ ಹಾಗೆ ಮಾಡುತ್ತಾರೆ' ಎಂದು ಚೋಪ್ರಾ ತನ್ನ ಯೂಟ್ಯೂಬ್ ಚಾನೆಲ್ನಲ್ಲಿನ ವಿಡಿಯೋದಲ್ಲಿ ಹೇಳಿದರು.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬುಧವಾರ ಹೊಸ ಕ್ವಾಡ್ರೈಸ್ಪ್ಸ್ ನೋವು ಕಾಣಿಸಿಕೊಂಡ ನಂತರ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದು, ಆತಿಥೇಯ ತಂಡಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ (MI) ಪರ ಆಡುವಾಗ ಪಾಂಡ್ಯ ಅನುಭವಿಸಿದ ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನಲ್ಲಿರುವ ಬಿಸಿಸಿಐನ ಸಿಒಇಗೆ ಬಂದಿದ್ದರು.
ಸುದ್ದಿಸಂಸ್ಥೆ ಪಿಟಿಐ ಪ್ರಕಾರ, ಮೌಲ್ಯಮಾಪನದ ಸಮಯದಲ್ಲಿ ಸಿಒಇಯಲ್ಲಿ 10 ಓವರ್ಗಳ ಪೂರ್ಣ ಕೋಟಾವನ್ನು ಬೌಲಿಂಗ್ ಮಾಡಿದ್ದರಿಂದ ಹೊಸ ಗಾಯ ಉಂಟಾಗಿರಬಹುದು ಎನ್ನಲಾಗಿದೆ.
ಮುಂದಿನ ವರ್ಷದ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಏಕದಿನ ಕ್ರಿಕೆಟ್ ಆಡುವತ್ತ ಅವರು ಒತ್ತಡಕ್ಕೊಳಗಾಗುತ್ತಿರುವ ಸಮಯದಲ್ಲಿ, 32 ವರ್ಷದ ಆಲ್ರೌಂಡರ್ಗೆ ಗಾಯದ ಸಮಸ್ಯೆ ಎದುರಾಗಿದೆ.
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಶನಿವಾರ ಧರ್ಮಶಾಲಾದಲ್ಲಿ ಆರಂಭವಾಗಲಿದ್ದು, ಜೂನ್ 17 ಮತ್ತು 20 ರಂದು ಲಕ್ನೋ ಮತ್ತು ಚೆನ್ನೈನಲ್ಲಿ ಪಂದ್ಯಗಳು ನಡೆಯಲಿವೆ.