ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಸತತ 2ನೇ ಬಾರಿಗೆ ಮತ್ತು ಒಟ್ಟಾರೆ 3ನೇ ಬಾರಿಗೆ ಚಾಂಪಿಯನ್ ಆಗಿ ಪ್ರಶಸ್ತಿಗೆ ಮುತ್ತಿಟ್ಟಿದ್ದು, ಇದೇ ಮೊದಲ ಬಾರಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ಸಾಧನೆ ಕುರಿತು ಪೋಸ್ಟ್ ಮಾಡಿದ್ದಾರೆ.
ಹೌದು.. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ 96 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ ನೀಡಿದ್ದ 256 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ 19 ಓವರ್ ನಲ್ಲಿ ಕೇವಲ 159ರನ್ ಗಳಿಗೇ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ ಮೂರನೇ ಬಾರಿಗೆ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದೆ.
ಇದಕ್ಕೂ ಮೊದಲು 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವಲ್ಲಿ ಭಾರತ ಮೊದಲ ಬಾರಿಗೆ ಟಿ20 ವಿಶ್ವಕಪ್ ಜಯಿಸಿತ್ತು. ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ 2024ರಲ್ಲಿ ಟ್ರೋಫಿ ಜಯಿಸಿ ಚಾಂಪಿಯನ್ ಆಗಿತ್ತು. ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ ಮೂರನೇ ಬಾರಿಗೆ ಟ್ರೋಫಿ ಜಯಿಸಿ ಇತಿಹಾಸ ನಿರ್ಮಿಸಿದೆ.
ಕೊನೆಗೂ ಭಾರತದ ಗೆಲುವಿನ ಕುರಿತು MS Dhoni ಪೋಸ್ಟ್
ಇನ್ನು ಅಚ್ಚರಿ ವಿಚಾರವೆಂದರೆ ಭಾರತ ತಂಡದ ಈ ಐತಿಹಾಸಿಕ ಗೆಲುವಿನ ಕುರಿತು ಇದೇ ಮೊದಲ ಬಾರಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಭಾರತ ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಜಯಿಸಿದಾಗ ತಂಡದ ಕುರಿತು ಪೋಸ್ಟ್ ಮಾಡದ ಮಹೇಂದ್ರ ಸಿಂಗ್ ಮೌನ ಕಾಯ್ದುಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಭಾರತ ತಂಡದ ಶ್ಲಾಘನೆ ಕುರಿತು ಪೋಸ್ಟ್ ಮಾಡಿ ಅಚ್ಚರಿಗೆ ಕಾರಣವಾಗಿದ್ದಾರೆ.
ಕೋಚ್ ಸಾಬ್.. ಗೌತಮ್ ಗಂಭೀರ್ ಗೆ ಖಡಕ್ ಸಂದೇಶ
ಇನ್ನು ಈ ಪೋಸ್ಚ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ತಂಡದ ಎಲ್ಲ ಆಟಗಾರರ ಪ್ರದರ್ಶನವನ್ನು ತುಂಬು ಹೃದಯದಿಂದ ಶ್ಲಾಘಿಸಿದ್ದು ಪ್ರಮುಖವಾಗಿ ಪ್ರಧಾನ ಕೋಚ್ ಗೌತಮ್ ಗಂಭೀರ್ ವಿಚಾರವಾಗಿ ಧೋನಿ ಪೋಸ್ಟ್ ಮಾಡಿದ್ದಾರೆ.
'ಅಹಮದಾಬಾದ್ನಲ್ಲಿ ಇತಿಹಾಸ ಸೃಷ್ಟಿಯಾಗಿದೆ. ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಮತ್ತು ವಿಶ್ವಾದ್ಯಂತ ಭಾರತೀಯ ಕ್ರಿಕೆಟ್ ತಂಡದ ಎಲ್ಲಾ ಅಭಿಮಾನಿಗಳಿಗೆ ದೊಡ್ಡ ಅಭಿನಂದನೆಗಳು. ನಿಮ್ಮೆಲ್ಲರ ಆಟವನ್ನು ನೋಡಲು ತುಂಬಾ ಸಂತೋಷವಾಯಿತು. ಕೋಚ್ ಸಾಬ್ ಅವರ ನಗು ಅದ್ಭುತವಾಗಿ ಕಾಣುತ್ತದೆ. ನಗುವಿನೊಂದಿಗಿನ ತೀವ್ರತೆಯು ಒಂದು ಭಯಾನಕ ಸಂಯೋಜನೆಯಾಗಿದೆ. ತುಂಬಾ ಚೆನ್ನಾಗಿ ಆಡಿದ್ದೀರಿ ಎಂದು ಧೋನಿ ಪೋಸ್ಟ್ ಮಾಡಿದ್ದಾರೆ.
ಅಂತೆಯೇ ಬುಮ್ರಾ ಕುರಿತೂ ಬರೆದಿರುವ ಧೋನಿ, ಬುಮ್ರಾ ಬಗ್ಗೆ ಏನೂ ಬರೆಯದಿರುವುದೇ ಒಳಿತು. ಏಕೆಂದರೆ ಅವರೊಬ್ಬ ಚಾಂಪಿಯನ್ ಬೌಲರ್ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ಅಂದಹಾಗೆ ಎಂಎಸ್ ಧೋನಿ ಈ ಫೈನಲ್ ಪಂದ್ಯದ ವೀಕ್ಷಣೆಗೆ ಆಗಮಿಸಿದ್ದು ವಿಶೇಷವಾಗಿತ್ತು. ಮಾತ್ರವಲ್ಲದೇ ಧೋನಿ ಹಾಗೂ ರೋಹಿತ್ ಶರ್ಮಾ ಟ್ರೋಫಿಯನ್ನು ಪ್ರದರ್ಶನ ಮಾಡಿದ್ದು ಈ ಪಂದ್ಯದ ವಿಶೇಷವಾಗಿತ್ತು.