ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

RCB ವಿರುದ್ಧದ ಪಂದ್ಯದಿಂದಲೂ ಹಾರ್ದಿಕ್ ಔಟ್; ನಾಯಕನಿಲ್ಲದೆ ಹೊರಟ ಮುಂಬೈ ಇಂಡಿಯನ್ಸ್, ಹಲವು ಅನುಮಾನಗಳಿಗೆ ದಾರಿ!

ಈ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ತುಂಬಾ ಕಷ್ಟಪಡುತ್ತಿದ್ದಾರೆ. ಮುಂಬೈ ಪರ ಆಡಿರುವ ಎಂಟು ಪಂದ್ಯಗಳಲ್ಲಿ 136.45ರ ಸಾಧಾರಣ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 146 ರನ್‌ಗಳನ್ನು ಗಳಿಸಿದ್ದಾರೆ.

ಬೆನ್ನು ನೋವು ಕಾಣಿಸಿಕೊಂಡ ಕಾರಣ ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ, ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಹಿಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಪಂದ್ಯದಿಂದ ಹೊರಗುಳಿದಿದ್ದರು. ಕ್ರಿಕೆಟ್ ಕರ್ತವ್ಯಗಳಿಗೆ ಗೈರಾಗಲು ಅವರ ಅನಾರೋಗ್ಯವೇ ಅಧಿಕೃತ ಕಾರಣವೆಂದು ಹೇಳಲಾಗಿದ್ದರೂ, ರಾಯ್‌ಪುರದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಿಂದಲೂ ಅವರನ್ನು ದೂರವಿಡುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಮುಂಬೈ ತಂಡವು ತಮ್ಮ ಮುಂದಿನ ಪಂದ್ಯಕ್ಕಾಗಿ ಹೊರಟಿದ್ದು, ಹಾರ್ದಿಕ್ ಕಾಣಿಸಿಲ್ಲ.

ಕ್ರಿಕ್‌ಬಜ್‌ ವರದಿ ಪ್ರಕಾರ, ಬುಧವಾರ ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಲ್ಲಿ ಹಾರ್ದಿಕ್ ಪಾಂಡ್ಯ ಇರಲಿಲ್ಲ. ನಂತರದ ಹಂತದಲ್ಲಿ ಅವರು ತಮ್ಮ ತಂಡವನ್ನು ಸೇರಿಕೊಳ್ಳುತ್ತಾರೆಯೇ ಕುರಿತು ಯಾವುದೇ ಮಾಹಿತಿ ಇಲ್ಲ.

ಈ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ತುಂಬಾ ಕಷ್ಟಪಡುತ್ತಿದ್ದಾರೆ. ಮುಂಬೈ ಪರ ಆಡಿರುವ ಎಂಟು ಪಂದ್ಯಗಳಲ್ಲಿ 136.45ರ ಸಾಧಾರಣ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 146 ರನ್‌ಗಳನ್ನು ಗಳಿಸಿದ್ದಾರೆ. ಆಲ್‌ರೌಂಡರ್ ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್‌ನಲ್ಲೂ ಅಷ್ಟೇನು ಪರಿಣಾಮಕಾರಿಯಲ್ಲ. ಇದರ ಪರಿಣಾಮವಾಗಿ, ಅವರ ಅನುಪಸ್ಥಿತಿಯ ಹಿಂದೆ ಕೇವಲ ಗಾಯಕ್ಕಿಂತ ಹೆಚ್ಚಿನದ್ದು ಏನೋ ಇದೆ ಎಂಬ ಊಹಾಪೋಹಗಳು ಹರಡಿವೆ.

ಆಲ್‌ರೌಂಡರ್ ಲಕ್ನೋ ವಿರುದ್ಧದ ಪಂದ್ಯದಿಂದ ಹೊರಗುಳಿದ ನಂತರ, ಮುಂಬೈ ತಂಡ, 'ಹಾರ್ದಿಕ್ ಪಾಂಡ್ಯ ಬೆನ್ನುನೋವಿನಿಂದ ಅಸ್ವಸ್ಥರಾಗಿದ್ದಾರೆ; ಆದ್ದರಿಂದ, ಇಂದಿನ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ನಾಯಕರಾಗಿರುತ್ತಾರೆ' ಎಂದು ಅಧಿಕೃತ ಹೇಳಿಕೆ ನೀಡಿದೆ.

ಹಾರ್ದಿಕ್ ಗಾಯದ ಬಗ್ಗೆ ಕೇಳಿದಾಗ ರಿಯಾನ್ ರಿಕಲ್ಟನ್, 'ಅವರು ಯಾವಾಗ ಹಿಂತಿರುಗುತ್ತಾರೆಂದು ನನಗೆ ತಿಳಿದಿಲ್ಲ. ಅವರಿಗೆ ಬೆನ್ನು ನೋವಿದೆ ಎಂದು ನನಗೆ ಇಂದು ಮಧ್ಯಾಹ್ನವೇ ತಿಳಿಬಂತು. ಆದ್ದರಿಂದ, ಅದರ ಗಂಭೀರತೆ ಬಗ್ಗೆ ನನಗೆ ತಿಳಿದಿಲ್ಲ. ನಾನು ಅದನ್ನು ಗಾಯ ಎಂದು ಕರೆಯುವುದಿಲ್ಲ. ಅದು ಎಷ್ಟು ಗಂಭೀರವಾಗಿದೆ ಅಥವಾ ಅವರು ಏನು ಅನುಭವಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ, ಈ ವಾರ ನಾವು ರಾಯ್‌ಪುರಕ್ಕೆ ಹೋಗುವಾಗ ಅವರು ತಂಡಕ್ಕೆ ಮರಳುತ್ತಾರೆ' ಎಂದು ಅವರು ಸೋಮವಾರ ಹೇಳಿದ್ದರು.

ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಕೆಲವೇ ವಾರಗಳ ನಂತರ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ಉತ್ತಮ ಪ್ರದರ್ಶನ ನೀಡದಿರುವುದಕ್ಕೆ ಈ ಆವೃತ್ತಿಯ ಕೇಂದ್ರಬಿಂದುವಾಗಿದ್ದಾರೆ.

ಆಡಿರುವ 10 ಪಂದ್ಯಗಳಲ್ಲಿ 3 ಗೆಲುವುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಆವೃತ್ತಿ ಉತ್ತಮವಾಗಿಲ್ಲ. ರೋಹಿತ್ ಶರ್ಮಾ ಅವರನ್ನು ನಾಯಕನ ಹುದ್ದೆಯಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಮತ್ತೆ ನಾಯಕನಾಗಿ ನೇಮಿಸುವ ನಿರ್ಧಾರವು ಹೊಸ ಯುಗಕ್ಕೆ ನಾಂದಿ ಹಾಡುವ ಉದ್ದೇಶವನ್ನು ಹೊಂದಿತ್ತು. ಆದರೆ, ಆಗಿನಿಂದ ತಂಡದ ಪರಿಸ್ಥಿತಿ ಬದಲಾಗಿಲ್ಲ.

ಗುಜರಾತ್ ಟೈಟಾನ್ಸ್ ತಂಡದಿಂದ ಹಾರ್ದಿಕ್ ಅವರ ಮರಳುವಿಕೆ ಚೈತನ್ಯ ಮತ್ತು ಸರ್ವತೋಮುಖ ಪರಿಣಾಮವನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಆವೃತ್ತಿಯಲ್ಲಿ, ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಭಾವ ಬೀರಲು ಹೆಣಗಾಡುತ್ತಿದ್ದಾರೆ. ಜೊತೆಗೆ, ನಾಯಕತ್ವದ ಬೇಡಿಕೆಗಳನ್ನು ಸಹ ನಿಭಾಯಿಸಲು ಹೆಣಗಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿ, ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್; ನಾಳೆಯೇ ಪ್ರಮಾಣವಚನ ಸಾಧ್ಯತೆ

TVKಗೆ ಕಾಂಗ್ರೆಸ್ ಬೆಂಬಲ: ಕೈ ಶಾಸಕರಿಗೆ ಹೂವಿನ ಹಾರ, ರೇಷ್ಮೆ ಶಾಲು ಹೊದಿಸಿ ಸ್ವಾಗತಿಸಿದ ವಿಜಯ್

ಭಾರತ- ವಿಯೆಟ್ನಾಂ ನಡುವೆ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಒಪ್ಪಂದ!

ಪಂಜಾಬ್​ನಲ್ಲಿ ಅವಳಿ ಸ್ಫೋಟದ ಬೆನ್ನಲ್ಲೇ ಕಚ್ ಕರಾವಳಿಯಲ್ಲಿ ಶಂಕಿತ ಪಾಕ್ ದೋಣಿ ಪತ್ತೆ!

ಸರ್ಕಾರ ರಚನೆಗೆ DMK ಮಿತ್ರ ಪಕ್ಷಗಳತ್ತ ವಿಜಯ್ ಕಣ್ಣು; ಕಾಂಗ್ರೆಸ್ ಬಳಿಕ VCK, CPM ಮತ್ತು CBI ಬೆಂಬಲ ಕೋರಿದ TVK!

SCROLL FOR NEXT