ಮುಂಬೈ: ತೀವ್ರ ವಿವಾದಕ್ಕೆ ಕಾರಣವಾಗಿರುವ ಐಪಿಎಲ್ 2026 ಫೈನಲ್ ಪಂದ್ಯದ ಮೈದಾನದ ಬದಲಾವಣೆ ವಿಚಾರವಾಗಿ ಇದೇ ಮೊದಲ ಬಾರಿಗೆ ಬಿಸಿಸಿಐ ಹೇಳಿಕೆ ನೀಡಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, 'ನಿನ್ನೆ ಬಿಸಿಸಿಐ ಐಪಿಎಲ್ ಪ್ಲೇಆಫ್ ಪಂದ್ಯಗಳ ಮೈದಾನಗಳ ಘೋಷಿಸಿವೆ. ಕ್ವಾಲಿಫೈಯರ್, ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳನ್ನು ಒಳಗೊಂಡಂತೆ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
ಈ ಪೈಕಿ ಧರ್ಮಶಾಲಾದಲ್ಲಿ ಮೊದಲ ಪ್ಲೇಆಫ್ ಪಂದ್ಯ ಅಲ್ಲಿ ನಡೆಯಲಿದೆ. ನಂತರ ಎಲಿಮಿನೇಟರ್ ಹಾಗೂ ಮತ್ತೊಂದು ಪ್ಲೇಆಫ್ ಪಂದ್ಯ ನಡೆಯಲಿದೆ. ಹೀಗಾಗಿ ಎರಡನೇ ಮತ್ತು ಮೂರನೇ ಪಂದ್ಯಗಳು ನ್ಯೂ ಚಂಡೀಗಢದಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ಮೇ 31ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ' ಎಂದರು.
ಬೆಂಗಳೂರಿನಲ್ಲೇ ಆಡ್ಬೇಕಿತ್ತು
ಅಂತೆಯೇ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯ ಬೇರೆಡೆಗೆ ಬದಲಾವಣೆ ಮಾಡಿದ ಕುರಿತು ಮಾತನಾಡಿದ ಸೈಕಿಯಾ, 'ಸಾಮಾನ್ಯ ಪ್ರೋಟೋಕಾಲ್ ಪ್ರಕಾರ, ಹಿಂದಿನ ವರ್ಷದ ಚಾಂಪಿಯನ್ ತಂಡಕ್ಕೆ ಫೈನಲ್ ಹಾಗೂ ಒಂದು ಪ್ಲೇಆಫ್ ಪಂದ್ಯವನ್ನು ತನ್ನ ತವರಿನ ಮೈದಾನದಲ್ಲಿ ಆಯೋಜಿಸುವ ಹಕ್ಕು ಇರುತ್ತದೆ.
ಕಳೆದ ವರ್ಷದ ಚಾಂಪಿಯನ್ ಆರ್ಸಿಬಿಯಾಗಿದ್ದರಿಂದ, ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಬೇಕಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳಿಂದ ಉಂಟಾದ ಕೆಲವು ಪರಿಸ್ಥಿತಿಗಳ ಕಾರಣದಿಂದ, ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಪಂದ್ಯಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಬೇಕಾಯಿತು. ಅದರಂತೆ ಒಂದು ಪಂದ್ಯವನ್ನು ನ್ಯೂ ಚಂಡೀಗಢಕ್ಕೆ ಮತ್ತು ಫೈನಲ್ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂಗೆ ನೀಡಲಾಗಿದೆ' ಎಂದರು.
ಫೈನಲ್ ಪಂದ್ಯಕ್ಕೆ ತೊಡಕಾಗಿದ್ದೇನು?
ಐಪಿಎಲ್ ನಿಯಮಾವಳಿಗಳ ಪ್ರಕಾರ, ಆತಿಥೇಯ ಸಂಸ್ಥೆಗೆ ಒಟ್ಟು ಆಸನ ಸಾಮರ್ಥ್ಯದ ಕೇವಲ 15 ಶೇಕಡಾ ಉಚಿತ ಟಿಕೆಟ್ಗಳನ್ನು ಮಾತ್ರ ನೀಡಬೇಕಾಗುತ್ತದೆ. ಇದು ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಅನ್ವಯಿಸುವ ಸಾಮಾನ್ಯ ನಿಯಮ.
ಆದರೆ ಐಪಿಎಲ್ ಲೀಗ್ ಪಂದ್ಯಗಳ ಆಯೋಜನೆಯ ವೇಳೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಿಗದಿತ 15 ಶೇಕಡಾ ಮಿತಿಗಿಂತ ಬಹಳ ಹೆಚ್ಚಾಗಿ ಉಚಿತ ಟಿಕೆಟ್ಗಳನ್ನು ಕೇಳುತ್ತಿದೆ ಎಂಬ ಮಾಹಿತಿ ನಮಗೆ ವಿವಿಧ ಮೂಲಗಳಿಂದ ಲಭಿಸಿತು. ಈ ಹಿನ್ನೆಲೆದಲ್ಲಿ ನಾವು ಅವರಿಗೆ ಇ-ಮೇಲ್ ಕಳುಹಿಸಿ ವಿವರಗಳನ್ನು ಕೇಳಿದ್ದೇವೆ. ಮೇ 2ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಬಂದ ಉತ್ತರವನ್ನು ನೋಡಿ ನಾವು ಬೆಚ್ಚಿಬಿದ್ದೆವು ಎಂದರು.
'ಅವರು 15 ಶೇಕಡಾ ಉಚಿತ ಟಿಕೆಟ್ಗಳ ಜೊತೆಗೆ ತಮ್ಮ ಸದಸ್ಯರು, ಸಂಬಂಧಿತ ಕ್ಲಬ್ಗಳು ಹಾಗೂ ಇತರರಿಗಾಗಿ ಹೆಚ್ಚುವರಿ ದೊಡ್ಡ ಪ್ರಮಾಣದ ಟಿಕೆಟ್ಗಳನ್ನು ಕೇಳಿದ್ದರು. ಇನ್ನೂ ಆಶ್ಚರ್ಯದ ಸಂಗತಿಯೆಂದರೆ, ಸ್ಥಳೀಯ ಶಾಸಕರು (MLAs), ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರಕ್ಕಾಗಿ 700 ಉಚಿತ ಟಿಕೆಟ್ಗಳನ್ನು ಕೂಡ ಬೇಡಿಕೆ ಇಟ್ಟಿದ್ದರು.
ಹೀಗಾಗಿ 15 ಶೇಕಡಾ ಮಿತಿಯ ಹೊರತಾಗಿ ಸುಮಾರು 10,000 ಹೆಚ್ಚುವರಿ ಟಿಕೆಟ್ಗಳನ್ನು ಅವರು ಕೇಳುತ್ತಿದ್ದರು. ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ಆತಿಥ್ಯ ಸಂಸ್ಥೆ ಬಿಸಿಸಿಐ ಆಗಿರುವುದರಿಂದ, ಐಪಿಎಲ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅನುಮತಿಗಿಂತ ಹೆಚ್ಚು ಟಿಕೆಟ್ಗಳನ್ನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಕರ್ನಾಟಕದಿಂದ ಪಂದ್ಯಗಳನ್ನು ಸ್ಥಳಾಂತರಿಸುವ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸೈಕಿಯಾ ಹೇಳಿದ್ದಾರೆ.