ಅಹ್ಮದಾಬಾದ್: ಟಿ20 ವಿಶ್ವಕಪ್ ಫೈನಲ್ ನಲ್ಲಿ ಭಾರತ ಗೆಲ್ಲಬಾರದು.. ಒಂದು ವೇಳೆ ಗೆದ್ರೆ BCCI ಬಲ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್-ಭಾರತ ನಡುವಿನ ಟಿ20 ವಿಶ್ವಕಪ್ 2026 ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಅದರಂತೆ ಭಾರತ ಬ್ಯಾಟಿಂಗ್ ಆರಂಭಿಸಿದ್ದು, ಭಾರತದ ಪರ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಈ ನಡುವೆ ಈ ಮಹತ್ವದ ಪಂದ್ಯದಲ್ಲಿ ಭಾರತ ಗೆಲ್ಲಬಾರದು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ. ಪಾಕಿಸ್ತಾನದ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಶಾಹೀದ್ ಅಫ್ರಿದಿ, 'ಟಿ20 ವಿಶ್ವಕಪ್ನಲ್ಲಿ ಭಾರತ ಗೆಲ್ಲಬಾರದು. ಅಕಸ್ಮಾತ್ ಗೆದ್ದು ಬಿಟ್ಟರೆ, ಬಿಸಿಸಿಐಗೆ ಇನ್ನಷ್ಟು ಬಲ ಹೆಚ್ಚಾಗುತ್ತದೆ' ಎಂದು ಹೇಳಿದ್ದಾರೆ.
ಬುಮ್ರಾನೇ ಟ್ರಂಪ್ ಕಾರ್ಡ್
ಅಂತೆಯೇ ಭಾರತದ ಪರ ವೇಗಿ ಜಸ್ ಪ್ರೀತ್ ಬುಮ್ರಾ ಅವರೇ ಟ್ರಂಪ್ ಕಾರ್ಡ್ ಎಂದಿರುವ ಅಫ್ರಿದಿ, 'ಭಾರತೀಯ ಆಟಗಾರರು ತಮ್ಮದೇ ಆದ ಪ್ರೇಕ್ಷಕರ ಮುಂದೆ ಮತ್ತು ಪರಿಚಿತ ಪರಿಸ್ಥಿತಿಗಳಲ್ಲಿ ಆಡುತ್ತಿದ್ದಾರೆ. ಇದು ಪ್ರಮುಖ ಪರಿಣಾಮ ಬೀರುತ್ತದೆ. ಪ್ರೇಕ್ಷಕರ ಒತ್ತಡವು ಗಮನಾರ್ಹ ವ್ಯತ್ಯಾಸವನ್ನುಂಟು ಮಾಡುತ್ತದೆ ಮತ್ತು ಪ್ರೇಕ್ಷಕರು ತಂಡದ ಹನ್ನೆರಡನೇ ಆಟಗಾರನಂತೆ ತಂಡವನ್ನು ಹುರಿದುಂಬಿಸುತ್ತಾರೆ ಎಂದು ಬಣ್ಣಿಸಿದರು.
ನ್ಯೂಜಿಲೆಂಡ್ನ ಆಟಗಾರರು ಬಹಳ ಅನುಭವಿ ಮತ್ತು ಒತ್ತಡದಲ್ಲಿ ಯಾರು ಉತ್ತಮವಾಗಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ. ಭಾರತವು ಎದುರಾಳಿಗಳ ಮೇಲೆ ಒತ್ತಡ ಹೇರಲು ಬಯಸಿದರೆ, ಅವರು ಬುಮ್ರಾ ಮೂಲಕ ಹೊಸ ಚೆಂಡನ್ನು ಬಳಸಬೇಕಾಗುತ್ತದೆ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಮೇಲೆ ದಾಳಿ ಮಾಡಬೇಕಾಗುತ್ತದೆ" ಎಂದು ಅಫ್ರಿದಿ ಹೇಳಿದರು.
ಬಿಸಿಸಿಐ ವಿಶ್ವ ಕ್ರಿಕೆಟ್ ಅನ್ನು ಆಳಲಿದೆ
ಇದೇ ವೇಳೆ, 'ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಾಗಲೇ ಕೋಟಿಗಟ್ಟಲೆ ಹಣವನ್ನು ಹೊಂದಿದೆ. ಟೀಮ್ ಇಂಡಿಯಾ ಈಗಾಗಲೇ ಸಾಕಷ್ಟು ಟ್ರೋಫಿಗಳನ್ನು ಗೆದ್ದಿದೆ. ಈಗ, ಮತ್ತೆ ಟ್ರೋಫಿ ಗೆದ್ದರೆ, ಬಿಸಿಸಿಐ ವಿಶ್ವ ಕ್ರಿಕೆಟ್ ಅನ್ನು ಆಳಲಿದೆ. ಇದರಿಂದ ಕ್ರಿಕೆಟ್ ಸಂಪೂರ್ಣವಾಗಿ ನಾಶವಾಗುತ್ತದೆ. ಕ್ರಿಕೆಟ್ನ ಒಳಿತಿಗಾಗಿ, ಭಾರತ ವಿಶ್ವಕಪ್ ಗೆಲ್ಲಬಾರದು ಎಂದು ನಾನು ಭಾವಿಸುತ್ತೇನೆ.
ಆಟವು ಜಾಗತಿಕವಾಗಿ ಬೆಳೆಯಬೇಕಾದರೆ, ಪ್ರತಿ ಬಾರಿಯೂ ಒಂದೇ ಚಾಂಪಿಯನ್ ಇರುವುದು ಹೆಚ್ಚಿನ ಉತ್ಸಾಹವನ್ನು ಉಂಟುಮಾಡುವುದಿಲ್ಲ. ಈ ಬಾರಿ ನ್ಯೂಜಿಲೆಂಡ್ ಬಹಳ ಬಲಿಷ್ಠ ತಂಡವನ್ನು ಹೊಂದಿದೆ, ಮತ್ತು ಅವರು ಸುಮಾರು 20–25 ವರ್ಷಗಳಿಂದ ಐಸಿಸಿ ಟೂರ್ನಮೆಂಟ್ ಅನ್ನು ಗೆದ್ದಿಲ್ಲ. ಅವರು ಈ ಬಾರಿ ಗೆದ್ದರೆ, ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಅಫ್ರಿದಿ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಅಫ್ರಿದಿ ಮಾತಿಗೆ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾಕ್ ಮಾಜಿ ಕ್ರಿಕೆಟಿಗರಾದ ಉಮರ್ ಗುಲ್, ಶೋಯೆಬ್ ಅಖ್ತರ್, ಇಂಜಮಾಮ್ ಉಲ್-ಹಕ್, ಮೊಹಮ್ಮದ್ ಅಮೀರ್ ಕೂಡ ಭಾರತ ಸೋಲಬೇಕು ಎಂದು ಹೇಳಿದ್ದಾರೆ.