ಭಾನುವಾರ ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದ ಭಾರತ 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆದರೆ, ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್, ಮನೆಯಲ್ಲಿ ಸಾವಿನ ಶೋಕದ ನಡುವೆಯೂ ಆಡಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಟಿ20 ವಿಶ್ವಕಪ್ ಫೈನಲ್ಗೆ ಕೆಲವೇ ದಿನಗಳ ಮೊದಲು, ಕಿಶನ್ ಅವರ ಸೋದರ ಸಂಬಂಧಿ ಮತ್ತು ಭಾವ ಶುಕ್ರವಾರ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಈ ಘಟನೆಯಿಂದಾಗಿ ಕಿಶನ್ ಅವರ ತಂದೆ ಪ್ರಣವ್ ಪಾಂಡೆ ಫೈನಲ್ ಪಂದ್ಯದ ವೇಳೆ ಅಹಮದಾಬಾದ್ಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಕಿಶನ್ ಕೂಡ ತಮ್ಮ ಕುಟುಂಬವನ್ನು ಸೇರಲು ಬಯಸಿದ್ದರು. ಆದರೆ, ವಿಶ್ವಕಪ್ ಫೈನಲ್ನ ಕರ್ತವ್ಯದಿಂದಾಗಿ ಅವರು ಹಿಂತಿರುಗಲು ಸಾಧ್ಯವಾಗಲಿಲ್ಲ.
'ಅನರ್ಥ್ ಹೋ ಗಯಾ. ಹಮ್ ಲೋಗ್ ಬಹುತ್ ಬಡಿ ಮುಸಿಬತ್ ಮೇ ಹೈ (ಅನರ್ಥವು ಸಂಭವಿಸಿದೆ. ನಾವು ಬಹಳ ದೊಡ್ಡ ಸಮಸ್ಯೆಯಲ್ಲಿದ್ದೇವೆ)' ಕಿಶನ್ ಅವರ ತಂದೆ ಫೈನಲ್ಗೆ ಮುಂಚಿತವಾಗಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
'ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ಇಶಾನ್ ನಮ್ಮನ್ನು ಭೇಟಿ ಮಾಡಲು ಬಯಸಿದ್ದರು. ಆದರೆ, ಫೈನಲ್ ಪಂದ್ಯದ ಕಾರಣ ಅವರು ಹಿಂತಿರುಗಲು ಸಾಧ್ಯವಾಗಲಿಲ್ಲ. ಅವರು ಸಂಪೂರ್ಣವಾಗಿ ಬೇಸರಗೊಂಡಿದ್ದಾರೆ' ಎಂದು ಪ್ರಣವ್ ಪಾಂಡೆ ಹೇಳಿದರು.
ವರದಿ ಪ್ರಕಾರ, ಪಂದ್ಯಕ್ಕೂ ಮುನ್ನ ಭಾರತದ ಅಭ್ಯಾಸ ಅವಧಿಗಳಲ್ಲಿ ಸಾಮಾನ್ಯವಾಗಿ ಕಾಣುವ ಉತ್ಸಾಹಭರಿತ ವರ್ಚಸ್ಸು ಕಿಶನ್ ಅವರಲ್ಲಿ ಇರಲಿಲ್ಲ. ಅವರ ಬ್ಯಾಟಿಂಗ್ ಅವಧಿಯು ಸಾಮಾನ್ಯವಾಗಿ ನಡೆಯುವಷ್ಟು ಹೆಚ್ಚು ಕಾಲ ನಡೆಯಲಿಲ್ಲ. ಭಾರತೀಯ ತಂಡದ ಹಲವಾರು ಆಟಗಾರರು ಕಿಶನ್ ಅವರನ್ನು ಸಂತೈಸಿದ್ದು ಕಂಡುಬಂತು.
ವೈಯಕ್ತಿಕ ನಷ್ಟದ ಭಾರದ ಹೊರತಾಗಿಯೂ, ಭಾನುವಾರ ನಡೆದ ಟಿ20 ವಿಶ್ವಕಪ್ 2026ರ ಫೈನಲ್ನಲ್ಲಿ ಕಿಶನ್ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಅಭಿಷೇಕ್ ಶರ್ಮಾ ಔಟ್ ಆದ ಬಳಿಕ 3ನೇ ಕ್ರಮಾಂಕದಲ್ಲಿ ಬಂದ ಎಡಗೈ ಬ್ಯಾಟರ್, ಕೇವಲ 25 ಎಸೆತಗಳಲ್ಲಿ 54 ರನ್ ಗಳಿಸಿದರು. ಇದು ಟೂರ್ನಮೆಂಟ್ನಲ್ಲಿ ಕಿಶನ್ ಅವರ ಮೂರನೇ ಅರ್ಧಶತಕವಾಗಿದೆ.
ತಮ್ಮ ಅರ್ಧಶತಕದ ನಂತರ ಕಿಶನ್ ತಮ್ಮ ಬ್ಯಾಟ್ ಅನ್ನು ಮೇಲೆ ತೋರಿಸಿದರು. ಇದು ತಮ್ಮ ಮನೆಯಲ್ಲಿ ನಡೆದಿರುವ ದುರಂತವನ್ನು ತೋರಿಸುವಂತಿತ್ತು.
ಬ್ಯಾಟಿಂಗ್ ಅಷ್ಟೇ ಅಲ್ಲದೆ, ಇಶಾನ್ ಕಿಶನ್ ಔಟ್ಫೀಲ್ಡ್ನಲ್ಲಿ ಎರಡು ಅದ್ಭುತ ಕ್ಯಾಚ್ಗಳೊಂದಿಗೆ ತಂಡಕ್ಕೆ ಕೊಡುಗೆ ನೀಡಿದರು. ಇದರ ಪರಿಣಾಮವಾಗಿ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳಾದ ರಚಿನ್ ರವೀಂದ್ರ ಮತ್ತು ಟಿಮ್ ಸೈಫರ್ಟ್ ಔಟ್ ಆದರು.
ಕಿಶನ್ ಒಂಬತ್ತು ಇನಿಂಗ್ಸ್ಗಳಲ್ಲಿ 317 ರನ್ಗಳೊಂದಿಗೆ ಟೂರ್ನಮೆಂಟ್ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಸ್ಥಾನ ಪಡೆದರು.