ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ಸೋಲಿಸಿ, ಪಂದ್ಯಾವಳಿಯ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ತಂಡವು ರಣಜಿ ಟ್ರೋಫಿ ಪ್ರಶಸ್ತಿ ಗೆದ್ದಿದೆ. ಪಂದ್ಯವನ್ನು ವೀಕ್ಷಿಸಲು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ಸ್ಥಳದಲ್ಲಿ ಹಾಜರಿದ್ದರು.
ತಂಡವು ಟ್ರೋಫಿಯನ್ನು ಗೆದ್ದ ತಕ್ಷಣವೇ, ಒಮರ್ ಅಬ್ದುಲ್ಲಾ ಇಡೀ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ₹2 ಕೋಟಿ ನಗದು ಬಹುಮಾನ ಘೋಷಿಸಿದರು. X ನಲ್ಲಿ ಪೋಸ್ಟ್ ಮಾಡಿದ ಅವರು, 'ಅತ್ಯುತ್ತಮ ಕ್ರೀಡಾಪಟುಗಳಿಗೆ ಇತ್ತೀಚೆಗೆ ಸೂಚಿಸಲಾದ ನಿಯಮಗಳ ಅಡಿಯಲ್ಲಿ ಆಟಗಾರರು ಸರ್ಕಾರಿ ನೇಮಕಾತಿಗಳಿಗೆ ಅರ್ಹರಾಗಿರುತ್ತಾರೆ' ಎಂದು ಬರೆದಿದ್ದಾರೆ.
ಈ ಆವೃತ್ತಿಯ ಉದ್ದಕ್ಕೂ, ಬ್ಯಾಟ್ಸ್ಮನ್ ಮತ್ತು ಬೌಲರ್ಗಳಿಂದ ಅದ್ಭುತ ಪ್ರದರ್ಶನಗಳು ಕಂಡುಬಂದವು. ಐಪಿಎಲ್ನ ಅದ್ಭುತ ಬ್ಯಾಟ್ಸ್ಮನ್ ಅಬ್ದುಲ್ ಸಮದ್ 10 ಪಂದ್ಯಗಳಲ್ಲಿ 57 ಸರಾಸರಿಯಲ್ಲಿ 748 ರನ್ ಗಳಿಸಿದರು. ನಾಯಕ ಪರಾಸ್ ಡೋಗ್ರಾ ಕೂಡ 637 ರನ್ ಗಳಿಸಿದರು. ಔಕಿಬ್ ನಬಿ 60 ವಿಕೆಟ್ಗಳೊಂದಿಗೆ ಈ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಸ್ಥಾನ ಪಡೆದರು. ಸುನೀಲ್ ಕುಮಾರ್ ತಮ್ಮ ಚೊಚ್ಚಲ ಆವೃತ್ತಿಯಲ್ಲಿ 31 ರನ್ ಗಳಿಸಿದರು.
ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡವು ಕರ್ನಾಟಕದ ಬೌಲರ್ಗಳ ಬೆವರಿಳಿಸಿತು. ಮೊದಲ ಇನಿಂಗ್ಸ್ನಲ್ಲಿ 584 ರನ್ ಗಳಿಸಿತು. ಶುಭಂ ಪುಂಡಿರ್ 121 ರನ್ ಗಳಿಸಿದರು. ಡೋಗ್ರಾ ಕೂಡ 70 ರನ್ ಗಳಿಸಿದರು. ಕರ್ನಾಟಕದ ಪರ ಮಯಾಂಕ್ ಅಗರ್ವಾಲ್ ಅವರ ಶತಕದ ಹೊರತಾಗಿಯೂ, ಕರ್ನಾಟಕವು 293 ರನ್ಗಳಿಗೆ ಮೊದಲ ಇನಿಂಗ್ಸ್ನಲ್ಲಿ ಆಲೌಟ್ ಆಯಿತು.
ಮೊದಲ ಇನಿಂಗ್ಸ್ನಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡ ಜಮ್ಮು ಮತ್ತು ಕಾಶ್ಮೀರ ಎರಡನೇ ಇನಿಂಗ್ಸ್ನಲ್ಲಿ ಕಮ್ರಾನ್ ಇಕ್ಬಾಲ್ ಮತ್ತು ಸಾಹಿಲ್ ಲೋತ್ರಾ ಅವರ ಶತಕಗಳ ಸಹಾಯದಿಂದ 342 ರನ್ ಗಳಿಸಿತು. ಅಂತಿಮವಾಗಿ ಕರ್ನಾಟಕದ ವಿರುದ್ಧ ಗೆದ್ದು ಬೀಗಿ, ಚೊಚ್ಚಲ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.