ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಜನರಿಗೆ ಗೌರವ ಸಲ್ಲಿಸುವ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2026ರ ಸಾಂಪ್ರದಾಯಿಕ ಉದ್ಘಾಟನಾ ಸಮಾರಂಭವನ್ನು ಕೈಬಿಡಲು ನಿರ್ಧರಿಸಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸನ್ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಎದುರಿಸಲಿದೆ. ಪಂದ್ಯಕ್ಕೂ ಮುನ್ನ ಯಾವುದೇ ಆಚರಣೆಗಳು ಇರುವುದಿಲ್ಲ ಎನ್ನಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಐಪಿಎಲ್ ಆಡಳಿತ ಮಂಡಳಿಯು ಮೇ 31 ರಂದು ಅದ್ಧೂರಿ ಸಮಾರೋಪ ಸಮಾರಂಭವನ್ನು ಯೋಜಿಸುತ್ತಿದೆ. 'ಕಳೆದ ವರ್ಷ ಜೂನ್ 4 ರಂದು ನಡೆದ ದುರಂತ ಘಟನೆಯಿಂದಾಗಿ, ಐಪಿಎಲ್-2026ರ ಪ್ರಾರಂಭದ ದಿನದಂದು (ಬೆಂಗಳೂರಿನಲ್ಲಿ) ಯಾವುದೇ ಔಪಚಾರಿಕ ಕಾರ್ಯಕ್ರಮವಿರುವುದಿಲ್ಲ. ಕಾಲ್ತುಳಿತದಲ್ಲಿ ಅಗಲಿದ ಆತ್ಮಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಐಪಿಎಲ್-19ನೇ ಆವೃತ್ತಿಯ ಆರಂಭದಲ್ಲಿ ಬಿಸಿಸಿಐ ಯಾವುದೇ ಸಾಂಸ್ಕೃತಿಕ ಅಥವಾ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸುತ್ತಿಲ್ಲ' ಎನ್ನಲಾಗಿದೆ.
ಆದಾಗ್ಯೂ, ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯು ಐಪಿಎಲ್ ಮುಕ್ತಾಯದ ದಿನದಂದು (ಮೇ 31) ಭವ್ಯ ಮನರಂಜನಾ ಕಾರ್ಯಕ್ರಮವನ್ನು ಯೋಜಿಸುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
2025ರಲ್ಲಿ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತ್ತು. ಇದರಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್, ನಟಿ ದಿಶಾ ಪಟಾನಿ, ಗಾಯಕರಾದ ಶ್ರೇಯಾ ಘೋಶಾಲ್ ಮತ್ತು ಕರಣ್ ಔಜ್ಲಾ ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು, ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ₹16,660 ಕೋಟಿಗೆ ಸ್ವಾಧೀನಪಡಿಸಿಕೊಂಡಿತು. ಈ ಮೂಲಕ RCB ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿದೆ.
ಹೊಸ ಮಾಲೀಕತ್ವದ ರಚನೆಯಡಿಯಲ್ಲಿ, ಆದಿತ್ಯ ಬಿರ್ಲಾ ಗ್ರೂಪ್ನ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಆರ್ಸಿಬಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಸತ್ಯನ್ ಗಜ್ವಾನಿ ಉಪಾಧ್ಯಕ್ಷರ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ.